ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕಾರ್ಯ ನಿರತ ಪತ್ರಕರ್ತರಾಗಿದ್ದು, ಅನಾರೋಗ್ಯ ಅಥವಾ ಸಾವಿಗೆ ತುತ್ತಾದ ಸಂದರ್ಭದಲ್ಲಿ ಆ ಕುಟುಂಬಕ್ಕೆ ಗರಿಷ್ಠ ೫ ಲಕ್ಷ ರೂ. ನೆರವು ನೀಡುತ್ತಿರುವುದನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪತ್ರಕರ್ತರ ಕಲ್ಯಾಣಕ್ಕೆ ಪೂರಕವಾದ ಬೇಡಿಕೆಗಳ ಈಡೇರಿಕೆಗೆ ಬಜೆಟ್ನಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದರು. ಹಾಗೂ ಹಾಲಿ ನೀಡಲಾಗುತ್ತಿರುವ ನೆರವನ್ನು ಮುಂದುವರೆಸಲಾಗುವುದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ವಿಜಯಪುರ ವಿವಿಯಲ್ಲಿ ಹಿರಿಯ ಪತ್ರಕರ್ತ ಮೊಹರೆ ಹಣುಮಂತರಾಯ, ಬೆಂಗಳೂರು ವಿವಿಯಲ್ಲಿ ಎಚ್.ಎಸ್.ದೊರೆಸ್ವಾಮಿ ಮತ್ತು ಧಾರವಾಡ ವಿಶ್ವವಿದ್ಯಾಲಯಗಳಲ್ಲಿ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ (ಪಾಪು) ಅವರ ಹೆಸರಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಆಧ್ಯಯನಪೀಠ ಸ್ಥಾಪಿಸಬೇಕೆಂಬ ಸಂಘದ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಹಣಕಾಸು ಸ್ಥಿತಿ ನೋಡಿಕೊಂಡು ನೆರವು, ಬಸ್ ಪಾಸ್ ಹಾಗೂ ಜಾಹೀರಾತು ಹಣ ಶೀಘ್ರ ಬಿಡುಗಡೆ ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದರು.
ನಿಯೋಗದಲ್ಲಿ ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಲೊಕೇಶ್, ನಿರ್ದೇಶಕರಾದ ಎನ್.ರವಿಕುಮಾರ್, ಜೆ.ಆರ್.ಕೆಂಚೇಗೌಡ, ಚೆಲುವರಾಜ್, ದೇವೇಂದ್ರಪ್ಪ ಕಪನೂರು, ಸೋಮಶೇಖರ ಕೆರಗೋಡು, ಮುನಿಕೃಷ್ಣಪ್ಪ, ಗಣಪತಿ ಗಂಗೊಳ್ಳಿ, ದೇವರಾಜು, ತೇಜಸ್ವಿನಿ, ರಶ್ಮಿಪಾಟೀಲ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post