ಕಲ್ಪ ಮೀಡಿಯಾ ಹೌಸ್
ಚಿತ್ರರಂಗದಲ್ಲಿ ಸಂಭಾವನೆ ವಿಷಯವಾಗಿ ಹಲವರ ಮಧ್ಯೆ ಜಗಳ, ವೈಮನಸ್ಸು ಸಾಮಾನ್ಯ. ಆದರೆ ಇಲ್ಲೊಂದು ಘಟನೆ ಎಲ್ಲದಕ್ಕಿಂತ ಭಿನ್ನವಾಗಿದೆ.
ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಹೊಂದುವುದಕ್ಕೂ ಮುನ್ನ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಮುಂಗಡ ಹಣ ಪಡೆದಿದ್ದರು. ಅದನ್ನು ಗಮನಿಸಿದ ಅವರ ಪತ್ನಿ ಅವರು ಪಡೆದಿರುವ ಸಂಭಾವನೆಯನ್ನು ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದು, ಅಭಿಮಾನಿಗಳಿಗೆ ರಾಜ್ ಕುಟುಂಬದ ಮೇಲಿರುವ ಗೌರವನ್ನು ಹೆಚ್ಚಿಸಿದ್ದಾರೆ.
ಪುನೀತ್ ನಿಧನರಾಗುವುದಕ್ಕೂ ಮೊದಲು ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಈ ಪೈಕಿ ಅವರು ಮುಖ್ಯಭೂಮಿಕೆ ನಿರ್ವಹಿಸಿರುವ ‘ಜೇಮ್ಸ್’ ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಲಕ್ಕಿ ಮ್ಯಾನ್’ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಉಳಿದ ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ಈ ಪೈಕಿ ಕೆಲ ಸಿನಿಮಾಗಳಿಗೆ ಪುನೀತ್ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದರು. ಈ ಪೈಕಿ ಒಂದು ಸಿನಿಮಾದ ಅಡ್ವಾನ್ಸ್ ಅನ್ನು ಪುನೀತ್ ಪತ್ನಿ ಅಶ್ವಿನಿ ಅವರು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ಕನ್ನಡ ಸಿನಿಮಾ ನಿರ್ಮಾಪಕರೊಬ್ಬರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಬಂತು. ಮಹಿಳೆಯೊಬ್ಬರು ಮಾತನಾಡಿ, ಅವರು ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.50 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ ಎಂದರು.
ಹೀಗೆ ಹೇಳಿದ ಮಹಿಳೆ ಅಶ್ವಿನಿ ಪುನೀತ್ ರಾಜ್ಕುಮಾರ್. ಇದು ಪ್ರಾಮಾಣಿಕತೆ. ಕನ್ನಡದ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್ ಕುಟುಂಬ ಇರುವುದೇ ಹೀಗೆ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ನಿರ್ಮಾಪಕರ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೆ ಪ್ರಸ್ತುತ ಈ ಪೋಸ್ಟ್ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post