ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎರಡನೇ ವರ್ಷದ,’ಭೂಮಿ’ ರೈತ ಪ್ರಶಸ್ತಿ #Bhoomi Farmer Award ಪ್ರದಾನ ಸಮಾರಂಭ ಡಿಸೆಂಬರ್ 23 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಐದು ವಿಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚು ರೈತರಿಗೆ ‘ಭೂಮಿ’ ರೈತ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭೂಮಿ ಸಂಸ್ಥೆಯ ಮಾಧ್ಯಮ ಸಲಹೆಗಾರ ಹನುಮೇಶ್ ಕೆ ಯಾವಗಲ್ ತಿಳಿಸಿದ್ದಾರೆ.
‘ಭೂಮಿ’ ಡಿಜಿಟಲ್ ಕೃಷಿ ವೇದಿಕೆ ಕಳೆದ ವರ್ಷದಿಂದ ಪ್ರಶಸ್ತಿ ನೀಡಲು ಆರಂಭಿಸಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ರೈತರಿಗೆ ಸಾಮಾಜಿಕ ಮನ್ನಣೆ ಸಿಗಬೇಕು ಎಂಬ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಕೃಷಿ ವಲಯದಿಂದ ಯುವ ಜನಾಂಗ ದೂರ ಸರಿಯುತ್ತಿರುವುದನ್ನು ತಡೆಯುವುದು ಹಾಗೂ ಕೃಷಿ ಕೂಡ ಲಾಭದಾಯಕ ಎಂದು ಸಾಬೀತು ಪಡಿಸಲು ಭೂಮಿ ಸಂಸ್ಥೆ ಡಿಜಿಟಲ್ ತಂತ್ರಜ್ಞಾನ ಬಳಕೆ ಮೂಲಕ ರೈತರಿಗೆ ವಿವಿಧ ಸೇವೆಗಳನ್ನು ನೀಡುತ್ತಿದೆ.
ಪ್ರಶಸ್ತಿ ಆಯ್ಕೆಗೆ ಕೃಷಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳು, ಕೃಷಿ ಪರಿಣಿತರು ಸೇರಿದಂತೆ ಹಲವು ಗಣ್ಯರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ರೈತರಿಗೆ ಸಾರಿಗೆ, ವಸತಿ ಹಾಗೂ ಊಟದ ವ್ಯವಸ್ಥೆಯನ್ನು ‘ಭೂಮಿ’ ಸಂಸ್ಥೆಯೇ ಮಾಡಲಿದೆ. ಪ್ರಗತಿಪರ ರೈತರು, ಉದ್ಯಮಶೀಲ ರೈತರು ಸೇರಿದಂತೆ ಹಲವು ವಿಭಾಗಗಳಲ್ಲಿ ರೈತರನ್ನು ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ‘ಭೂಮಿ’ ಸಂಸ್ಥೆಯ ಮಾಧ್ಯಮ ಸಲಹೆಗಾರರು ತಿಳಿಸಿದ್ದಾರೆ.
ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದವರು, ಪರಿವರ್ತನೆಯ ದಾರಿ ತೋರಿದ ಪ್ರಗತಿಪರ ರೈತರು, ರೈತ ಉತ್ಪಾದನಾ ಸಂಘಟನೆಗಳು (ಎಫ್ ಪಿ ಓ), ಕೃಷಿ ಸಂಶೋಧಕರು, ಕೃಷಿ ವಲಯದ ಸೃಜನಶೀಲ ಚೇತನರು ಮತ್ತು ಬದಲಾವಣೆಯ ಹರಿಕಾರರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ‘ಭೂಮಿ’ ಸಂಸ್ಥೆಯ ಮಾಧ್ಯಮ ಸಲಹೆಗಾರ ಹನುಮೇಶ್ ಕೆ ಯಾವಗಲ್ ವಿವರಿಸಿದ್ದಾರೆ.
ವಿಶ್ವ ರೈತರ ದಿನಾಚರಣೆಯ ದಿನವಾದ ಡಿಸೆಂಬರ್ 23 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೃಷಿ ಕುರಿತ ಉಪನ್ಯಾಸ ಕೂಡ ನಡೆಯಲಿದೆ ಎಂದು ಹನುಮೇಶ್ ಕೆ ಯಾವಗಲ್ ವಿವರಿಸಿದ್ದಾರೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು www.bhoomeeawards.com ವೆಬ್ ಸೈಟ್ ಗೆ ಭೇಟಿ ಮಾಡಿ ಅಥವಾ 7483074266 ದೂರವಾಣಿ ಸಂಖ್ಯೆಗೆ ಕರೆ ಮಾಡಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















