ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಪತ್ರಕರ್ತರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವಾಗಿ ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿಗಳಾದ ವಿ. ಗೋಪಾಲ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಡಿ. 23ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಆಯೋಜಿಸಲಾದ `ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ಸಾಂಸ್ಕøತಿಕ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಯಾವುದೇ ಸರ್ಕಾರಗಳು 145 ಕೋಟಿ ಜನಸಂಖ್ಯೆಗೆ ಸುಗಮವಾದ ಆಡಳಿತ ನೀಡಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವವಾದುದು ಎಂಬುದನ್ನು ಮನಗಾಣಬೇಕಾಗಿದೆ. ಈ ದಿಸೆಯಲ್ಲಿ ಇಂದು ನಡೆಯುತ್ತಿರುವ ವಿಚಾರ ಸಂಕಿರಣ ಮಹತ್ವ ಹೊಂದಿದೆ. ನಮ್ಮನ್ನಾಳುತ್ತಿರುವ ರಾಜಕಾರಣಿಗಳು, ರಾಜಕೀಯ ಮುತ್ಸದಿಗಳು, ಕಾರ್ಯಾಂಗದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಾಂಗ ಇಲಾಖೆ, ಬುದ್ಧಿ ಜೀವಿಗಳು, ಸಾಮಾಜಿಕ ಚಿಂತಕರು, ಸಮಾಜ ಸುಧಾರಕರು ಕೂಡ ದೀರ್ಘವಾಗಿ ಆಲೋಚಿಸಿ ಅರ್ಥೈಸಬೇಕಾದ ಸಮಯವಿದು. ಆ ದಿಕ್ಕಿನಲ್ಲಿ ಈ ವಿಚಾರ ಸಂಕಿರಣ ಬೆಂಗಳೂರು ಕೇಂದ್ರದಲ್ಲಿ ಎಲ್ಲಾ ಪತ್ರಕರ್ತರನ್ನು, ರಾಜಕಾರಣಿಗಳನ್ನು, ಧರ್ಮಗುರುಗಳನ್ನು, ವಿವಿಧ ಪಕ್ಷಗಳ ನೇತಾರರನ್ನು, ಸಮಾಜ ಸುಧಾರಕರನ್ನು, ಸಮಿತಿಗಳನ್ನು, ಕಲೆಯಲ್ಲಿ ಪರಿಣಿತಿ ಹೊಂದಿದ ಕಲೆಗಾರರನ್ನು, ಸಂಗೀತಗಾರರನ್ನು ಒಂದೆಡೆ ಸೇರಿಸಿ ಒಂದು ಅರ್ಥಪೂರ್ಣ ಸಮಾರಂಭ ಏರ್ಪಡಿಸಿರುವುದು ಶ್ಲಾಘನೀಯ. ಇಂತಹ ಅಭೂತಪೂರ್ವ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿರುವುದು ನನ್ನ ಜೀವನದ ಅವಿಸ್ಮರಣಿಯ ಕ್ಷಣ” ಎಂದರು.

Also read: ಜಾತಿ ಗಣತಿ ರಾಜಕೀಯ ಅಸ್ತ್ರ: ಬಸವರಾಜ ಬೊಮ್ಮಾಯಿ ಆರೋಪ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನದ ಅಡಿಯಲ್ಲಿ ಆಡಳಿತ ನೀಡಲು ವಿಫಲರಾದಾಗ, ಸರ್ಕಾರದ ಉತ್ತಮ ನೀತಿಗಳನ್ನು ಕಾರ್ಯಾಂಗ ಸಮರ್ಪಕವಾಗಿ ಅನುಷ್ಟಾನ ಮಾಡದಿದ್ದರೆ, ಅವರ ಕಾರ್ಯವೈಖರಿ ಪಾರದರ್ಶಕವಾಗಿಲ್ಲದಿದ್ದರೆ ಅದನ್ನು ಎತ್ತಿ ಹಿಡಿಯುವ ಸಂಪೂರ್ಣ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ. ಸುಸಂಸ್ಕøತ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಹಿರಿದಾದುದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು, 145 ಕೋಟಿ ಜನರ ಹಕ್ಕುಗಳನ್ನು ಸಂರಕ್ಷಣೆ ಮಾಡಲು, ಸಂವಿಧಾನವನ್ನು ಸಂರಕ್ಷಿಸಲು, ಪ್ರಜಾಪ್ರಭುತ್ವದ ವ್ಯವಸ್ಥೆ ಸಮರ್ಪಕವಾಗಿ ಎಲ್ಲಾ ಜನರಿಗೂ ಮುಟ್ಟಿಸಲು ಪತ್ರಕರ್ತರು ಅವಶ್ಯ. ಸರ್ಕಾರ ಜನಪರ ಆಡಳಿತ ನೀಡಲು ವಿಫಲರಾದಾಗ ಈ ರೀತಿಯ ಹೋರಾಟಗಳು, ಪ್ರತೀ ದೇಶದಲ್ಲಿ, ಪ್ರಪಂಚದಾದ್ಯಂತ ನಡೆಸುವುದು ಅನಿವಾರ್ಯವಾಗಿದೆ. ಈ ರೀತಿಯ ಹೋರಾಟ ನಡೆಸಲು ಜನರ ಬೆಂಬಲ ಬೇಕಾಗಿದೆ ಎಂದರು.

