ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ (Ease of Living Index)ವನ್ನು ತಯಾರಿಸುವ ಸಲುವಾಗಿ ನಾಗರೀಕ ಅಭಿಪ್ರಾಯ ಸಂಗ್ರಹಣೆಯ ಸಮೀಕ್ಷೆ ಕಾರ್ಯವನ್ನು ಸ್ಮಾರ್ಟ್ ಸಿಟಿಯಿಂದ ಕೈಗೊಂಡಿದ್ದು, ನಗರದ ನಾಗರೀಕರು ಇದರಲ್ಲಿ ಪಾಲ್ಗೊಳ್ಳಬೇಕೆಂದು ಶಾಸಕ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು
ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಈ ಸಮೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸರ್ಕಾರವು ಕ್ಯೂ ಆರ್ ಕೋಡ್ ನೀಡಿದ್ದು, ಇದನ್ನು ಸ್ಕಾö್ಯನ್ ಮಾಡಿ ಹಾಗೂ https://eoj2022.org/ ಲಿಂಕ್ ಬಳಸಬಹುದು ಎಂದರು.
ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯವು ಸ್ಮಾರ್ಟ್ ಸಿಟಿ ಮಿಷನ್ ಮೂಲಕ ಈಸ್ ಆಫ್ ಲಿವಿಂಗ್ ಇಂಡೆಕ್ಸ್, ತಯಾರಿಸಲು ನಗರಗಳಿಗೆ ಸಂಬಂಧಿಸಿದಂತೆ ವಿವಿಧ ಶೀರ್ಷಿಕೆಗಳಡಿ ವಿವಿಧ ಇಲಾಖೆಗಳಡಿ ಇರುವ ಸೌಲಭ್ಯಗಳ ಪ್ರಗತಿ ಮೌಲ್ಯಮಾಪನ ಮಾಡಿ ಮುಖ್ಯ ನಗರಗಳ ಅಭಿವೃದ್ದಿ ಸೂಚ್ಯಂಕವನ್ನು 2018 ರಿಂದ ಸಿದ್ದಪಡಿಸಲಾಗುತ್ತಿದೆ. ಸುಲಿತ ಜೀವನ ನಿರ್ವಹಣೆಗೆ ಸೂಚ್ಯಂಕ ಇದು ಭಾರತ ವಸತಿ ಸರ್ಕಾರದ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯವು ಪ್ರಸ್ತಾಪಿತ ನಗರದಲ್ಲಿನ ನಾಗರೀಕರ ಜೀವನದ ಗುಣಮಟ್ಟ ಮೌಲ್ಯಮಾಪನ ಮಾಡಲು ಉಪಯೋಗಿಸುವ ಮಾನದಂಡವಾಗಿದೆ ಎಂದರು.
Also read: ಸತತವಾದ ಜಾಗೃತಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢ: ಆಯನೂರ್ ಮಂಜುನಾಥ
ಈ ಮೌಲ್ಯಮಾಪನವು ನಗರದ ಜನಜೀವನದ ಗುಣಮಟ್ಟ, ಆರ್ಥಿಕ ಸದೃಢತೆ, ಆರ್ಥಿಕ ಸಾಮರ್ಥ್ಯ ಮತ್ತು ಇದರ ಸುಸ್ಥಿರತೆಯನ್ನು ಅಳೆಯುವ ಸಾಧನವಾಗಿದೆ. ಜೊತೆಗೆ ನಗರದಲ್ಲಿ ಅನುಷ್ಟಾನಗೊಂಡಿರುವ ವಿವಿಧ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸುವಲ್ಲಿ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅರಿಯುವ ಅಳತೆಗೋಲು ಸಹ ಆಗಿದೆ. ಹೆಚ್ಚಾಗಿ ಈ ಸೂಚ್ಯಂಕದ ಆಧಾರದ ಮೇಲೆ ನಗರ ಯೋಜನೆಗಳ ನೀತಿ ನಿರೂಪಣೆ ಮತ್ತು ಕಾರ್ಯಕ್ರಮ ಯೋಜನೆಯನ್ನು ಸರ್ಕಾರವು ಕೈಗೊಳ್ಳುತ್ತದೆ. ಮುಖ್ಯವಾಗಿ ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿ ಕ್ರಮಗಳು, ಎಲ್ಲರಿಗೂ ಶುದ್ದ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಸಾರ್ವಜನಿಕ ಪಾರ್ಕ್’ಗಳು, ನಗರ ಹಸಿರೀಕರಣದ ವ್ಯವಸ್ಥೆಗಳು ಇತ್ಯಾದಿಗಳು ಗಣನೆಗೆ ಬರುತ್ತದೆ ಎಂದರು.
