ಶ್ರೀಯುತ ಪ್ರಕಾಶ್ ಅಮ್ಮಣ್ಣಾಯ ಅವರ ‘ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ’ ಲೇಖನ ಓದಿದೆ. ಕಲ್ಪ ನ್ಯೂಸ್’ಗೆ ಧನ್ಯವಾದಗಳು.
ನಾನು ಜ್ಯೋತಿಷಿಯಲ್ಲ. ಗ್ರಹ, ಕುಜ, ಕೇತು ಸ್ಥಾನ ಮುಂತಾದವುಗಳು ನನಗೆ ಖಂಡಿತವಾಗಿಯೂ ಅರ್ಥವಾಗುವುದಿಲ್ಲ. ಆದರೆ, ನಾನೊಬ್ಬ ಸಮ್ಮೋಹಿನಿ ತಜ್ಞ. ಒಬ್ಬ ವ್ಯಕ್ತಿಯನ್ನು ಸಮ್ಮೋಹನಕ್ಕೆ ಒಳಪಡಿಸಿ, ಸುಪ್ತ ಮನಸ್ಸಿನ ಮುಖಾಂತರ ಜಗತ್ತಿನ ಯಾರದ್ದೇ, ಯಾವುದೇ ವಿಷಯವನ್ನು ಕಲೆಹಾಕಬಲ್ಲ ಅಪರೂಪದ ವಿದ್ಯೆಯನ್ನು ನನ್ನ ಗುರುಗಳಾದ ಶ್ರೀಶ್ರೀ ರಾಮಚಂದ್ರ ಗುರೂಜಿಯವರು ನನಗೆ ಕಲಿಸಿಕೊಟ್ಟಿದ್ದಾರೆ.
ಕೆಲವು ತಿಂಗಳ ಹಿಂದೆ ನನಗೆ ಆದ ಅನುಭವಕ್ಕೂ, ಪ್ರಕಾಶ್ ಅಮ್ಮಣ್ಣಾಯ ಅವರ ಲೇಖನದ ಉಲ್ಲೇಖಕ್ಕೂ ನೇರಾನೇರ ಸಂಬಂಧ ಇರುವುದರಿಂದ ನಾನು ಇದನ್ನು ಹೇಳಲೇಬೇಕು.
Also Read: ಜಾತಕ ವಿಮರ್ಷೆ: ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ
https://kalpa.news/horoscope-analysis-particularly-divinatory-after-modis-demise-is-certain-prakash-ammannaya-article/
ಸಂಭವಾಮಿ ಯುಗೇ ಯುಗೇ ಎನ್ನುವ ವಾಸುದೇವ ಕೃಷ್ಣನ ಮಾತುಗಳು ನಿಜಕ್ಕೂ ಸತ್ಯ. ಅಮ್ಮಣ್ಣಾಯ ಅವರು ಮೋದಿಯ ಈ ಜನುಮ ಮುಗಿದ ನಂತರ ಪರಮಾತ್ಮನ ಸಾಯುಜ್ಯವನ್ನು ಪಡೆಯುತ್ತಾರೆ ಎಂದು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ಅಲ್ಲಿಗೆ, ಮೋದಿ ಒಬ್ಬ ಮಹಾಪುರುಷನೇ ಸರಿ. ಯಾಕೆಂದರೆ ಮಹಾಪುರುಷರು, ಸಾಧಕರು ಮಾತ್ರ ಮೋಕ್ಷವನ್ನು ಪಡೆಯಬಲ್ಲರು.
ಈಗ ನನ್ನ ಅನುಭವಕ್ಕೆ ಬರೋಣ. ಸಮ್ಮೋಹಿನಿ ವಿದ್ಯೆಯಲ್ಲಿ ಆತ್ಮ ಸಂಭಾಷಣೆ ಸಾಧ್ಯವಿದೆ. ಹೀಗಾಗಿ, ಕೆಲವು ತಿಂಗಳ ಹಿಂದೆ ಸಮ್ಮೋಹಿನಿಯಲ್ಲಿ ವಿಜಯನಗರದ ಸಾಮ್ರಾಟ ದೊರೆ ಶ್ರೀಕೃಷ್ಣದೇವರಾಯರ ಆತ್ಮವನ್ನು ಕುತೂಹಲಕ್ಕಾಗಿ ಕರೆಸಿದೆನು. ಅವರ ಆತ್ಮ ಅತ್ಯಂತ ಪ್ರಖರವಾಗಿದ್ದು, ಉನ್ನತ ದೈವೀ ಲೋಕದಲ್ಲಿದ್ದಾರೆ.