“ಈ ಕಾರ್ಯಕ್ರಮದ ಮೂಲಕ ರಾಜ್ಯ ಸರ್ಕಾರಕ್ಕೆ ಕಿವಿ ಮಾತನ್ನು ಹೇಳಲು ಬಂದಿದ್ದೇನೆ. ರಾಜ್ಯ ಸರ್ಕಾರ ಈ ಕೂಡಲೇ ಪತ್ರಕರ್ತ ಮುಖಂಡರನ್ನು ಕರೆಯಿಸಿ ಮಾತುಕತೆ ನಡೆಸಿ ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸಬೇಕು. ಸರ್ಕಾರ ಮಹಿಳೆಯರು ಸೇರಿದಂತೆ ವಿವಿಧ ವರ್ಗಗಳ ಜನತೆಗೆ ಉಚಿತ ಭಾಗ್ಯ ನೀಡುವುದಾದರೆ, ರಾಜ್ಯದಲ್ಲಿರುವ ಹದಿನಾರು ಸಾವಿರ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಯಾಕಾಗಿ ಹಿಂದೆ ಮುಂದೆ ಯೋಚಿಸುತ್ತಿರಾ? ಪತ್ರಕರ್ತರು ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಪ್ರಯಾಣಿಸಲು ನಿಮ್ಮಿಂದ ಉಚಿತ ಬಸ್ ಪ್ರಯಾಣ ಕೇಳುತ್ತಿಲ್ಲ. ಬದಲಿಗೆ ಸಮಾಜದ ಆಗು ಹೋಗುಗಳು ಹಾಗು ನಿಮ್ಮದೇ ಸರ್ಕಾರದ ವಿವಿಧ ಕಾರ್ಯಯೋಜನೆಗಳ ತುಲನಾತ್ಮಕ ವರದಿಗಳಿಗಾಗಿ ಕೇಳುತ್ತಿರುವ ಬೇಡಿಕೆಗಳನ್ನು ಸಹಾನುಬೂತಿಯಿಂದ ನೀಡಬೇಕಾದುದು ಸರ್ಕಾರದ ಕರ್ತವ್ಯ. ಪತ್ರಕರ್ತರಿಗೆ ಯಾವುದೇ ಆದಾಯವಿಲ್ಲ, ನಿಗದಿತ ಸಂಬಳವಿಲ್ಲ, ಒಪ್ಪತ್ತಿನ ಊಟಕ್ಕೂ ಕೈಚಾಚುವಂತಹ ಹೀನಾಯ ಸ್ಥಿತಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪತ್ರಕರ್ತರ ವಲಯದಲ್ಲಿದೆ. ಅವರಿಗೂ ಸಂಸಾರವಿದೆ, ಅವರ ನೋವಿಗೆ ಸ್ಪಂಧಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದರು.

“ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸುವೆ. ಪತ್ರಕರ್ತರು ಈ ಬಗ್ಗೆ ಯಾವುದೇ ಚಿಂತೆ ಮಾಡುವುದು ಬೇಡ. ನಿಮ್ಮ ಸಮಸ್ಯೆಗಳ ಅರಿವು ನನಗೆ ತಿಳಿದಿದೆ. ಸರ್ಕಾರ ನನ್ನ ಮನವಿಗೂ ಸ್ಪಂದಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ನಾನೇ ಮುಂದಾಳತ್ವ ವಹಿಸುವೆ” ಎಂದು ನಿವೃತ್ತ ನ್ಯಾಯ ಮೂರ್ತಿಗಳಾದ ವಿ. ಗೋಪಾಲ ಗೌಡ ಭರವಸೆ ನೀಡಿದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post