ಸುಮಾರು 13 ಇಲಾಖೆಗಳ ಮಾಹಿತಿಗಳು ಈ ಸೂಚ್ಯಂಕದ ತಯಾರಿಕೆಗೆ ಮುಖ್ಯವಾಗುತ್ತದೆ. ಶಿಕ್ಷಣ, ಆರೋಗ್ಯ, ವಸತಿ, ಘನತ್ಯಾಜ್ಯ ವಿಲೇವಾರಿ, ಸಾರಿಗೆ ವ್ಯವಸ್ಥೆ, ನಾಗರೀಕರ ಸುರಕ್ಷತೆ ಮತ್ತು ಭದ್ರತೆ, ಪರಿಸರ ಸಂರಕ್ಷಣ ಕ್ರಮಗಳು, ಮನೋರಂಜನೆ, ಆರ್ಥಿಕ ಅಭಿವೃದ್ದಿಯ ಮಟ್ಟ, ಲಭ್ಯವಿರುವ ಆರ್ಥಿಕ ಅಭಿವೃದ್ದಿಯ ಅವಕಾಶಗಳು, ಹಸಿರೀಕರಣಗೊಂಡ ಪ್ರದೇಶಗಳು ಮತ್ತು ಹಸರೀಕರಣ ಅಳವಡಿಸಿದ ಕಟ್ಟಡಗಳು, ಇಂಧನ ಬಳಕೆ, ನಗರವು ಸವಾಲಿನ ಸನ್ನಿವೇಶದಲ್ಲಿ ಚೇತರಿಸಿಕೊಳ್ಳುವಿಕೆಯ ಮಟ್ಟ ಇತ್ಯಾದಿಗಳು ಪ್ರಮುಖವಾಗಿವೆ. ವಿವಿಧ ಇಲಾಖೆಗಳಿಂದ ಈ ಮಾಹಿತಿಗಳನ್ನು ಈಗಾಗಲೇ ಅರ್ಬನ್ ಔಟ್ಕಮ್ ಫ್ರೇಮ್ ವರ್ಕ್ ಶೀರ್ಷಿಕೆಯಡಿ ಸ್ಮಾರ್ಟ್ ಸಿಟಿ/ಮಹಾನಗರಪಾಲಿಕೆ ವತಿಯಿಂದ ಸಂಗ್ರಹಿಸಲಾಗಿದೆ. ಮತ್ತು ಈ ಸೂಚ್ಯಂಕ ತಯಾರಿಸುವಾಗ ಶೇ.70 ರಷ್ಟು ಅಂಕಗಳು ಲಭ್ಯವಾಗುತ್ತವೆ ಎಂದರು.
ಸಿಟಿಜೆನ್ ಪರ್ಸೆಪ್ಶನ್ ಸರ್ವೇ ಮೂಲಕ ನಗರದ ನಾಗರೀಕರು ತಮ್ಮ ನಗರದಲ್ಲಿ ಲಭ್ಯ ಸೌಲಭ್ಯಗಳ ಬಗ್ಗೆ ದಾಖಲಿಸಲು ಅವಕಾಶ ಮಾಡಲಾಗಿದ್ದು, ಇದರಿಂದ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ತಯಾರಿಕೆಯಲ್ಲಿ ಶೇ.30 ಅಂಕಗಳು ಲಭ್ಯವಾಗುತ್ತದೆ. ಈ ಸೂಚ್ಯಂಕ ತಯಾರಿಕೆಗೆ ಪೂರಕವಾದ ಸಿಟಿಜೆನ್ ಪರ್ಸೆಪ್ಶನ್ ಸರ್ವೇ ಆನ್’ಲೈನ್ ಮತ್ತು ಆಫ್’ಲೈನ್ ವಿಧಾನದಲ್ಲಿ ಕೈಗೊಳ್ಳಲಾಗುತ್ತದೆ. ಒಟ್ಟಾರೆ ಸಮೀಕ್ಷೆಗೆ ಶೇ.30 ರಷ್ಟು ವೈಟೇಜ್ ನೀಡಲಾಗುತ್ತದೆ. ಪ್ರಸ್ತುತ ವಿವಿಧ ನಗರಗಳಲ್ಲಿ ಮತ್ತು ಎಲ್ಲಾ 100 ಸ್ಮಾರ್ಟ್ ಸಿಟಿಗಳಲ್ಲಿಯೂ ಸಿಟಿಜೆನ್ ಪರ್ಸೆಪ್ಶನ್ ಸರ್ವೇಯನ್ನು ಕೈಗೊಳ್ಳಲಾಗುತ್ತಿದ್ದು, ಸಮೀಕ್ಷೆಗಾಗಿ ಸರ್ಕಾರವು ಕ್ಯೂ ಆರ್ ಕೋಡ್ ನೀಡಿದೆ. ಇದನ್ನು ಸ್ಕ್ಯಾನ್ ಮಾಡಿ ಹಾಗೂ https://eoj2022.org ಲಿಂಕ್ ಬಳಸಿ ಮಾಡುವ ಮೂಲಕ ಸರ್ವೇ ಕಾರ್ಯ ಕೈಗೊಳ್ಳಬೇಕಿದೆ ಎಂದವರು ತಿಳಿಸಿದರು.
ಮಹಾನಗರಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ್, ಸ್ಮಾರ್ಟ್ ಸಿಟಿ ಎಂ.ಡಿ. ಚಿದಾನಂದ ವಟಾರೆ ಪಾಲ್ಗೊಂಡಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















