ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆತ್ಮನಿರ್ಭರ್ ಭಾರತ್ ನಿರ್ಮಾಣವಾಗಲು ಕೈಮಗ್ಗಗಳಲ್ಲಿ ಹೆಚ್ಚು ಉತ್ಪಾದನೆಯಾಗಬೇಕು. ನೇಕಾರರಿಗೆ ಅದರ ಲಾಭ ಮುಟ್ಟಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.
ಅವರು ಇಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿರುವ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕೈ ಮಗ್ಗ ಸ್ವಾವಲಂಬನೆಯ ಸಂಕೇತ
ಕೈ ಮಗ್ಗ ಸ್ವಾವಲಂಬನೆಯ ಸಂಕೇತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೈಮಗ್ಗ ಬಹಳ ಪ್ರಮುಖ ಪಾತ್ರ ವಹಿಸಿದೆ. ಕೈಮಗ್ಗ, ಚರಕ, ಇವೆಲ್ಲವೂ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಪ್ರೋತ್ಸಾಹ ನೀಡಿದೆ. ಮಹಾತ್ಮಾ ಗಾಂಧೀಜಿಯವರು ನಮ್ಮ ಬಟ್ಟೆಗಳನ್ನು ನಾವೇ ತಯಾರು ಮಾಡಬೇಕೆಂದು ಕರೆ ನೀಡಿದರು. ಬ್ರಿಟಿಷರು ವ್ಯಾಪಾರ ಮಾಡಲು ಬಂದು ಬಟ್ಟೆ ಪ್ರಮುಖವಾಗಿತ್ತು. ಇಂಗ್ಲೆಂಡ್ ನ ಮಿಲ್ ಗಳಲ್ಲಿ ತಯಾರಾಗುವ ಬಟ್ಟೆಗೆ ಪ್ರತಿರೋಧವಾಗಿ ನಮ್ಮ ಕೈಯಿಂದ ನಮ್ಮ ಬಟ್ಟೆಗಳನ್ನು ನೇಯಬೇಕೆಂಬ ಗಾಂಧೀಯವರ ಕರೆಗೆ ಕೈಮಗ್ಗಕ್ಕೆ ಜನ ಕೈಜೋಡಿಸಿದರು. ಸ್ವಾತಂತ್ರ್ಯ ಹೋರಾಟದ ಪ್ರೇರಣೆ. ಇಂಥ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರ ಎಂದರು.
ಗ್ರಾಮೋದ್ಯೋಗ, ಕೈಮಗ್ಗಕ್ಕೆ ಸರ್ಕಾರ ಒತ್ತು ನೀಡಿದೆ
ನಮಗೆ ನಮ್ಮ ಜನರಿಂದ ತಯಾರಾಗುವ ವಸ್ತುಗಳು ಅಗತ್ಯ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ಅವರ ಕನಸನ್ನು ಕೈಮಗ್ಗ ಕ್ಷೇತ್ರ ಈಡೇರಿಸುತ್ತಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ತಂತ್ರಜ್ಞಾನದ ಬಳಕೆ ಕೈಮಗ್ಗ ಕ್ಷೇತ್ರಕ್ಕೂ ವ್ಯಾಪಿಸಿದೆ. ಇಲೆಕ್ಟ್ರಾನಿಕ್ ಜಕಾರ್ಡ್ ನಿಂದ ಹಿಡಿದು ಬಹಳ ದೊಡ್ಡ ಪ್ರಮಾಣದ ಉತ್ಪಾದನೆ ಮಾಡುವ ಈ ಕೈಮಗ್ಗಗಳನ್ನು ನೋಡುತ್ತಿದ್ದೇವೆ. ವಿನ್ಯಾಸಕ್ಕೆ ಇಲೆಕ್ಟ್ರಾನಿಕ್ ಜಕಾರ್ಡ್ ಸಹಾಯಕ. ಉಳಿದದ್ದು ಕೈಯಿಂದಲೇ ಆಗುತ್ತದೆ. ನೇಕಾರರ ದಣಿವನ್ನು ಕಡಿಮೆ ಮಾಡಲು ಆಧುನೀಕರಣ ಸಹಕಾರಿಯಾಗಿದೆ. ನಮ್ಮ ಪ್ರಧಾನಮಂತ್ರಿಗಳು ಇದಕ್ಕೆ ಬಹಳ ಒತ್ತು ನೀಡಿದ್ದಾರೆ ಎಂದರು.