ಅವರನ್ನು ಕೇಳಿದಾಗ ಗುರುಗಳ ಅಪ್ಪಣೆಯಂತೆ ಧರ್ಮ ರಕ್ಷಣೆಗಾಗಿ ಅವತಾರವೆತ್ತಿ ಕೃಷ್ಣದೇವರಾಯರಾಗಿ ಸಾಮ್ರಾಜ್ಯವನ್ನು ನಿರ್ಮಿಸಿ, ವೈಭವೋಪೇತವಾಗಿ ಆಡಳಿತ ನಡೆಸಿ, ಹಿಂದೂ ಧರ್ಮವನ್ನು, ದೇಶವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದು, ಮರಣದ ನಂತರ ಅವರ ಆತ್ಮ ನೇರವಾಗಿ ಮುಕ್ತಿ ಪಡೆದಿದೆ. ಮತ್ತೆ ಅವರು ಹುಟ್ಟಿಲ್ಲ. ಬದಲಾಗಿ ಉನ್ನತ ಲೋಕದಲ್ಲಿಯೇ ಇದ್ದಾರೆ.
ಅಲ್ಲಿ ನನಗೆ ಅರ್ಥವಾಗಿದ್ದು ಏನೆಂದರೆ, ದೈವೀ ಪುರುಷರು ಮನುಕುಲದ ಉದ್ದಾರಕ್ಕಾಗಿ, ಧರ್ಮಕ್ಕೆ ಧಕ್ಕೆಯಾದಾಗ ಆಗಾಗ್ಗೆ ಭೂಮಿಯ ಮೇಲೆ ಅವತರಿಸುವರು.
ಮುಖ್ಯವಾದ ವಿಷಯವೇನೆಂದರೆ, ಹೀಗೆ ಅವತರಿಸುವವರು ಸನ್ಯಾಸಿಗಳೋ, ಸ್ವಾಮಿಗಳೋ, ಮಠಾಧಿಪತಿಗಳೋ, ಆಧ್ಯಾತ್ಮ ಗುರುಗಳೋ ಆಗಬೇಕೆಂದೇನಿಲ್ಲ. ಅವರು ರಾಜ್ಯ-ದೇಶವನ್ನಾಳುವ ರಾಜಕಾರಣಿಗಳೂ ಸಹ ಆಗಿ ಜನಿಸಬಹುದು, ರಾಜನಾಗಿ ಜನಿಸಬಹುದು. ಹಾಗೆ ಬಂದವರು ತಮ್ಮ ಕೆಲಸವಾದೊಡನೆ ಮತ್ತೊಂದು ಜನ್ಮದ ಗೊಡವೆಯಿಲ್ಲದೇ, ಎಲ್ಲಿಂದ ಬಂದರೋ ಅಲ್ಲಿಗೇ ಹೋಗುವರು.
ಹಾಗಾಗಿ, ಅಮ್ಮಣ್ಣಾಯ ಅವರು ಬರೆದ ವಿಚಾರ ನಿಜವಾಗಿಯೂ ಸತ್ಯ. ಅದನ್ನು ಅನೇಕ ಪ್ರಯೋಗಗಳ ಮೂಲಕ ನಾನು ಮನಗಂಡಿದ್ದೇನೆ. ನಮ್ಮಿಬ್ಬರ ವಿದ್ಯೆಗಳು ಬೇರೆಯದೇ ಆಗಿರಬಹುದು. ಆದರೆ, ಅದರ ನಿರ್ಧಿಷ್ಠ ಗುರಿ ಒಂದೇ ಆಗಿದೆ ಎಂಬುದು ಮಾತ್ರ ಸತ್ಯ.
ಲೇಖನ: ಎಚ್.ಎಸ್. ವೇಣುಗೋಪಾಲ್
ಸಮ್ಮೋಹಿನಿ ತಜ್ಞ ಹಾಗೂ ಪೂರ್ವಜನ್ಮ ಚಿಕಿತ್ಸಕರು
ಬೆಂಗಳೂರು
Discussion about this post