ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಂವಿಧಾನದಲ್ಲಿನ ಮಕ್ಕಳ ಗೌರವಯುತ ಬದುಕಿನ ಮೂಲ ಭೂತ ಹಕ್ಕುಗಳನ್ನು ಎತ್ತಿ ಹಿಡಿಯಲು ಕೂಡಲೇ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ. ಪಿ. ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ತಾಂತ್ರಿಕ ಸಮಿತಿಯು ಜೂನ್ ನಲ್ಲಿ ಶಾಲೆಗಳನ್ನು ತೆರೆಯಬೇಕೆಂದು ಶಿಫಾರಸ್ಸು ಮಾಡಿದ ಬೆನ್ನಲ್ಲೇ ಎಸ್ ಡಿಎಂಸಿ , ಶಿಕ್ಷಕರು , ಶಾಲಾ ಆಡಳಿತ ಮಂಡಳಿ ಹಾಗು ಪ್ರಜ್ಞಾವಂತ ನಾಗರೀಕರು ಶಾಲೆಗಳನ್ನು ತೆರೆಯಬೇಕೆಂದು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಗ್ರಾಮೀಣ ಭಾಗದ ಶಾಲೆಗಳು ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದು ಮಕ್ಕಳ ಆರೋಗ್ಯ, ಪೌಷ್ಟಿಕತೆ, ಕಲಿಕೆ ಹಾಗೂ ಸಮಗ್ರ ಅಭಿವೃದ್ಧಿಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಉಂಟಾಗಿದೆ. ಮಕ್ಕಳು ಕಲಿಕೆಯಲ್ಲಿ ಅಪಾರ ನಷ್ಟ ಅನುಭವಿಸಿರುವ ಜೊತೆಗೆ ಬಾಲಕಾರ್ಮಿಕ ಪದ್ಧತಿ , ಬಾಲ್ಯ ವಿವಾಹ , ಮಕ್ಕಳ ಭಿಕ್ಷಾಟನೆ , ಇತ್ಯಾದಿಗಳು ದುಪ್ಪಟು-ಮೂರು ಪಟ್ಟು ಹೆಚ್ಚಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದ ಸಂವಿಧಾನದ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ತಾವು, ವಿಶ್ವ ಸಂಸ್ಥೆಯ ಮಕ್ಕಳ ಒಡಂಬಡಿಕೆ ಹಾಗು ಭಾರತದ ಸಂವಿಧಾನದಲ್ಲಿನ ಮಕ್ಕಳ ಗೌರವಯುತ ಬದುಕಿನ ಮೂಲ ಭೂತ ಹಕ್ಕುಗಳನ್ನು ಎತ್ತಿ ಹಿಡಿಯಲು ಕೂಡಲೇ ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನ ಪ್ರಕಟಿಸಬೇಕೆಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ
ವಿ. ಪಿ. ನಿರಂಜನಾರಾಧ್ಯ , ಅಭಿವೃದ್ಧಿ ಶಿಕ್ಷಣ ತಜ್ಞ
ಹೊಸ ಬೆಳವಣಿಗೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮುಖ್ಯಸ್ಥರಾದ ಬಲರಾಮ್ ಭಾರ್ಗವ ಅವರು ಭಾರತದಲ್ಲಿ ಶಾಲೆಗಳನ್ನು ತೆರೆಯುವ ಸಮಯ ಬಂದಿದ್ದು, ಮಾಧ್ಯಮಿಕ ಶಾಲೆಗಳಿಗಿಂತ ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ಜಾಣತನ ಎಂದು ಹೇಳಿದ್ದಾರೆ. ವಯಸ್ಕರಂತೆ ಮಕ್ಕಳಲ್ಲಿಯೂ ಪ್ರತಿಕಾಯದ ಶಕ್ತಿ ಇದೆ. ಕೆಲವು ಸ್ಕ್ಯಾಂಡಿನೇವಿಯನ್ ದೇಶಗಳು ತಮ್ಮ ಪ್ರಾಥಮಿಕ ಶಾಲೆಗಳನ್ನು ಯಾವುದೇ ಕೋವಿಡ್-19 ತರಂಗಗಳಲ್ಲಿ ಮುಚ್ಚಿಲ್ಲ ಎಂದೂ ಸಹ ಮಾಹಿತಿ ನೀಡಿದ್ದಾರೆ.
ಇದಲ್ಲದೆ ಪ್ರಸಿದ್ಧ ವೈದ್ಯರು ಹಾಗೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು – ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ, ಭಾರತದ ಶಾಲೆಗಳನ್ನು ತೆರೆಯುವ ಸಮಯ ಬಂದಿದೆ ಎಂದಿದ್ದಾರೆ . ಭಾರತೀಯ ಮಕ್ಕಳಿಗೆ ಉತ್ತಮ ರೋಗನಿರೋಧಕ ಶಕ್ತಿ ಇದ್ದು ಶಾಲೆಗಳನ್ನು ಹಂತ ಹಂತವಾಗಿ ತೆರೆಯುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.
ಏಮ್ಸ್-ಡಬ್ಲ್ಯುಎಚ್ಒ ಸಮೀಕ್ಷೆಯು ಮಕ್ಕಳಲ್ಲಿ ಸಿರೊ-ಪಾಸಿಟಿವಿಟಿ ದರ ಹೆಚ್ಚು ಎಂದು ತಿಳಿದುಬಂದಿದೆ, ಮಗುವಿನ ಒಟ್ಟಾರೆ ಬೆಳವಣಿಗೆಯಲ್ಲಿ ಶಾಲಾ ಶಿಕ್ಷಣದ ಮಹತ್ವವನ್ನು ಗಮನಿಸಬೇಕೆಂದಿರುವ ಅವರು ಶೇ.5 ಕ್ಕಿಂತ ಕಡಿಮೆ ಕೋವಿಡ್ ಸಕಾರಾತ್ಮಕ ದರವನ್ನು ಹೊಂದಿರುವ ಸ್ಥಳಗಳಲ್ಲಿ ಶಾಲೆಗಳನ್ನು ಪುನಃ ತೆರೆಯಲು ಯೋಚಿಸಬಹುದು ಎಂದು ಮಹತ್ವದ ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರ ಈ ಎಲ್ಲ ತಜ್ಞರ ಸಲಹೆಯಂತೆ ಮಕ್ಕಳ ಹಿತದೃಷ್ಟಿಯಿಂದ ಈಗಲಾದರೂ ಕೂಡಲೇ ಶಾಲೆ ತೆರೆಯಬೇಕೆಂದು ನಾನು ಮುಖ್ಯ ಮಂತ್ರಿಯವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post