ಖಾದಿ, ಗ್ರಾಮೋದ್ಯೋಗ, ಕೈಮಗ್ಗಕ್ಕೆ ಬಹಳ ದೊಡ್ಡ ಒತ್ತು ನೀಡಿದ್ದಾರೆ. ನಮ್ಮ ದೇಶದಲ್ಲಿ ತಯಾರಾಗುವುದನ್ನು ನಾವೇ ಉಪಯೋಗಿಸಿದರೆ, ಆತ್ಮನಿರ್ಭರ್ ಭಾರತ್ ಗೆ ಅರ್ಥ ಬರುತ್ತದೆ. ಕೂಲಿಕಾರ್ಮಿಕರಿಗೆ ಕೂಡ ಲಾಭವಾಗಬೇಕೆನ್ನುವುದು ನಮ್ಮ ಉದ್ದೇಶ. ನಾವು ಹಲವಾರು ಯೋಜನೆಗಳನ್ನು ನೇಕಾರರ ಮಕ್ಕಳಿಗೆ ವಿದ್ಯಾ ನಿಧಿಯನ್ನು ಜುಲೈ 28 ರಂದು ಪ್ರಾರಂಭಿಸಲಾಗಿದೆ. ಸುಮಾರು 50 ಸಾವಿರಕ್ಕಿಂತ ಹೆಚ್ವು ನೇಕಾರರ ಮಕ್ಕಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದರು.
Also read: ಅಮೃತ ಮಹೋತ್ಸವ ಹಿನ್ನೆಲೆ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ರಾಜ್ಯಪಾಲರಿಂದ ಸನ್ಮಾನ
ಹೆಣ್ಣು ಮಕ್ಕಳಿಗೆ 8 ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೂ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅದರ ಜೊತೆಗೆ ಕೈಗಾರಿಕಾ ವಲಯದಲ್ಲಿ ನೇಕಾರರ ಸಮ್ಮಾನ್ ಯೋಜನೆಯ ಮೊತ್ತವನ್ನು 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹಲವಾರು ವರ್ಷಗಳಿಂದ ಇರುವ ಬಡ್ಡಿ ರಿಯಾಯಿತಿ, ಸಾಲ ಮನ್ನಾ ಮಾಡಲಾಗಿದೆ. ಇನ್ನಷ್ಟು ಯೋಜನೆ ರೂಪಿಸುವ ಉದ್ದೇಶ ನಮ್ಮದು. 32 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 1.50 ರಿಂದ 10 ಲಕ್ಷದವರೆಗೆ ಸಾಲ, ತರಬೇತಿ, ಮಾರಿಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದರಲ್ಲಿ ಕೈಮಗ್ಗಕ್ಕೆ ಅತಿ ಹೆಚ್ವಿನ ಆದ್ಯತೆ ನೀಡಲಾಗಿದೆ. ಬೀಜಧನ ಹಾಗೂ ಸಾಲಕ್ಕೆ ಕೆನರಾ ಬ್ಯಾಂಕ್ ನ್ನು ಆಂಕರ್ ಬ್ಯಾಂಕ್ ಆಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಲಾಖೆಯ ಅಧಿಕಾರಿಗಳು ಯೋಜನೆಯಡಿ ನೇಕಾರರಿಗೆ ಯಾವ ರೀತಿಯ ಅನುಕೂಲವಾಗಲಿದೆ ಎಂದು ಪರಿಶೀಲಿಸಬೇಕು ಎಂದು ಹೇಳಿದರು.
ಪ್ರತಿ ಗ್ರಾಮದ ಯುವಕರ ಸಂಘಕ್ಕೆ 1.50 ಲಕ್ಷ ದಿಂದ 7.50 ಲಕ್ಷ ರೂ.ಗಳ ಸಾಲ ನೀಡುತ್ತಿದ್ದೇವೆ. ಈ ಎರಡು ಯೋಜನೆಗಳನ್ನು ಕೈಮಗ್ಗ ನೇಕಾರರಿಗೆ ಜೋಡಿಸಿಕೊಂಡರೆ ದೊಡ್ಡ ಲಾಭ ಆಗಲಿದೆ. ಕೈಮಗ್ಗ ಅಥವಾ ಪವರ್ ಲೂಮ್ ಅಭಿವೃದ್ಧಿ ಮಾಡಿದಾಗ ನಮ್ಮ ಬೇಡಿಕೆಗಳ ಈಡೇರಿಕೆಯಾಗುತ್ತದೆ. ಮಾರುಕಟ್ಟೆಯಲ್ಲಿ ವಿದೇಶಿ ಬಟ್ಟೆಗಳಿಗೆ ಪ್ರತಿಸ್ಪರ್ಧಿ ಯಾಗಿ ಗಟ್ಟಿಯಾಗಿ ನಿಂತರೆ ನಿಜವಾಗಿಯೂ ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ , ನಮ್ಮಬ್ಪ್ರಧಾನ ಮಂತ್ರಿಗಳು ತಿಳಿಸಿದಂತೆ ಆತ್ಮ ನಿರ್ಭರತೆ ಸಾಧಿಸಬಹುದು ಎಂದು ತಿಳಿಸಿ 8 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಶುಭಾಶಯ ಹೇಳಿ ಪ್ರಶಸ್ತಿ ವಿಜೇತರಿಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















