ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಸರ ಅಧ್ಯಯನ ಕೇಂದ್ರ, ಕ್ಯಾಟ್ಸ್ ಚಿತ್ರದುರ್ಗ, ಮೈಸೂರು ಹಾಗೂ ರೇಡಿಯೋ ಶಿವಮೊಗ್ಗದ ಸಹಯೋಗದೊಂದಿಗೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಾನುಲಿಯಲ್ಲಿ ನಡೆದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ ನ ಮೊದಲ ಬ್ಯಾಚ್ನ ಸಂಪರ್ಕ ತರಗತಿಗಳು ಹಾಗೂ ಪರೀಕ್ಷೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಗದ್ದೆಯ ಪರಿಸರ ಅಧ್ಯಯನ ಕೇಂದ್ರದಲ್ಲಿ ನಡೆದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ ನ ಮೊದಲ ಬ್ಯಾಚ್ ನ ವಸತಿ ಸಹಿತ ಸಂಪರ್ಕ ತರಗತಿ, ಪರೀಕ್ಷೆಯಲ್ಲಿ ಕಲಿಕಾರ್ಥಿಗಳು ಭಾಗವಹಿಸಿದ್ದರು. 20 ಅವಧಿಯ ಬಾನುಲಿ ತರಗತಿಗಳ ಮುಖಾಂತರ ನಡೆದಿದ್ದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ನ ಬೌದ್ಧಿಕ ಹಾಗೂ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗಿತ್ತು. ಇದರ ಭಾಗವಾಗಿ ಈ ಸಂಪರ್ಕ ತರಗತಿಗಳು ನಡೆದವು.
ಸುಂದರ ಪರಿಸರದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಈ ಸಂಪರ್ಕ ತರಗತಿಗಳು ಜರುಗಿದವು. ಮೂರು ದಿನಗಳ ಕಾಲ ನಡೆದ ಈ ಸಂಪರ್ಕ ತರಗತಿಗಳಲ್ಲಿ ಕಲಿಕಾರ್ಥಿಗಳಲ್ಲಿದ್ದ ಗೊಂದಲಗಳನ್ನು ಬಗೆಹರಿಸಲಾಯಿತು. ಪ್ರಾಯೋಗಿಕ ತರಗತಿಗಳ ಮುಖಾಂತರ ಕಲಿಕಾರ್ಥಿಗಳನ್ನು ಮಾನಸಿಕವಾಗಿ, ದೈಹಿಕವಾಗಿ ಸಿದ್ಧಗೊಳಿಸಲಾಯಿತು. ಪ್ರತಿದಿನ ಬೆಳಗ್ಗೆ 9:30ಕ್ಕೆ ತರಗತಿಗಳು ಆರಂಭವಾಗಿ ಅಗತ್ಯ ವಿರಾಮಗಳೊಂದಿಗೆ ರಾತ್ರಿ 9 ಗಂಟೆಯವರೆಗೂ ನಡೆದವು. ಇದರ ಜೊತೆಗೆ ಇದು ವಸತಿಸಹಿತ ಸಂಪರ್ಕ ತರಗತಿಯಾಗಿದ್ದರಿಂದ, ತಡರಾತ್ರಿಯವರೆಗೂ ಕಲಿಕಾರ್ಥಿಗಳ ನಡುವೆ, ಕಲಿಕಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ನಡುವೆ ಅನೌಪಚಾರಿಕ ಚರ್ಚೆ, ಸಂವಾದಗಳು ನಡೆಯುತ್ತಿದ್ದವು. ಹೀಗಾಗಿ ಸಂಪರ್ಕ ತರಗತಿಗಳು ಮತ್ತಷ್ಟು ಕಳೆಗಟ್ಟಿದವು. ಪರೀಕ್ಷೆಗಳು ಕೂಡಾ ಬೌದ್ಧಿಕ ಹಾಗೂ ಪ್ರಾಯೋಗಿಕ ಈ ಎರಡೂ ವಿಭಾಗದಲ್ಲಿ ನಡೆದವು.
ನಮಗೆ ಅಭಿನಯವೆಂದರೆ, ರಂಗಭೂಮಿ ಎಂದರೆ ಹೀಗೆ ಎಂದು ಇದ್ದ ಸಿದ್ಧಮಾದರಿಗಳನ್ನು ಒಡೆದು, ಮುಕ್ತವಾದ ಹೊಸ ಆಲೋಚನೆಗಳತ್ತ ಈ ತರಗತಿಗಳು ಕರೆದೊಯ್ದವು. ನಮ್ಮನ್ನು ಮನುಷ್ಯರನ್ನಾಗಿಸಿದ ಈ ತರಗತಿಗಳು ಬಹಳ ಉಪಕಾರಿಯಾದವು.
