ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಅಮ್ಫಾನ್ ಚಂಡಮಾರುತದಿಂದ ಎದುರಾಗಬಹುದಾದ ಅಪಾಯದ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯಗಳ ರಾಜ್ಯಾಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳ ಜೊತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ರವರು ವೀಡಿಯೋ ಸಂವಾದ ನಡೆಸಿದರು.
ಪ್ರಸ್ತುತ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಅಮ್ಫಾನ್ ಚಂಡಮಾರುತದಿಂದ ಎದುರಾಗಬಹುದಾದ ಅಪಾಯಗಳು ಮತ್ತು ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳು ನಿರ್ವಹಿಸಬೇಕಾದ ಜವಾಬ್ದಾರಿ ಮತ್ತು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಂವಾದ ನಡೆಸಿದರು.
ಅಮ್ಫಾನ್ ಚಂಡಮಾರುತದ ಸಂದರ್ಭದಲ್ಲಿ ತೊಂದರೆಗೊಳಗಾಗುವ ನಾಗರಿಕರಿಗೆ ಅವಶ್ಯ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪ್ರತಿ ರಾಜ್ಯದಲ್ಲೂ ತುರ್ತಾಗಿ ಕಾಲ್ ಸೆಂಟರ್ ಪ್ರಾರಂಭಿಸುವುದು. ರಾಜ್ಯಗಳಲ್ಲಿ ಪ್ರಮುಖರ ತಂಡ ರಚಿಸಿ, ಚಂಡಮಾರುತದ ಕುರಿತಂತೆ ಜನ ಜಾಗೃತಿಗೆ ಮುಂದಾಗುವಂತೆ ತಕ್ಷಣ ಕಾರ್ಯಪ್ರವೃತ್ತರಾಗಲು ಮಾನ್ಯ ರಾಷ್ಟ್ರೀಯ ಅಧ್ಯಕ್ಷರು ಸಂವಾದದಲ್ಲಿ ಸೂಚನೆ ನೀಡಿದರು. ಇದೇ ವೇಳೆ ಎಲ್ಲ ರಾಜ್ಯದ ಕರಾವಳಿ ಭಾಗದ ಜನರಲ್ಲಿ ಚಂಡಮಾರುತದ ಅಪಾಯ ಕುರಿತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುವಂತೆಯೂ ಮಾನ್ಯ ರಾಷ್ಟ್ರೀಯ ಅಧ್ಯಕ್ಷರು ವೀಡಿಯೋ ಸಮಾಲೋಚನೆಯಲ್ಲಿ ಭಾಗವಹಿಸಿದ್ದ ಎಲ್ಲ ರಾಜ್ಯಾಧ್ಯಕ್ಷರುಗಳು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ರಾಜ್ಯ ಘಟಕದ ಪರವಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದರು. ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ರಾಜ್ಯದಲ್ಲಿ ಶೀಘ್ರವಾಗಿ ಪ್ರಮುಖರ ತಂಡ ರಚಿಸುವುದು ಮತ್ತು ಚಂಡಮಾರುತದ ಕುರಿತು ಸಮರ್ಪಕ ಮಾಹಿತಿ ಒದಗಿಸುವ ಹಿನ್ನೆಲೆಯಲ್ಲಿ ಕಾಲ್ ಸೆಂಟರ್ಗೆ ಚಾಲನೆ ನೀಡುವುದಾಗಿ ಸಂವಾದದಲ್ಲಿ ತಿಳಿಸಿದರು.
(ವರದಿ: ಡಿ.ಎಲ್. ಹರೀಶ್)
Get in Touch With Us info@kalpa.news Whatsapp: 9481252093
Discussion about this post