ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ದಾಸ ಸಾಹಿತ್ಯ ಪ್ರಚಾರ ಮಾಧ್ಯಮ ಶ್ರೀ ಶ್ರೀನಿವಾಸ ಉತ್ಸವ ಬಳಗದಿಂದ ಇದೇ ನ.26 ಶನಿವಾರದಂದು ಸಂಜೆ 5ರಿಂದ ಶ್ರೀ ಶ್ರೀನಿವಾಸ ಉತ್ಸವ ಬಳಗದ 100ನೇ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯ ಆಟದ ಮೈದಾನದಲ್ಲಿ ಸ್ಥಳೀಯ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಮತ್ತು ಹೆಚ್.ಎಸ್.ಆರ್. ಬಡಾವಣೆ, ಸಾಂಸ್ಕೃತಿಕ ಅಕಾಡಮಿ(ರಿ)ಯವರ ೧೩ನೇ ವರ್ಷದ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಬಾರೋ ಮನೆಗೆ ಗೋವಿಂದಾ…
‘ಬಾರೋ ಮನೆಗೆ ಗೋವಿಂದ’ ಎಂಬ ಶೀರ್ಷಿಕೆಯಿಂದ ಶ್ರೀ ಶ್ರೀನಿವಾಸ ಉತ್ಸವ ಬಳಗವು 2012ರಲ್ಲಿ ನಾಡಿನದ್ಯಂತ ಅಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಸಂಗೀತಗಳನ್ನು ಪಸರಿಸುವ ಕ್ಯಂಕರ್ಯದ ಧ್ಯೇಯಯಿಂದ ಉದಯವಾಯಿತು. ಆಂದಿನಿಂದ ಇಂದಿನ ಕಾಲಘಟ್ಟದವರೆಗೆ ಉತ್ಸವ ಬಳಗವು ಹರಿದಾಸ ಸಾಹಿತ್ಯ ಪ್ರಚಾರ ಹಾಗೂ ಆದಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಆಭಿಮಾನಿಗಳ ಹಾಗೂ ಹಿತೈಷಿಗಳ ಸಹಕಾರದಿಂದ ಬಹುಯಶಸ್ವಿಯಾಗಿ ನಡೆಸುವ ಸೌಭಾಗ್ಯ ಇವರದ್ದಾಗಿದೆ. ಪ್ರತೀ ವರ್ಷವೂ ದಾಸಶ್ರೇಷ್ಠ ಶ್ರೀ ಪುರಂದರದಾಸರ ಪುಣ್ಯದಿನದ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ನಡೆಯುವ ಸಂಗೀತ ವಿದ್ವಾಂಸರುಗಳ ಉಪನ್ಯಾಸಗಳು ದಾಸವಾಣಿ, ಹರಿದಾಸ ಗೋಷ್ಠಿ, ಭಜನೆ, ಪ್ರತಿಭಾನ್ವಿತ ಗಣ್ಯರಿಗೆ ‘ಹರಿದಾಸ ಆನುಗ್ರಹ’ ಪ್ರಶಸ್ತಿ ಸಮಾರಂಭಗಳು ನಾಡಿನಾದ್ಯಂತ ಜನಪ್ರಿಯವಾಗಿವೆ.
ದಾಸ ಸಾಹಿತ್ಯ ಪ್ರಚಾರವಲ್ಲದೇ ಈ ಉತ್ಸವ ಬಳಗವು ವೈಭವೋಪೇತವಾಗಿ ದೇಶದ ಉದ್ದಗಲಕ್ಕೂ ನಡೆಸುವ ಕಾರ್ಯಕ್ರಮ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಊಂಜಲೋತ್ಸವ’. ತಿರುಮಲೆಯಲ್ಲಿ ಸಾಂಪ್ರದಾಯಕವಾಗಿ ಮತ್ತು ವಿಧಿವತ್ತಾಗಿ ನಡೆಯುವ ಎರಡು ವರ್ಣರಂಜಿತ ಉತ್ಸವಗಳನ್ನು ಸಂದರ್ಭಕ್ಕೆ ಸೂಕ್ತವಾದ ದಾಸರ ಪದಗಳು, ದೇವರ ನಾಮಗಳನ್ನು ಆಳವಡಿಸಿಕೊಂಡು ಪ್ರಸ್ತುತಗೊಳಿಸುವ ಈ ಬಳಗದ ಕಾರ್ಯಕ್ರಮ ಭಕ್ತಜನರ ಮನಸೂರೆಗೊಂಡಿದೆ.
Also read: ಸರಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಡಾ. ಧನಂಜಯ ಸರ್ಜಿ ಚಾಲನೆ
ಶ್ರೀನಿವಾಸ ಬಳಗವು ನಾಡಿನ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ‘ಶ್ರೀ ಪುರಂದರದಾಸರ’ ಹತ್ತೊಂಬತ್ತು ಆಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ಶ್ರೀಮದ್ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆನುಗ್ರಹದಿಂದ ಬೆಂಗಳೂರು ನಗರದಲ್ಲಿರುವ ಉತ್ತರಾದಿ ಮಠದ ಶ್ರೀದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಅವರಣದಲ್ಲಿ 2020ರಲ್ಲಿ ನಾಡಿಗೆ ಈ ಬಳಗದ ವತಿಯಿಂದ ಸಮರ್ಪಣೆ ಮಾಡಲಾಯಿತು. ಈ ಮಹತ್ತರವಾದ ಕಾರ್ಯವನ್ನು ಕಾರ್ಯರೂಪಕ್ಕೆ ತಂದ ಹೆಮ್ಮೆ ಈ ಬಳಗಕ್ಕೆ ಸಲ್ಲುತ್ತದೆ.