ವಿನಯ್ ಕುಮಾರ್, ಚಿತ್ರದುರ್ಗ, ಕಲಿಕಾರ್ಥಿಈ ಮುನ್ನವೂ ಕೂಡ ಅನೇಕ ನಾಟಕದಲ್ಲಿ ಅಭಿನಯಿಸಿದ್ದೇನೆ. ಆದರೆ, ನಟನೆಗೆ ಬೇಕಾದ ಮೂಲದ್ರವ್ಯಗಳು, ನಟ ಹಾಗೂ ಪಾತ್ರದ ನಡುವಣ ಇರಬೇಕಾದ ಅಂತರ, ನಮ್ಮ ಮನೋದೈಹಿಕ ಸಿದ್ಧತೆಗಳ ಬಗ್ಗೆ ವಿಶೇಷವಾದ ಚಿಂತನೆಗಳನ್ನು ನಮ್ಮಲ್ಲಿ ತುಂಬಿತು. ಮೌಲ್ಯಯುತ ಕೋರ್ಸ್ ನ ಭಾಗವಾಗಿದ್ದು ಸಂತೋಷ ನೀಡಿತು.
ಡಾ. ಸೀಮಾ, ದಂತ ಶಸ್ತ್ರಚಿಕಿತ್ಸಕಿ, ದಾವಣಗೆರೆ, ಕಲಿಕಾರ್ಥಿ.
ಮುಖ್ಯ ಸಂಪನ್ಮೂಲ ವ್ಯಕ್ತಿಯಾದ ಮೈಸೂರಿನ ಖ್ಯಾತ ರಂಗಕರ್ಮಿ ನಾ. ಶ್ರೀನಿವಾಸ್ (ಪಾಪು) ತರಗತಿಗಳನ್ನು ನಡೆಸಿಕೊಟ್ಟರು. ಸಹ ಸಂಪನ್ಮೂಲ ವ್ಯಕ್ತಿ, ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕರೂ ಆದ ಜಿ.ಎಲ್. ಜನಾರ್ದನ್ ಸಹಕರಿಸಿದರು. ಪರಿಸರ ಅಧ್ಯಯನ ಕೇಂದ್ರದ ಪ್ರಮುಖರೂ, ವಿಶ್ರಾಂತ ತಹಸೀಲ್ದಾರ್ ಚಂದ್ರಶೇಖರ್, ಯಶೋದಾ ಚಂದ್ರಶೇಖರ್ ಹಾಗೂ ಬಾನುಲಿಯ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ಭಾಗವಹಿಸಿದ್ದರು.
ವಿಶೇಷತೆಗಳು
- ಸಂಪರ್ಕ ತರಗತಿ ನಡೆದ ಸ್ಥಳದಲ್ಲಿದ್ದ ಪ್ರತಿಯೊಬ್ಬರೂ, ಹಾಜರಿದ್ದ ಸ್ಥಳೀಯರೂ, ಮಕ್ಕಳು ಎಲ್ಲರ ಹಸ್ತದ ಚಿತ್ರವನ್ನು ಬ್ಯಾನರ್ ನಲ್ಲಿ ದಾಖಲಿಸಿದ್ದು.
- ಮಲೆನಾಡಿನ ವಿಶೇಷ ಅಡುಗೆಗಳಾದ ಕಡುಬು, ತಂಬುಳಿ, ಸಾಸಿವೆ, ಅನಾನಸ್ ಗೊಜ್ಜು ಇತ್ಯಾದಿಗಳನ್ನು ದೂರದೂರಿನಿಂದ ಬಂದಿದ್ದ ಕಲಿಕಾರ್ಥಿಗಳಿಗೆ ಉಣಬಡಿಸಿದ್ದು
- ಮೊಬೈಲ್ ಸಂಪರ್ಕ ರಹಿತ ಸ್ಥಳದಲ್ಲಿ ತರಗತಿಗಳು ನಡೆದರೂ, ಯಾರೊಬ್ಬರಿಗೂ ಅದರ ಗೊಡವೆಯೇ ಇಲ್ಲದೇ ಭಾಗವಹಿಸಿದ್ದು.
- ಸಂಪರ್ಕ ತರಗತಿಯ ಕಲಿಕಾರ್ಥಿಗಳಲ್ಲದೇ, ಸ್ಥಳೀಯರೂ ಅವರ ಬಿಡುವಿನ ನಡುವೆ ತರಗತಿಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ್ದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post