ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಕೈಗಾರಿಕಾ ವಲಯಕ್ಕೆ ನಿರಂತರವಾಗಿ ಬಂಡವಾಳ ಆಕರ್ಷಿಸಲು ಮತ್ತು ಈಗಾಗಲೇ ನಮ್ಮಲ್ಲಿ ನೆಲೆಯೂರಿರುವ ಉದ್ಯಮಗಳಿಂದ ಮರುಹೂಡಿಕೆ ಉತ್ತೇಜಿಸಲು ಪೂರ್ಣ ಪ್ರಮಾಣದ ಹೊಸ ಸಂಸ್ಥೆಯನ್ನು ರಚಿಸುವ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ M B Patil ಅವರು ಸಮಾಲೋಚನಾ ಸಭೆಗಳನ್ನು ಆರಂಭಿಸಿದ್ದಾರೆ.
ರಾಜನೀತಿ ಸಂಸ್ಥೆ ಮತ್ತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ತಯಾರಿಸಿರುವ ಪ್ರಾತ್ಯಕ್ಷಿಕೆಗಳನ್ನು ಸಚಿವರು ಸೋಮವಾರ ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ಈ ಉಪಕ್ರಮವನ್ನು ಮುಂದಿನ ಸ್ತರಕ್ಕೆ ಕೊಂಡೊಯ್ಯಲಾಗುವುದು’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಔದ್ಯಮಿಕ ಬೆಳವಣಿಗೆ ಸಾಧಿಸುವುದು ಮತ್ತು ನಿರಂತರ ಹೂಡಿಕೆ ಸೆಳೆಯುವ ನಿಟ್ಟಿನಲ್ಲಿ ಸಿಂಗಪುರ, ತೈವಾನ್, ವಿಯಟ್ನಾಂ, ಚಿಲಿ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳ ಮಾದರಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಾಗಿದೆ. ಚಿಲಿ ದೇಶವು ಅಳವಡಿಸಿಕೊಂಡಿರುವ `ಇನ್ವೆಸ್ಟ್ ಚಿಲಿ’ ಉಪಕ್ರಮವು ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದ್ದು, ಆಸಕ್ತಿದಾಯಕವಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯವು ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿರುವುದು ನಿಜ. ಆದರೆ, ನಮ್ಮಲ್ಲಿ ನೆಲೆಯೂರಿರುವ ಕಂಪನಿಗಳಿಂದ ಇನ್ನೂ ಹೆಚ್ಚಿನ ಪ್ರಮಾಣದ ಮರುಹೂಡಿಕೆ ಮಾಡುವ ಹಾಗೆ ಮಾಡಬೇಕು. ಹಾಗೆಯೇ ಹೊಸ ಹೊಸ ಹೂಡಿಕೆಗೆ ಇನ್ನೂ ಹೆಚ್ಚು ಗಮನ ನೀಡುವ ಉದ್ದೇಶದಿಂದ ಐಎಎಸ್ ಅಧಿಕಾರಿಯೊಬ್ಬರನ್ನು ಉದ್ದೇಶಿತ ಸಂಸ್ಥೆಗೆ ಸಿಇಒ ಆಗಿ ನೇಮಕ ಮಾಡಿ, ಖಾಸಗಿ ಉದ್ಯಮಗಳ ದಿಗ್ಗಜರನ್ನೂ ಸಹ ಪೂರ್ಣಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಇದು ಜಾಗತಿಕ ಗುಣಮಟ್ಟದ ಸಂಸ್ಥೆಯಂತೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ವಿವರಿಸಿದರು.
ಮಾರುಕಟ್ಟೆ ವಿಸ್ತರಣೆ, ಉದ್ಯಮಿಗಳ ನಾಡಿಮಿಡಿತ ಅರಿಯುವಿಕೆ, ವಿಶ್ಲೇಷಣೆ, ರಚನಾತ್ಮಕ ಕಾರ್ಯತಂತ್ರ, ಸ್ಪರ್ಧಾತ್ಮಕತೆಯನ್ನು ಎದುರಿಸುವುದು, ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವುದು, ಅನುಮೋದನೆ ನೀಡಲಾದ ಯೋಜನೆಗಳ ಅನುಸರಣೆ, ಹೊಸಹೊಸ ಉದ್ಯಮಗಳ ಆಗಮನ, ಏಕಗವಾಕ್ಷಿ ಯೋಜನೆಯ ಜಾರಿ, ಸುಗಮ ವಹಿವಾಟಿನ ವಾತಾವರಣ ಇವೆಲ್ಲವನ್ನೂ ಸಾಧಿಸಿದರೆ ಮಾತ್ರ ಕೈಗಾರಿಕಾ ಬೆಳವಣಿಗೆಯ ಕನಸು ನನಸಾಗಲಿದೆ. ಉದ್ದೇಶಿತ ಸಂಸ್ಥೆಯ ಭಾಗವಾಗಲಿರುವ ಉದ್ಯಮಿಗಳು ಸಕ್ರಿಯವಾಗಿ ಇದನ್ನೆಲ್ಲ ಸಾಧಿಸಲಿದ್ದಾರೆ ಎಂದು ಸಚಿವರು ನುಡಿದರು.
Also read: ಪೂನಂಪಾಂಡೆ ಪ್ರಕರಣ ಊಹಾ ಪತ್ರಿಕೋದ್ಯಮಕ್ಕೆ ಉದಾಹರಣೆ: ಕೆ.ವಿ.ಪಿ
ಉದ್ಯಮಗಳ ಬೆಳವಣಿಗೆಗೆ ಅಧಿಕಾರಿಗಳು, ಆಯುಕ್ತರು, ಕಾರ್ಯದರ್ಶಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳ ಹಂತಗಳಲ್ಲಿ ದಕ್ಷ ಸಮಿತಿಗಳನ್ನು ರಚಿಸಬೇಕಾಗಿದೆ. ಪ್ರತೀ ತಿಂಗಳು ಇವುಗಳ ಸಭೆ ನಡೆಯುವ ಹಾಗೆ ಮಾಡಬೇಕು. ಉದ್ಯಮಿಗಳ ಕುಂದುಕೊರತೆ ಆಲಿಸಿ, ಅವುಗಳನ್ನು ಕ್ಷಿಪ್ರ ಗತಿಯಲ್ಲಿ ಬಗೆಹರಿಸುವ ಹಾಗೆ ಮಾಡಲಾಗುವುದು. ಈ ಕೆಲಸ ಮಾಡಲು ವಿಶಿಷ್ಟವಾದ ಒಂದು ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ ಎಂದು ಪಾಟೀಲ ಹೇಳಿದ್ದಾರೆ.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post