ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ಹತ್ತಾರು ದಿನಗಳಿಂದ ಜಿಲ್ಲೆಯಾದ್ಯಂತ ಬಿದ್ಧ ಬಾರೀ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆಹಾನಿಯನ್ನು ನಿಯಂತ್ರಿಸಿ, ಜನಜೀವನ ಸುಗಮವಾಗಿರುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ DC Selvamani ಹೇಳಿದರು.
ಸುದ್ದಿಗೋಷ್ಠಿಲ್ಲಿಂದು ಮಾತನಾಡಿದ ಅವರು, ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿ ಮನೆ, ಕೃಷಿ ಭೂಮಿ, ಜನ-ಜಾನುವಾರುಗಳ ಜೀವಹಾನಿಯಾಗಿರುವ, ಅವುಗಳ ನಿಯಂತ್ರಣಕ್ಕಾಗಿ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಸೊರಬ ಮತ್ತು ಹೊಸನಗರ ತಾಲೂಕುಗಳಲ್ಲಿ ತಲಾ ಒಂದೊಂದು ಜೀವಹಾನಿ ಪ್ರಕರಣ, ಜಿಲ್ಲೆಯಲ್ಲಿ 08ಜಾನುವಾರು ಸಾವು ಪ್ರಕರಣಗಳು ದಾಖಲಾಗಿದ್ದು, ಸಂತ್ರಸ್ಥರಿಗೆ ಪರಿಹಾರ ಧನ ನೀಡಲಾಗಿದೆ ಎಂದರು.
ಆಸ್ತಿ-ಪಾಸ್ತಿ ನಾಶವಾಗಿರುವ ಕುಟುಂಬಗಳಿಗೆ ತಕ್ಷಣದ ಪರಿಹಾರಕ್ರಮವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪರಿಹಾರ ಧನ ದೊರೆಯದಿರುವ ಕುಟುಂಬಗಳಿಗೆ ಇಂದು ಸಂಜೆಯೊಳಗಾಗಿ ಸಹಾಯಧನ ವಿತರಿಸಲು ಕಂದಾಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈವರೆಗೆ 397ಮನೆಗಳು ಹಾನಿಗೊಳಗಾಗಿದ್ದು, ಅವುಗಳ ಪೈಕಿ 30ಮನೆಗಳು ಪೂರ್ಣಪ್ರಮಾಣದಲ್ಲಿ, 626ಮನೆಗಳು ಭಾಗಶಃ, 98ಮನೆಗಳು ತೀವ್ರತರಹದ ಹಾನಿಗೊಳಗಾಗಿವೆ. ಸುಮಾರು 774ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮತ್ತು ಮೆಕ್ಕೆಜೋಳದ ಬೆಳೆ ಹಾನಿಗೊಳಗಾಗಿವೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಆಗಿರುವ ಬೆಳೆಯ ಪೂರ್ಣ ಪ್ರಮಾಣದ ಮಾಹಿತಿ ಪಡೆದು, ನಷ್ಟದ ಪರಿಹಾರಧನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಲ್ಲದೇ 258ಕಿ.ಮೀ. ರಸ್ತೆ, 546ವಿದ್ಯುತ್ ಕಂಬಗಳು ಹಾಗೂ 06ಟ್ರಾನ್ಸ್ಫರ್ಮರ್ಗಳು, ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳು ನಾಶವಾಗಿವೆ ಎಂದರು.
ತುಂಗಾ ಮತ್ತು ಭದ್ರಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಿದೆ. ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ನೀರನ್ನು ಜಲಾಶಯದಿಂದ ಹೊರಬಿಡಲು ಸೂಚಿಸಲಾಗಿದೆ. ಭದ್ರಾ ಜಲಾಶಯದಿಂದ ಪ್ರಸ್ತುತ ಪ್ರತಿನಿತ್ಯ ಸುಮಾರು 45,000ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಪಾತ್ರದಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಅಲ್ಲದೇ ಈ ಭಾಗದ ಜನರ ಸುರಕ್ಷತೆಗಾಗಿ ಭದ್ರಾವತಿಯಲ್ಲಿ ಒಟ್ಟು 04 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 400 ಮಂದಿ ಸಂತ್ರಸ್ಥರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ತಾತ್ಕಾಲಿಕ ವಸತಿ, ಔಷಧ ಹಾಗೂ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಆಗುಂಬೆ ರಸ್ತೆಯಲ್ಲಿ ಭೂಕುಸಿತ, ಮರಗಳು ಧರೆಗುರುಳಿರುವ ಬಗ್ಗೆ ಮಾಹಿತಿಯಿದ್ದು, ಪ್ರಸಕ್ತ ಮಾಹೆಯ ಮಾಸಾಂತ್ಯದವರೆಗೆ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅಲ್ಲದೇ ಪರ್ಯಾಯ ರಸ್ತೆ ಸಂಚಾರಕ್ಕೆ ಮಾರ್ಗ ಸೂಚಿಸಲಾಗಿದೆ.
ಮಳೆಯಿಂದ ಜಿಲ್ಲೆಯ ಬೇರೆ-ಬೇರೆ ತಾಲೂಕುಗಳಲ್ಲಿ ಮರಗಳು ಉರುಳಿದ್ದಲ್ಲಿ ತೆರವುಗೊಳಿಸಲು ಸೂಚಿಸಲಾಗಿದೆ. ಅದಕ್ಕಾಗಿ ಅಗತ್ಯ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post