ನಿನಾಸಂ ಪ್ರತಿಭೆ, ರಂಗಭೂಮಿಯ ಎಲ್ಲಾ ಕಲಾಪ್ರಾಕಾರಗಳನ್ನು ಕರಗತ ಮಾಡಿಕೊಂಡಿದ್ದ ಕಲಾವಿದ ಅನಿಲ್ ತಿಪಟೂರು ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರು ಎಳೆದಿದ್ದಾರೆ.
ನನಗಿಂತ ಮೂರ್ ನಾಲ್ಕು ವರ್ಷ ಹಿರಿಯನಾದ ಅನಿಲ್ ಹೈಸ್ಕೂಲ್ ಗೆಳೆತನ. ಅವರ ಅಣ್ಣ ಅಶೋಕ ನನ್ನ ಕ್ರಿಕೆಟ್ ಮಿತ್ರ. ಹೈಸ್ಕೂಲ್ ನಂತರ ಕಾಲೇಜು ದಿನಗಳು ಮುಗಿದರೂ, ತಿಪಟೂರಿಗೆ ನಾ ಹೋದಾಗಲೆಲ್ಲಾ ಆವರ ಟೀಂನ ಅತಿಥಿ ನಾನು. ಅನಿಲ್ ತೋಟದಲ್ಲಿ ಹೊಸ ವರ್ಷಗಳ ಆಚರಿಸಿದ್ದು ಇದೆ. ನಟ ಅಚ್ಚುತ್ ಕುಮಾರ್, ಧರಣೇಂದ್ರ ಮೊದಲಾದವರು ರಂಗಭೂಮಿ ಸಹಪಾಠಿಗಳು.
ಒಮ್ಮೆ 2002ರಲ್ಲಿ ಹೊಸನಗರದ ವಿದ್ಯಾಸಂಘ ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ಈತನದ್ದೇ ಲೈಟಿಂಗ್ ವ್ಯವಸ್ಥೆ. ನಾಟಕ, ರಂಗಭೂಮಿಯ ಗೀಳಿದ್ದ ಅನಿಲ್, ಹೆಗ್ಗೋಡಿನ ನಿನಾಸಂ ಮೂಲಕ ರಂಗಭೂಮಿ ಕ್ಷೇತ್ರದ ಜಾಡು ತುಳಿದರು. ಈಗಿನ ಹೆಸರಾಂತ ನಟ ದರ್ಶನ್ ಸಹ ರಂಗ ಸಹಪಾಠಿ.
ಮುಂದೆ, ತಿಪಟೂರು ತೊರೆದು ಬೆಂಗಳೂರಿನಲ್ಲೆ ವಾಸ. ದೂರದರ್ಶನ/ನಾಟಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಅನಾವರಣ. ಖ್ಯಾತ ನಿರ್ದೇಶಕ ಟಿ.ಎಸ್. ಸೀತಾರಾಂ ಸೇರಿದಂತೆ ಹಲವು ನಿರ್ದೇಶಕರ ಕೈಯಲ್ಲು ಪಳಗುವ ಅವಕಾಶ. ಒರಟು ದನಿ ಆದರೂ ಮೃದು ಹೃದಯಿ. ಪಾತ್ರಕ್ಕೆ ತಕ್ಕಂತೆ ನೈಜ್ಯ ಅಭಿನಯ ನೀಡಿದ ಪರಿಣಾಮ ರಾಷ್ಟ್ರ ಪ್ರಶಸ್ತಿಗೆ ಭಾಜನರಾದರು.
ಆದರೆ, ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ವಾರ್ತೆ ಬರಸಿಡಿಲಿನಂತೆ ರಂಗಕರ್ಮಿಗಳನ್ನು ಆವರಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಆತನ ಸಾವಿನ ಸುದ್ದಿಯೇ ಈಗಲೂ ಹರಿದಾಡುತ್ತಿದೆ. ಕಡೆ ಗಳಿಗೆಯಲ್ಲಿ ಆತನ ಮಿತ್ರ ನಟ ದರ್ಶನ್ ಈತನ ನೆರವಿಗೆ ನಿಂತರಂತೆ.
ಅದೇನೆ ಇರಲಿ, ಸಾಮಾನ್ಯ ವರ್ಗದಿಂದ ಪ್ರತಿಭೆಯ ಮೇರು ಪರ್ವತ ಏರಿದ ಮಿತ್ರ ಅನಿಲ್ ತಿಪಟೂರು ಇನ್ನಿಲ್ಲ….ಎಂಬ ಸುದ್ದಿ ನನ್ನನ್ನು ಸೇರಿದಂತೆ ಅದೆಷ್ಟೋ ಕಲಾಸಕ್ತರಿಗೆ ನುಂಗಲಾರದ ತುತ್ತಾಗಿದೆ ಎಂದರೇ ಅದು ಅತಿಶಯೋಕ್ತಿ ಆಗದು..
Discussion about this post