ಕಲ್ಪ ಮೀಡಿಯಾ ಹೌಸ್ | ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ |
ಸಂಸ್ಕೃತಿ, ಸಂಸ್ಕಾರ, ಕಲಾ ಕ್ಷೇತ್ರಕ್ಕೆ ತುಳುನಾಡು #Tulunadu ಸಾವಿರಾರು ಸಾಧಕರನ್ನು ರಾಜ್ಯ ಹಾಗೂ ದೇಶಕ್ಕೆ ಕೊಡುಗೆಯನ್ನಾಗಿ ನೀಡಿದೆ. ಇಂತಹ ಸಾಲಿಗೆ ಸೇರುವ ಪುಟ್ಟ ಪ್ರತಿಭೆ ಕಾರ್ಕಳದ ರಿಷಿಕಾ ಕುಂದೇಶ್ವರ.
ಕರ್ನಾಟಕದ ಮನೆಮಾತಾಗಿರುವ ಜೀ ಕನ್ನಡದ #ZeeKannada ಜನಪ್ರಿಯ ರಿಯಾಲಿಟಿ ಶೋ `ಡ್ರಾಮಾ ಜೂನಿಯರ್ಸ್ ಸೀಸನ್ 5′ ರ ವೇದಿಕೆಯ ಮೇಲೆ ತನ್ನ ಅದ್ಭುತ ನಟನೆಯ ಮೂಲಕ ಕನ್ನಡಿಗರ ಹೃದಯ ಗೆದ್ದ ಪುಟ್ಟ ಪಟಾಕಿ ರಿಷಿಕಾ ಕುಂದೇಶ್ವರ. #RishikaKundeshwa
ಸುಮಾರು 30 ಸಾವಿರ ಮಕ್ಕಳ ನಡುವೆ ನಡೆದ ಸುದೀರ್ಘ ಪ್ರತಿಭಾ ಶೋಧದಲ್ಲಿ ಅಂತಿಮವಾಗಿ ವಿಜೇತೆಯಾಗಿ ಹೊರಹೊಮ್ಮಿದ ಈಕೆ, ಕರಾವಳಿಯ ಹೆಮ್ಮೆ ಮಾತ್ರವಲ್ಲ, ಇಡೀ ನಾಡಿನ ಕಣ್ಮಣಿ.
ಪ್ರತಿಭೆಯ ತವರು ಮನೆ
ಮೂಲತಃ ಕಾರ್ಕಳ ಕುಂದೇಶ್ವರದವರಾದ ರಿಷಿಕಾ, #Mangalore ಮಂಗಳೂರಿನ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಸುಪುತ್ರಿ. ಪ್ರಸ್ತುತ ಮಂಗಳೂರಿನ ಕದ್ರಿ ನಿವಾಸಿಯಾಗಿರುವ ಈಕೆ, ಅಶೋಕನಗರದ ಎಸ್ಡಿಎಂ ಶಾಲೆಯ ವಿದ್ಯಾರ್ಥಿನಿ. ತಂದೆಯ ಜೊತೆಗೇ ಯಕ್ಷಗಾನ, ನಾಟಕಗಳಲ್ಲಿ ಹೆಜ್ಜೆ ಹಾಕುತ್ತಾ ಬೆಳೆದ ರಿಷಿಕಾಗೆ ಕಲೆ ರಕ್ತಗತವಾಗಿ ಬಂದಿದೆ.
ವೇದಿಕೆಯ ಮೇಲೆ ವಿಶ್ವರೂಪ
ಐದು ತಿಂಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ ರಿಷಿಕಾ ತೋರಿದ ಪರ್ಫಾರ್ಮೆನ್ಸ್ ಸಾಮಾನ್ಯವಾದುದಲ್ಲ. ಕೇವಲ ನಟನೆಯಷ್ಟೇ ಅಲ್ಲದೆ:
- ರಂಗಭೂಮಿ ನಾಟಕ ಮತ್ತು ಕಾಮಿಡಿಯಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾಳೆ.
