ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರಿಯಾದ ಆರೋಗ್ಯಕರ ಜೀವನಕ್ರಮದಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಸಲಹೆ ನೀಡಿದ್ದಾರೆ.
ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಆಸ್ಪತ್ರೆ, ವಿನ್ ಲೈಫ್, ಟಿಎಂಎಇ ಸೊಸೈಟಿ, ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಿಮ್ಸ್ ಆವರಣದಿಂದ ಮಧುಮೇಹ ಅರಿವು ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಧುಮೇಹಿಗಳಿದ್ದಾರೆ. ಕಾರಣ ನಮ್ಮ ಜೀವನಕ್ರಮ ಮತ್ತು ಆಹಾರ ಪದ್ಧತಿಯಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಕೌಟುಂಬಿಕ ವಾತಾವರಣ ಕಡಿಮೆಯಾಗುತ್ತಿದೆ. ಜಂಕ್ ಫುಡ್’ಗಳ ಸೇವನೆ ಹೆಚ್ಚಾಗಿದೆ. ನಿಯಮಿತ ವ್ಯಾಯಾಮ, ವಾಯುವಿಹಾರ, ಉತ್ತಮ ಆಹಾರ ಸೇವನೆಯಿಂದ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು. ಸಕ್ಕರೆ ಕಾಯಿಲೆ ಇದೆ ಎಂದಾಕ್ಷಣ ಅರ್ಧದಷ್ಟು ಜನ ಆತಂಕಕ್ಕೊಳಗಾಗುತ್ತಾರೆ. ಸಕ್ಕರೆ ಕಾಯಿಲೆ ಇದ್ದರೂ ಸಹ ಬದುಕನ್ನು ಗೆಲ್ಲುವ ಸುಲಭ ವಿಧಾನಗಳ ಕುರಿತು ಅರಿವು ಮೂಡಿಸುವುದೇ ಈ ಜಾಥಾದ ಉದ್ದೇಶ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಡಯಾಬಿಟೀಸ್ ಎನ್ನುವುದು ಎಲ್ಲರ ಮನೆಯ ಸಾಮಾನ್ಯ ಕಾಯಿಲೆಯಾಗಿದೆ. ಜೆನೆಟಿಕ್’ನಿಂದ ಬಿಪಿ, ಶುಗರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ. ಆದರೆ ಖಿನ್ನತೆಗೊಳಗಾಗದೆ ಹಸಿರು ತರಕಾರಿಗಳ ಸೇವನೆ, ನಿಯಮಿತ ವ್ಯಾಯಾಮದಿಂದ ಮಧುಮೇಹವನ್ನು ದೂರ ಇಡಬಹುದು ಎಂದರು.
ಅ.16ರ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಕುವೆಂಪು ರಂಗಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಧುಮೇಹದ ಕುರಿತು ಜನಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಇದರ ಅಂಗವಾಗಿ ಇಂದು ಪೂರ್ವಭಾವಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಸಿಮ್ಸ್ ಆವರಣದಿಂದ ಮಧುಮೇಹ ಅರಿವು ಜಾಥಾ ಆರಂಭವಾಗಿ ಗೋಪಿ ವೃತ್ತದವರೆಗೆ ಸಾಗಿತು. ಜಾಥಾದಲ್ಲಿ ಮಧುಮೇಹದ ಅರಿವು ಮೂಡಿಸುವ ಫಲಕಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಪೃಥ್ವಿ, ಡಾ. ಪುಷ್ಪಾ, ಡಾ. ಲಕ್ಷ್ಮೀನಾರಾಯಣ್, ಡಾ.ತೇಜಸ್ವಿ, ವಿವಿಧ ಆಸ್ಪತ್ರೆಗಳ ಸಿಬ್ಬಂದಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















