ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲೇ ಇಲಾಖೆಯಲ್ಲಿ ಹೊಸ ಸುಧಾರಣೆಗಳನ್ನು ಜಾರಿ ಮಾಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಇದೀಗ ಸಾವಿರಾರು ಜನರಿಗೆ ಆಶ್ರಯ ಒದಗಿಸುವ ಗ್ರಾನೈಟ್ ಕಲ್ಲು ಗಣಿಗುತ್ತಿಗೆಯನ್ನು ಹರಾಜು ರಹಿತ ನೀಡಿ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ನಿರಾಣಿ ಅವರ ಸತತ ಪರಿಶ್ರಮದ ಫಲವಾಗಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಲ್ಲು ಗಣಿಗುತ್ತಿಗೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ತುಮಕೂರು ಜಿಲ್ಲೆ ಶಿರಾ ತಾಲ್ಲೂಕು, ಮದ್ದಕ್ಕನಹಳ್ಳಿ ಗ್ರಾಮದ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ (ಸರ್ವೆ ನಂ.12 12.20 ಎಕರೆ) ಗ್ರೇ ಗ್ರಾನೈಟ್ ಕಲ್ಲುಗಣಿ ನಡೆಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಲಾಗಿದೆ. ಇದರಿಂದಾಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಲಿದ್ದು, ಅವರ ಕುಟುಂಬಕ್ಕೂ ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಆಶ್ರಯ ಸಿಗಲಿದೆ ಎಂದಿದ್ದಾರೆ.
ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ (ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 56ರಡಿ ವಿಶೇಷ ಪ್ರಕರಣವೆಂದು) ಪರಿಗಣಿಸಿ ಹರಾಜು ರಹಿತವಾಗಿ ಮಂಜೂರಾತಿ ಮಾಡಲು ಶುಕ್ರವಾರ ನಡೆದ ಸಂಪುಟ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೊಂದಣಿ ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಈ ಸಂಘಕ್ಕೆ ಮಾನವೀಯತೆಯ ದೃಷ್ಟಿಯಿಂದ ಹರಾಜು ರಹಿತವಾಗಿ ಮಂಜೂರು ಮಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜನಸ್ನೇಹಿ ಎಂಬುದನ್ನು ಸಚಿವ ನಿರಾಣಿ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಜಿಡ್ಡುಗಟ್ಟಿರುವ ವ್ಯವಸ್ಥೆಗೆ ಮುಕ್ತಿ ಹಾಡಲು ಮುಂದಾಗಿರುವ ನಿರಾಣಿ ಅವರು, ಈ ಹಿಂದೆ ಇದೇ ಇಲಾಖೆಯ ಸಚಿವರುಗಳು ನಿರ್ಲಕ್ಷ್ಯ ಮಾಡಿದ್ದ ಕಡತಗಳನ್ನು ವಿಲೇವಾರಿ ಮಾಡಿ ಇಲಾಖೆಯನ್ನು ಜನಾನುರಾಗಿ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ನಿರ್ಲಕ್ಷ್ಯ ಮಾಡಿದ್ದ ಹಿಂದಿನ ಸಚಿವರು
ವಾಸ್ತವವಾಗಿ ಇದು ಎಂದೋ ಆಗಬೇಕಾಗಿದ್ದ ಕೆಲಸವಾಗಿತ್ತು. ಆದರೆ, ಈ ಹಿಂದೆ ಇದೇ ಇಲಾಖೆಯ ಸಚಿವರಾಗಿದ್ದ ಕೆಲವರು ಉದಾಸೀನ ತೋರಿದ್ದರಿಂದ ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಕಲ್ಲು ಗಣಿ ಗುತ್ತಿಗೆಯನ್ನು ಮಂಜೂರು ಮಾಡಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದ ಇಲಾಖೆಯ ಹಂತದಲ್ಲೇ ನೆನೆಗುದಿಗೆ ಬಿದ್ದಿತ್ತು.
