ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) #AKBMS ಚುನಾವಣೆ ಏಪ್ರಿಲ್ 13ರಂದು ನಡೆಯಲಿದ್ದು, ಅಧ್ಯಕ್ಷೀಯ ಅಭ್ಯರ್ಥಿ ಭಾನುಪ್ರಕಾಶ್ ಶರ್ಮಾ #Bhanupraksh Sharma ಅವರು ಗಾಯತ್ರಿ ಭವನದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದರು.
ಇದಕ್ಕೆ ಮೊದಲು ಇಲ್ಲಿನ ಕೆ.ಆರ್.ರಸ್ತೆಯಲ್ಲಿರುವ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಮಹಾಸಭಾದ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಹಿತ ಇತರ ಮುಖಂಡರ ಜತೆಗೆ ಗಾಯತ್ರಿ ಭವನದ ವರೆಗೆ ಮೆರವಣಿಗೆಯಲ್ಲಿ ತೆರಳಿದರು.
ಭಾನುಪ್ರಕಾಶ್ ಶರ್ಮಾ ಅವರು ಈ ಸಂದರ್ಭದಲ್ಲಿ ಮಾತನಾಡಿ, ಎಲ್ಲಾ ಬ್ರಾಹ್ಮಣರ ಪ್ರಾತಿನಿಧಿಕ ಸಂಸ್ಥೆಯಾದ ಎಕೆಬಿಎಂಎಸ್ ಮೂಲಕ ಸಮಗ್ರ ಬ್ರಾಹ್ಮಣರ ಕ್ಷೇಮಾಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
‘ಮಹಾಸಭಾದ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ಬ್ರಾಹ್ಮಣರ ಹಲವು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಹಾಗೂ ಹಲವು ಪ್ರಗತಿಪರ ಕೆಲಸ ಮಾಡುವಲ್ಲಿ ಅವರು ಸಫಲರಾಗಿದ್ದಾರೆ. ನಾನು ಸಹ ಅದೇ ಹಾದಿಯಲ್ಲಿ ಸಾಗಲಿದ್ದು, ಬ್ರಾಹ್ಮಣರ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ, ಈ ಪ್ರಯತ್ನಕ್ಕೆ ನೀವೆಲ್ಲ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮುಖಂಡರಾದ ವೈ.ಎನ್.ಶರ್ಮಾ, ಸುಧಾಕರ ಬಾಬು, ರಾಘವೇಂದ್ರ ಭಟ್ಟ, ಎಚ್.ಸಿ.ಸುರೇಶ್, ವತ್ಸಲಾ ನಾಗೇಶ್, ಛಾಯಾಪತಿ, ರೂಪಾ ಅಯ್ಯರ್, ಅಶ್ವತ್ಥನಾರಾಯಣ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post