ಭದ್ರಾವತಿ: ಮಹಿಳೆಯರು ಜೀವನದಲ್ಲಿ ಆದರ್ಶಯುತವದ ವೈಚಾರಿಕತೆಯನ್ನು ರೂಢಿಸಿಕೊಳ್ಳುವುದರಿಂದ ಸಮಜದಲ್ಲಿಯೂ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಸವಿತಾ ನಾಗಭೂಷಣ್ ಹೇಳಿದರು.
ಹಳೇನಗರದ ಬಸವೇಶ್ವರ ವೃತ್ತದ ಮಹಿಳಾ ಸೇವಾ ಸಮಾಜದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಧಾರವಾಹಿ, ಸಿನಿಮಾಗಳಲ್ಲಿ ಕಾಣುವ ವಸ್ತ್ರ, ವಡವೆ, ವೇಷ ಭೂಷಣಗಳನ್ನು ತಾವು ಧರಿಸಬೇಕೆಂಬ ಬಯಕೆ ಹೆಚ್ಚಿಸಿಕೊಂಡು ಪೂರೈಸುವಂತೆ ಯಜಮಾನರಲ್ಲಿ ಒತ್ತಾಯಿಸಿದಾಗ ಬೇಕಾಗುವ ಆರ್ಥಿಕತೆಯನ್ನು ಗಳಿಸಲು ವಾಮ ಮಾರ್ಗಕ್ಕೆ ಇಳಿಯುತ್ತಾರೆ. ಅದರಿಂದ ಸಮಾಜದಲ್ಲಿ ಭ್ರಷ್ಠಾಚಾರ ಹೆಚ್ಚಾಗಲಿದೆ. ಆದ್ದರಿಂದ ಮಹಿಳೆಯರು ಸರಳ ಜೀವನವನ್ನು ರೂಢಿಸಿಕೊಳ್ಳುವಂತಾಗಬೇಕು. ಭ್ರಷ್ಠಾಚಾರದ ಮಾರ್ಗಹಿಡಿಯದಂತೆ ತಾಕೀತು ಮಾಡುವುದರಿಂದ ಉತ್ತಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.
ದೇವರಿಗೆ ಭಕ್ತಿ ಮುಖ್ಯವೇ ಹೊರತು ಆಡಂಬರದ ಪೂಜೆಗಳಲ್ಲ, ಅದೇ ರೀತಿ ಉತ್ತಮ ಆದರ್ಶಯುತ ಜೀವನಕ್ಕೆ ಸರಳಜೀವನ ಮುಖ್ಯವೇ ಹೊರತು ಅಲಂಕಾರಯುತ ವೈಭವದ ಬದುಕು ಮುಖ್ಯವಲ್ಲ. ಹಸಿದವರಿಗೆ ಅನ್ನ ನೀಡುವಂತಾದಲ್ಲಿ ಅವರು ಸಂತೃಪ್ತರಾಗಿ ಸ್ಮರಿಸುತ್ತಾರೆ, ಮಹಿಳೆಯರು ತಮ್ಮಲ್ಲಿ ಲಭ್ಯವಿರುವ ಆಹಾರ, ವಸ್ತ್ರಗಳನ್ನು ಅಗತ್ಯವಿರುವ ಬಡಮಹಿಳೆ ಮತ್ತು ಬಡಮಕ್ಕಳಿಗೆ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ.
ಪ್ರವಾಸವೆಂಬುದು ಜ್ಞಾನಾರ್ಜನೆಗೆ ಸಹಕಾರಿ ಯಾಗಿದ್ದು, ಜೊತೆಗೆ ಓದುವ ಹವ್ಯಾಸವನ್ನೂ ರೂಢಿಸಿಕೊಂಡಾಗ ಜ್ಞಾನಭಂಡಾರ ಹೆಚ್ಚುತ್ತದೆ. ಈ ದಿಸೆಯಲ್ಲಿ ಮಹಿಳೆಯರು ಚಿಂತಿಸಿ ಅಂತಹ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಸಾರ್ಥಕ ಬದುಕು ರೂಪಿಸಿಕೊಳ್ಳಬಹುದಾಗಿದೆ ಎಂದರು.
ಸಂಘದ ಅಧ್ಯಕ್ಷರಾದ ಹೇಮಾವತಿ ವಿಶ್ವನಾಥ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಯಂತಿ ಶೇಠ್, ಶೋಭಾ ಗಂಗರಾಜ್, ಇಂದಿರಾ ರಮೇಶ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಚಂದ್ರಪ್ರಭ, ಸುಶೀಲ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post