ಇದರ ಬಗ್ಗೆ ಸವಿಸ್ತಾರವಾಗಿ ಅಧ್ಯಯನ ನಡೆಸಿದ ಸಚಿವರು, ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆಗೆ ಚರ್ಚೆಸಿ ಇದಕ್ಕೊಂದು ಪರಿಹಾರ ಒದಗಿಸಲೇಬೇಕು ಎಂಬ ದೃಢ ಸಂಕಲ್ಪ ಮಾಡಿದ ಪರಿಣಾಮ ಇಂದು ಕಾರ್ಯರೂಪಕ್ಕೆ ಬಂದಿದೆ. ಸಂಘಕ್ಕೆ 1995ರಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ಗಣಿ ಗುತ್ತಿಗೆಯನ್ನು ಮಂಜೂರು ಮಾಡಿ, ಪುನಃ 20 ವರ್ಷಗಳ ಅವಧಿಗೆ ನವೀಕರಿಸಲಾಗಿತ್ತು. ಇದಾದ ಬಳಿಕ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ ನಿಯಮದಂತೆ ನಾಲ್ಕು ತಿಂಗಳ ಅವಧಿಯೊಳಗೆ ನೋಂದಣಿ ಮಾಡಿಸಿ ಕೊಂಡಿರಲಿಲ್ಲ. ಈ ಕಾರಣದಿಂದಾಗಿ ಉಪನೋಂದಣಾಧಿಕಾರಿಗಳು 2015ರ ಡಿಸೆಂಬರ್ 29ರಂದು ನೊಂದಣಿ ಮಾಡಲು ಅವಕಾಶವಿಲ್ಲವೆಂದು ಹೇಳಿದ್ದರು ಎನ್ನಲಾಗಿದೆ.
ಬಳಿಕ ನೋಂದಣಿ ಮಾಡಿಸಿಕೊಳ್ಳಲು ಸಂಘವು 2015ರ ಡಿಸೆಂಬರ್ 29ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಂಘದ ಈ ಪ್ರಸ್ತಾವನೆಯ ಅಭಿಪ್ರಾಯ ಕೋರಿ ಕಾನೂನು ಇಲಾಖೆಗೆ ಸಲ್ಲಿಸಲಾಗಿತ್ತು. ನಂತರ ಕಾನೂನು ಇಲಾಖೆಯು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿ, ಈ ಗಣಿ ಗುತ್ತಿಗೆಯನ್ನು ಸದರಿ ಸಂಘಕ್ಕೆ ನೀಡುವುದರಿಂದ ಆರ್ಥಿಕ ಹೊರೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಪುನ: ಗುತ್ತಿಗೆಯನ್ನು ಸಂಘಕ್ಕೆ ಮರು ಮಂಜೂರು ಮಾಡಲು ಅಂದಿನ ಸಚಿವರು ಸೂಚಿಸಿದ್ದರೂ, ಸಂಘವು 1995 ರಿಂದ ಸ್ವಾಧೀನಕ್ಕೆ ನೀಡಲು ಕೋರಿತ್ತು. ಆದರೆ ಹಿಂದಿನ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ನಿಯಮಾವಳಿಗಳ ಪ್ರಕಾರ ಹಿಂದಿನ ದಿನಾಂಕದಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದರು.
ಆದರೆ 2017 ತಿದ್ದುಪಡಿ ನಿಯಮ ಜಾರಿಯಾದ ನಂತರ ಮರು ಮಂಜೂರಾತಿಗೆ ಅವಕಾಶವಿರುತ್ತದೆ. ಆದ್ದರಿಂದ ಸದರಿ ಗಣಿಗುತ್ತಿಗೆಯನ್ನು ರದ್ದುಪಡಿಸಿ ಹರಾಜು ಮೂಲಕ ವಿಲೇವಾರಿ ಮಾಡಲು ಟಿಪ್ಪಣಿ ಮಂಡಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವರ ಅಭಿಪ್ರಾಯ ಭಿನ್ನವಾಗಿದ್ದರಿಂದ ಕಡತವನ್ನು ಮುಂದಿನ ನಿರ್ಣಯಕ್ಕೆ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲಾಗಿತ್ತು.
20.9.2018ರ ಸಚಿವ ಸಂಪುಟ ಸಭೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಅಡ್ವೊಕೇಟ್ ಜನರಲ್ರವರು ದಿನಾಂಕ 15.2.2019 ರಂದು ನೀಡಿದ ಅಭಿಪ್ರಾಯದಲ್ಲಿ ಸದರಿ ಕಲ್ಲುಗಣಿ ಗುತ್ತಿಗೆಯನ್ನು ಮರು ಮಂಜೂರು ಮಾಡಬಹುದಾಗಿ ತಿಳಿಸಿದ್ದಾರೆ.
ಇದೀಗ ಮುಖ್ಯಮಂತ್ರಿ ಹಾಗೂ ಸಚಿವರ ಸತತ ಪರಿಶ್ರಮದ ಫಲವಾಗಿ ಸಚಿವ ಸಂಪುಟ ಸಭೆಯಲ್ಲಿ ಗಣಿ ಗುತ್ತಿಗೆ ಮರು ಮಂಜೂರಾತಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post