ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉಡುಪಿ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರ 42ನೇ ಚಾತುರ್ಮಾಸ್ಯ ವ್ರತ ಸಮಾರೋಪ ಮತ್ತು ಸೀಮೋಲ್ಲಂಘನ ಅಂಗವಾಗಿ ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾತುರ್ಮಾಸ್ಯ ವ್ರತ ವರ್ಷ ಪೂರ್ಣ ಧಾರ್ಮಿಕ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತದೆ. ಈ ವ್ರತ ಕೇವಲ ಯತಿಗಳಿಗೆ ಮಾತ್ರ ಅಲ್ಲ. ಎಲ್ಲರಿಗೂ ಅನ್ವಯವಾಗುವಂಥದ್ದು. ಇಲ್ಲಿ ಪುಣ್ಯ ಸಂಪಾದನೆಗೆ ಅನಂತ ಅವಕಾಶವಿದೆ ಎಂದರು.
ನಮ್ಮ ದೇಶ, ಭಾಷೆಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು. ಎರಡು ವರ್ಷಗಳಿಂದ ಕಾಡಿದ ಕೊರೋನಾ ಸೋಂಕು ಸಂಪೂರ್ಣ ನಿರ್ಮೂಲನೆಗೊಂಡು ವಿಶ್ವ ಆರೋಗ್ಯಮುಖಿಯಾಗಲಿ ಎಂದು ನಿತ್ಯವೂ ಪ್ರಾರ್ಥಿಸುವೆ ಎಂದು ಹೇಳಿದರು.
ಬೆಂಗಳೂರಿನ ಗಿರಿನಗರದ ಭಾಗವತ ಆಶ್ರಮದಲ್ಲಿ ಚಾತುರ್ಮಾಸ ಪರ್ಯಂತ ೫೫ ದಿನದ ವ್ರತಾಚರಣೆಯಲ್ಲಿ ನಿತ್ಯವೂ ಆನ್ಲೈನ್ ಮೂಲಕ ವಿವಿಧ ವಿದ್ವಾಂಸರಿಂದ ರಾಮಾಯಣ ಸಂದೇಶ, ಶ್ರೀಪಾದರಾಜರ ಮಧ್ವನಾಮ ಪಾರಾಯಣ, ಪ್ರೋಷ್ಠಪದಿ ಭಾಗವತ, ಉದಯೋನ್ಮುಖ ಗಾಯಕರಿಂದ ಸಂಗೀತ ಸೇವೆ, `ವಿದ್ಯೇಶ ವಿಠಲನಾದ ವೈಭವ’ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಎಂದು ಶ್ರೀ ವಿದ್ಯೇಶ ತೀರ್ಥರು ಹೇಳಿದರು.
ಈ ಸಂದರ್ಭ ಪ್ರಮುಖರಾದ ಜಯರಾಂ, ಕಲ್ಯ ರಂಗನಾಥ್ ಹಾಜರಿದ್ದರು.
ದಿನವೂ ದೀಪಾರಾಧನೆ:
ದೇಶ ಕೊರೋನಾ ಮುಕ್ತವಾಗಲು ಒಂದು ದಿನ ದೀಪ ಬೆಳಗಿ ಎಂದು ಪ್ರಧಾನಿ ಮೋದಿ ಒಂದೂವರೆ ವರ್ಷದ ಹಿಂದೆ ಕರೆ ನೀಡಿದ್ದರು. ಅಂದಿನಿಂದ ನಾವು ಮಠದಲ್ಲಿ ಪ್ರತಿ ದಿನ ಸಂಜೆ ನಮ್ಮ ಸಂಸ್ಥಾನ ಪ್ರತಿಮೆ ಶ್ರೀ ಸೀತಾರಾಮರ ದೇವರಿಗೆ ತುಪ್ಪದ ದೀಪ ಸಮರ್ಪಿಸಿ ಲೋಕವು ಕೊರೋನಾದಿಂದ ಮುಕ್ತವಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿzವೆ. ದೇಶದ ಹಿತವೂ ಮಠಾಧೀಶರಿಗೆ ಇರಬೇಕು ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದರು.
ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮಾಡಲು ನಾವು ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಶ್ರಾವಣ, ಮನನ, ಜಪ, ಗಾಯನ ಮತ್ತು ದೀಪಾರಾಧನೆಗಳನ್ನು ಚಾತುರ್ಮಾಸ ಸಂದರ್ಭ ಮಾಡಬೇಕು. ಅವುಗಳೆಲ್ಲವೂ ಧರ್ಮದ ಉಳಿವಿಗಾಗಿ ಮತ್ತು ಲೋಕ ಹಿತಕ್ಕಾಗಿ ಸಮಗ್ರವಾಗಿ ಸ್ಪಂದಿಸುವಂತೆ ಇರಬೇಕು.
ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಭಂಡಾರಕೇರಿ ಮಠ ಭಾಗವತ ಆಶ್ರಮ, ಬೆಂಗಳೂರು.
ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 42 ನೇ ಚಾತುರ್ಮಾಸ ವ್ರತ ಸೀಮೋಲ್ಲಂಘನ ಅಂಗವಾಗಿ ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post