ಇಂತಹ ಹೃದಯವನ್ನು ಅರಳಿಸುವ ಸಾಹಿತ್ಯವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು, ವೈದಿಕ ಪರಂಪರೆಯಲ್ಲಿರುವ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಾತ್ವಿಕ ಮಾರ್ಗದಲ್ಲಿ ನಡೆಯುತ್ತ ಶ್ರೀನಿವಾಸನ ಅನುಗ್ರಹಕ್ಕೆ ಪಾತ್ರರಾಗಿ ಶ್ರೀ ಶ್ರೀನಿವಾಸ ಉತ್ಸವ ಬಳಗದ ಪ್ರಮುಖ ರೂವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸನ್ಮಾನ್ಯ ಶ್ರೀ ಟಿ. ವಾದಿರಾಜರವರು ಈಗಾಗಲೇ ‘ವೇದರತ್ನ’ ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ‘ಶ್ರೀ ಶ್ರೀನಿವಾಸ ಉತ್ಸವ ಬಳಗ (ರಿ) ದಾಸಸಾಹಿತ್ಯ ಪ್ರಚಾರ ಮಾಧ್ಯಮ ಸಂಘಟನೆಯ ಮೂಲಕ ‘ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ’ವನ್ನು ಮಾಡುತ್ತ ಜನಹಿತಕಾರ್ಯ ಮಾಡುತ್ತಿರುವುದು ತುಂಬಾ ಶ್ಲಾಘನೀಯ ವಿಚಾರ.
ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದ ಪರಬ್ರಹ್ಮನಾದ ಶ್ರೀನಿವಾಸನ ಮತ್ತು ಎಲ್ಲ ಗುರುಗಳ ಪರಮಾನುಗ್ರಹದಿಂದ ವಿಶ್ವಕಲ್ಯಾಣಕ್ಕಾಗಿ ಸ್ಥಾಪನೆಗೊಂಡ “ಶ್ರೀನಿವಾಸ ಉತ್ಸವ ಬಳಗ”ದಿಂದ ನಡೆಸಲಾಗುತ್ತಿರುವ ಶ್ರೀನಿವಾಸಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಇದೀಗ ಶತಕದ ಸಂಭ್ರಮ.
ಅತ್ಯಂತ ವೈಭವದಿಂದ ನಡೆಯುವ ಈ ಪರಮ ಪಾವನವಾದ ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದ ವಿವಿಧ ಭಜನಾ ಮಂಡಳಿಗಳಿಂದ ನಾಮ ಸಂಕೀರ್ತನೆ – ಭವ್ಯ ಮೆರವಣಿಗೆ ಅಂದು ಸಂಜೆ 5ರಿಂದ : ವಿದುಷಿ ಶ್ರೀ ದಿವ್ಯಾ ಗಿರಿಧರ್ ರವರಿಂದ ಶ್ರೀ ಅನ್ನಮಯ್ಯ ಕೀರ್ತನೆ ಹಾಡುಗಾರಿಕೆ,6:30 ರಿಂದ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ಬಿ. ಗೋಪಾಲಾಚಾರ್, ಉಡುಪಿರವರ ನಿರೂಪಣೆಯೊಂದಿಗೆ ಡಾ. ರಾಯಚೂರು ಶೇಷಗಿರಿದಾಸ್ ಮತ್ತು ವಿದುಷಿ ಶ್ರೀಮತಿ ಶುಭಾ ಸಂತೋಷ್ ಗಾಯನದೊಂದಿಗೆ ಶ್ರೀ ಶ್ರೀನಿವಾಸ ಉತ್ಸವ ಬಳಗದ ತಂಡದವರು ಸಾಂಪ್ರದಾಯಿಕ ಕಲ್ಯಾಣೋತ್ಸವವನ್ನು ನಡೆಸಿಕೊಡುವರು.
ಕಾರ್ಯಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಸಕ ರಾಮಲಿಂಗಾರೆಡ್ಡಿ, ಬಿಡಿ.ಎ ಅಧ್ಯಕ್ಷ – ಟಿಟಿಡಿ ಸದಸ್ಯ ಎಸ್.ಆರ್.ವಿಶ್ವನಾಥ್ , ವಿಧಾನ ಮಂಡಲದ ಮುಖ್ಯ ಸಚೇತಕ ಎಂ. ಸತೀಶ್ ರೆಡ್ಡಿ , ರಾಜ್ಯ ಸಭಾ ಸದಸ್ಯ ಕುಪೇಂದ್ರ ರೆಡ್ಡಿ , ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮೊದಲಾವರು ಭಾಗವಹಿಸವರು ಎಂದು ಸಂಸ್ಥಾಪಕ ಅಧ್ಯಕ್ಷ ಟಿ.ವಾದಿರಾಜ್ ತಿಳಿಸಿರುತ್ತಾರೆ.
ವಿವರಗಳಿಗೆ : . ಮೊ.:98861 08550ಗೆ ಸಂಪರ್ಕಿಸಬಹುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post