ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಕ್ರೀಡಾಕೂಟ-2025 #Karnataka Sports Event ಅನ್ನು ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಯೋಜಿಸುತ್ತಿದ್ದು ವ್ಯವಸ್ಥಿತ ಏರ್ಪಾಡುಗಳನ್ನು ಮಾಡಲು ಮಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಸೂಚಿಸಿದರು.
ಕರ್ನಾಟಕ ಕ್ರೀಡಾಕೂಟ -2025 ವನ್ನು ಜನವರಿ 17ರಿಂದ 23ರವರೆಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.

Also read: ಓಪನ್ ಸರ್ಜರಿಗೆ ನೋ-ರೋಬೋಟಿಕ್ ಸರ್ಜರಿ ಎಸ್ | ಶೀಘ್ರ ಗುಣಮುಖರಾಗಿ ಮನೆಗೆ ತೆರಳಿದ ವೃದ್ದ
ಕ್ರೀಡಾಕೂಟದಲ್ಲಿ 3750 ಕ್ರೀಡಾಪಟುಗಳು ಹಾಗೂ 750 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರು ಸೇರಿದಂತೆ ಅಂದಾಜು 4500 ಜನರು ಭಾಗವಹಿಸಲಿದ್ದು ಊಟ -ತಿಂಡಿ,ವಸತಿ , ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರಿನಲ್ಲಿ 12 ಕ್ರೀಡೆಗಳು ಹಾಗೂ ಉಡುಪಿ ಮತ್ತು ಮಣಿಪಾಲಗಳಲ್ಲಿ 11 ಕ್ರೀಡೆಗಳು ಆಯೋಜನೆಗೊಳ್ಳಲ್ಲಿದ್ದು, ಶೂಟಿಂಗ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.

ಕರ್ನಾಟಕ ಕ್ರೀಡಾಕೂಟ-2025ರ ಲಾಂಛನ ಬಿಡುಗಡೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೆರವೇರಿಸಿದರು.
ಕ್ರೀಡಾಕೂಟದ ಲೋಗೋದಲ್ಲಿನ ಯಕ್ಷಗಾನ ಕಿರೀಟವು ಕ್ರೀಡಾಕೂಟ ನಡೆಯುವ ಕರಾವಳಿ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು, ತಿಳಿನೀಲಿ ಬಣ್ಣವು ಕಡಲಿನ ಅಗಾಧತೆಯನ್ನು ಜತೆಗೆ ಸೋಲು- ಗೆಲುವು ಗಳಲ್ಲಿ ಕ್ರೀಡಾಪಟುಗಳ ಶಾಂತತೆ ಮತ್ತು ಶ್ರಮವನ್ನು ಪ್ರತಿನಿಧಿಸುವುದಾಗಿ ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಗೃಹಸಚಿವರಾದ ಡಾ ಪರಮೇಶ್ವರ್, ಇಂಧನ ಸಚಿವರಾದ ಕೆ ಜೆ ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಕೆ. ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post