ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂದು ಬೆಳಿಗ್ಗೆ ವಿಕಾಸಸೌಧದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವ ಕಪೀಲ್ ಮೊರೆಶ್ವರ ಪಾಟೀಲ್ ಅವರು ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಗತಿ ಪರಿಶೀಲನೆ ನಡೆಸಿದರು.
ಇಲಾಖೆಯ ಬಗ್ಗೆ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್ ಅವರು ವಿವರವಾದ ಮಾಹಿತಿ ನೀಡಿದರು. ಹಾಗೂ ಗ್ರಾಮೀಣ ಭಾಗದಿಂದ ಬಂದಿದ್ದ ಹಲವಾರು ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಭಾಗವಹಿಸಿ ಅವರ ಅನುಭವ ಮತ್ತು ಇಲಾಖೆ ಅವರಿಗೆಲ್ಲ ಹೇಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕೊರೋನಾ ಸಮಯದಲ್ಲಿ ಗ್ರಾಮೀಣ ಸ್ವಸಹಾಯ ಗುಂಪುಗಳಿಂದ ಮಾಸ್ಕ್ ತಯಾರಿಸುವುದು, ಸ್ಯಾನಿಟೈಸರ್ ತಯಾರಿಸುವುದು ಮತ್ತು ಸ್ವಚ್ಛ ಭಾರತ ಯೋಜನೆಯಲ್ಲಿ ಕೈಗೊಂಡ ಹಲವಾರು ಅಭಿವೃದ್ಧಿ ಕಾಮಗಾರಿಗಳ ಉಪಯೋಗಗಳನನು ಬಳಸಿಕೊಳ್ಳುತ್ತಿರುವ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿಯ ಕ್ರೀಡಾ ಪ್ರತಿಭೆಗಳನ್ನು ಕೇಂದ್ರ ಸಚಿವರು ಅಭಿನಂದಿಸಿ ಗೌರವಿಸಿದರು. ಅವರ ಕ್ರೀಡಾ ಪ್ರೋತ್ಸಾಹಕ್ಕೆ ಇಲಾಖೆಯಿಂದ ಏನೇನಾಗಬೇಕೆಂದು ಕ್ರೀಡಾ ಇಲಾಖೆ ಹಿರಿಯ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.
ನಂತರ ಕೇಂದ್ರ ಸಚಿವರು ಮಾತನಾಡಿ, ನಿನ್ನೆ ಮತ್ತು ಇಂದು ಸಚಿವರು ಭೇಟಿ ನೀಡಿದ ಗ್ರಾಮಗಳ ಹಾಗೂ ಅವುಗಳು ಅಳವಡಿಸಿಕೊಂಡಿರುವ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇಲಾಖೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಇಲ್ಲಿಯ ಗ್ರಾಮ ಪಂಚಾಯತ್ ಗಳಲ್ಲಿ ಅಳವಡಿಸಿಕೊಂಡಿರುವ ಆಧುನಿಕತೆ ಬಗ್ಗೆ ಪ್ರಶಂಸೆ ಮಾಡಿ ನಮ್ಮ ರಾಜ್ಯದ ಗ್ರಾಮ ಪಂಚಾಯತ್ ಗಳ ಅಧಿಕಾರಿಗಳನ್ನು ಮತ್ತು ಚುನಾಯಿತ ಸರಪಂಚಗಳನ್ನು ಇಲ್ಲಿಗೆ ಕಳುಹಿಸಿ ಅವರಿಗೂ ಕೂಡ ತರಭೇತಿ ನೀಡಿದರೆ ಅವರೂ ನಮ್ಮ ರಾಜ್ಯದಲ್ಲಿ ಕೂಡ ಶೀಘ್ರಗತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಕೊಡಲು ಅನುಕೂಲ ಆಗುತ್ತದೆ ಎಂದು ಆಶಿಸಿದರು.
ಕರ್ನಾಟಕವು ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುವುದರಲ್ಲಿ ಒಂದನೇ ನಂಬರ್ ನಲ್ಲಿ ಇರಲಿದೆ ಎಂದು ಹಾರೈಸಿದರೆ.
ಸಚಿವ ಕೆ.ಎಸ್. ಈಶ್ವರಪ್ಪರವರು ಕೇಂದ್ರ ಸಚಿವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಉಡುಗೊರೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್, ಇಲಾಖೆ ಆಯುಕ್ತರಾದ ಶಿಲ್ಪಾನಾಗ್ ಹಾಗೂ ವಿಶೇಷಾಧಿಕಾರಿ , ಜಿ. ಜಯರಾಮ್ ಮತ್ತು ಸಚಿವರ ಆಪ್ತ ಕಾರ್ಯದರ್ಶಿ ಸಿ. ಎನ್. ಮಂಜುನಾಥ್, ಇಲಾಖೆ ವಿವಿಧ ವಿಭಾಗಗಳ ನಿರ್ದೇಶಕರುಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post