ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳು, ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ಶುಭ ಸುದ್ಧಿಯನ್ನು ಹೇಳಿದ್ದಾರೆ.
ಅಧಿಕಾರಿಗಳ ಜೊತೆ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಮಕ್ಕಳಿಗೆ ಹೊಸ ಶಿಷ್ಯವೇತನ ಜಾರಿ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ.
ರೈತರ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದು ಎನ್ನುವ ಕಾರಣಕ್ಕೆ ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುದಾನ ನೀಡಲಾಗುತ್ತದೆ. ಹಾಗೂ ವಿಧವಾ ವೇತನ, ವಿಶೇಷ ಚೇತನರಿಗೆ ನೀಡಲಾಗುವ ಸಹಾಯಧನವನ್ನು 600ರಿಂದ 800ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಸಂಧ್ಯಾಸುರಕ್ಷಾ ಯೋಜನೆ ಹಣವನ್ನು 1000ರೂ ನಿಂದ 1200 ರೂ. ಗೆ ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದು ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಸರ್ಕಾರದ ದಿಕ್ಸೂಚಿಯನ್ನು ವಿವರಿಸಿದ್ದೇನೆ. ದಕ್ಷ ಪ್ರಾಮಾಣಿಕ ಜನಪರ ಆಡಳಿತ ನೀಡಬೇಕು. ಸಮಾಜದ ಪರ ಸರ್ಕಾರ ಇರಬೇಕು. ಯೋಜನೆ ಜಾರಿಯಲ್ಲಿ ವಿಳಂಬವಾಗಬಾರದು. ಇತರೆ ಇಲಾಖೆಗಳ ಮಧ್ಯೆ ಸಂಬಂಧ ಚೆನ್ನಾಗಿ ಇರಬೇಕು. ಯಾವುದೇ ಕೆಲಸ ತಡವಾಗದಂತೆ ಮಾಡಬೇಕು. ಇಲಾಖೆಗಳ ಜವಾಬ್ದಾರಿ ಸಂಪೂರ್ಣ ನಿಮ್ಮದು ಎಂದು ಹೇಳಿದ್ದೇನೆ. ಅನಗತ್ಯ ಖರ್ಚು ಕಡಿಮೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post