ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಏ.23ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿನಾಯಕ ನಗರ, 100 ಅಡಿ ರಸ್ತೆಯಲ್ಲಿರುವ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಬೆಂಗಳೂರು ವಾಸವಿ ಪೀಠಾಧೀಶ ಸಚ್ಚಿದಾನಂದ ಸರಸ್ವತಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, 25ರ ಸೋಮವಾರ ಬೆಳಿಗ್ಗೆ 5:10ಕ್ಕೆ ಪ್ರಾಣ ಪ್ರತಿಷ್ಠಾಪನೆ, ನಿರೀಕ್ಷೆ, ಬಲಿಪ್ರಧಾನ, ದೇವತಾ ನಾಮಕರಣ, ಮೂಲ ಮಂತ್ರ ಹೋಮ, ಕಲಾತತ್ತ್ವ ಹೋಮ, ವಾಹನ ಆಯುಧ ಮಂತ್ರ ಹೋಮ, ಯೂಪ ಸ್ಥಾಪನೆ, ಸ್ತೂಪಿಕಲಶ ಸ್ಥಾಪನೆ, ಯೂಪ ನ್ಯಾಸ, ಕುಂಭಾಭಿಷೇಕ, ವಿಮಾನ ಗೋಪುರ ಕಳಶ ಕುಂಭಾಭಿಷೇಕ ಹಾಗೂ ಮಧ್ಯಾಹ್ನ 12:30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಜರುಗಲಿದೆ. 1:30ಕ್ಕೆ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ವಿವರಿಸಿದರು.
ಸಂಜೆ 6 ಗಂಟೆಗೆ ವಾಸವಿ ಪೀಠಾಧೀಶ ಸಚ್ಚಿದಾನಂದ ಸರಸ್ವತಿ ಶ್ರೀಗಳ ದಿವ್ಯ ಸಾನಿಧ್ಯ ನಡೆಯಲಿರುವ ಸಮಾರಂಭದಲ್ಲಿ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿಸುವರು.
ಈ ಸಂದರ್ಭದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡರು, ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ, ಸೂಡಾ ಅಧ್ಯಕ್ಷ ಎನ್. ಜೆ. ನಾಗರಾಜ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪಾಲಿಕೆ ಸದಸ್ಯೆ ಆರತಿ ಪ್ರಕಾಶ್, ರಾಜ್ಯ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶ್ರೇಷ್ಠಿ, ಉಪಾಧ್ಯಕ್ಷರಾದ ಆರ್.ಬಿ. ಮಂಜುನಾಥ್, ಡಿ.ಎಲ್. ಮಂಜುನಾತ್, ಕಾರ್ಯದರ್ಶಿ ಎಸ್.ವಿ. ನಾಗೇಂದ್ರ, ಸಹಕಾರ್ಯದರ್ಶಿ ವೈ. ಗೋಪಾಲಕೃಷ್ಣ ಗುಪ್ತ, ಖಜಾಂಚಿ ಡಿ.ಹೆಚ್. ಸುಬ್ರಮಣ್ಯ, ಗರ್ಭಗುಡಿ ಸಮಿತಿ ಛೇರ್ಮನ್ ಟಿ.ವಿ. ಶ್ರೀನಿವಾಸ ಶ್ರೇಷ್ಠಿ, ಎಂ. ಮುರುಳಿ, ಡಿ.ಎಸ್. ನಟರಾಜ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post