- ಯಕ್ಷಗಾನ ಮತ್ತು ದೊಡ್ಡಾಟದಲ್ಲಿ ವೀರಾವೇಶದ ಪ್ರದರ್ಶನ ನೀಡಿದ್ದಾಳೆ.
- ಹಗಲುವೇಷ ಮತ್ತು ಹರಿಕಥೆಯಂತಹ ಕಲಾಪ್ರಕಾರಗಳಲ್ಲಿ ಸೈ ಎನಿಸಿಕೊಂಡು ತನ್ನ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ
- ಬಾಲ ಯಕ್ಷಕೂಟ ಮತ್ತು ಯಕ್ಷಮಾಧ್ಯಮ ತಂಡದ ಸಕ್ರಿಯ ಸದಸ್ಯೆಯಾಗಿರುವ ಈಕೆ, ಈಗ ತೆಂಕುತಿಟ್ಟು ಯಕ್ಷಗಾನದ ಗತ್ತು-ಗತ್ತನ್ನು ಕರಗತ ಮಾಡಿಕೊಳ್ಳುತ್ತಿದ್ದಾಳೆ.
ಕಲೆ ಮತ್ತು ಸಾಧನೆಯ ಮಡಿಲು
- ರಿಷಿಕಾ ಕೇವಲ ನಟನೆಯಲ್ಲಿ ಮಾತ್ರವಲ್ಲ, ಗಾಯನ ಮತ್ತು ಸಾಹಿತ್ಯ ಪ್ರೇಮದಲ್ಲೂ ಅಪ್ರತಿಮಳು.
- ಹಾಡು ನೀ ಹಾಡು ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಕಪ್.
- ವಿಶ್ವಕನ್ನಡಿಗ ಮಕ್ಕಳ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
- ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಸಾಧನೆ.

ಈಕೆಯ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಆಳ್ವಾಸ್ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಗೌರವಿಸಿವೆ.
ಕಿರುತೆರೆಯಿಂದ ಬೆಳ್ಳಿತೆರೆಯವರೆಗೆ!
ಈಗಾಗಲೇ ಜೀ ಕನ್ನಡದ ಹಿಟ್ ಸೀರಿಯಲ್ `ಸೀತಾರಾಮ’ ಮೂಲಕ ಜನರ ಮನಗೆದ್ದಿರುವ ರಿಷಿಕಾ, ಈಗ ಸ್ಯಾಂಡಲ್’ವುಡ್ ಕಾಲಿಟ್ಟಿದ್ದಾಳೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಿರ್ದೇಶನ ಮತ್ತು ನಟನೆಯ ಬಹುನಿರೀಕ್ಷಿತ ಚಿತ್ರ ‘ಐ ಆಮ್ ಗಾಡ್ – ದಿ ಕ್ರೇಜಿ’ ಯಲ್ಲಿ ರಿಷಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವಳ ಯಶಸ್ಸಿನ ಪಯಣಕ್ಕೆ ಹಿಡಿದ ಕನ್ನಡಿ.
ಕುಂದೇಶ್ವರದ ಮಣ್ಣಿನ ಸೊಗಡು, ಮಂಗಳೂರಿನ ಸಂಸ್ಕಾರ ಹಾಗೂ ಅದ್ಭುತ ಕಲಾ ಪ್ರತಿಭೆಯ ಸಂಗಮವೇ ಈ ರಿಷಿಕಾ. ಮುಂದಿನ ದಿನಗಳಲ್ಲಿ ಈ ಬಾಲ ಪ್ರತಿಭೆ ಚಿತ್ರರಂಗದ ದ್ರುವತಾರೆಯಾಗಿ ಬೆಳಗಲಿ ಎನ್ನುವುದೇ ಕನ್ನಡಿಗರ ಆಶಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















