ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನಸೌಧ, ವಿಕಾಸಸೌಧಗಳ ಪಡಸಾಲೆಗಳು, ವಿಧಾನಮಂಡಲದ ಸಭಾಂಗಣಗಳು, ಸಚಿವರು ಮತ್ತು ಅಧಿಕಾರಿಗಳ ಕಚೇರಿಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳ ಪರವಾದ ಘೋಷಣೆಗಳನ್ನು ಫಲಕಗಳ ಮೂಲಕ ಅಳವಡಿಸಿ ಸರ್ಕಾರದ ಕನ್ನಡ ಬದ್ಧತೆಯನ್ನು ಸ್ಥಿರೀಕರಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಡಾ.ಬಿಳಿಮಲೆ ವಿಧಾನಸೌಧ, ವಿಕಾಸಸೌಧಗಳು ರಾಜ್ಯ ಆಡಳಿತದ ಶಕ್ತಿ ಕೇಂದ್ರಗಳಾಗಿದ್ದು, ಕರ್ನಾಟಕದ ಹೆಮ್ಮೆಯ ಪ್ರತೀಕಗಳಾಗಿವೆ. ಸಾರ್ವಜನಿಕರು, ಗಣ್ಯರು, ದೇಶ ವಿದೇಶಗಳ ಪ್ರತಿನಿಧಿಗಳು ವಿವಿಧ ಕೆಲಸ ಕಾರ್ಯಗಳಿಗೆ ಇಲ್ಲಿಗೆ ನಿರಂತರ ಭೇಟಿ ನೀಡುವುದಿದ್ದು, ಈ ಕಟ್ಟಡಗಳ ವಾಸ್ತುಶಿಲ್ಪಕ್ಕೆ ವಿಶ್ವಾದ್ಯಂತ ಜನರು ಮನಸೋತಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಸುವರ್ಣ ಕರ್ನಾಟಕ ಸಂಭ್ರಮ-50ರನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಈ ಕುರಿತಾದ ನಿರ್ಧಾರವು ಅರ್ಥಪೂರ್ಣ ಆಚರಣೆಗೆ ಪೂರಕವಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕುರಿತಂತೆ ನಿರ್ದಿಷ್ಟ ರೂಪುರೇಷೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ಒದಗಿಸಲಿದೆ ಎಂದು ಡಾ.ಬಿಳಿಮಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post