ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ Minister MBPatil ಅವರು ಭಾರತದಲ್ಲಿನ ಅಮೆರಿಕದ ಕಾನ್ಸುಲೇಟ್ ಜನರಲ್ ಶ್ರೀ ಕ್ರಿಸ್ಟೋಫರ್ ಡಬ್ಲ್ಯು. ಹೋಡ್ಜಸ್ ಅವರ ಜೊತೆ ಮಂಗಳವಾರ ಇಲ್ಲಿ ಸಭೆ ನಡೆಸಿದರು.
‘ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಗುರುತಿಸಿರುವ ಪ್ರದೇಶದಲ್ಲಿ ಕಾನ್ಸುಲೇಟ್ ಜನರಲ್ ಕಚೇರಿ ಸ್ಥಾಪಿಸುವುದನ್ನು ಪರಿಗಣಿಸಬೇಕು’ ಎಂದು ಸಚಿವ ಪಾಟೀಲ ಅವರು ಸಭೆಯಲ್ಲಿ ಅಮೆರಿಕದ ಕಾನ್ಸುಲೇಟ್ ಜನರಲ್ ಅವರಿಗೆ ಮನವಿ ಮಾಡಿಕೊಂಡರು.
‘ಬೆಂಗಳೂರಿನ ಹೊರವಲಯದಲ್ಲಿ ಉದ್ದೇಶಿತ ಜ್ಞಾನ, ಆರೋಗ್ಯ ರಕ್ಷಣೆ, ನಾವೀನ್ಯತೆ ಮತ್ತು ಸಂಶೋಧನೆ (ಕೆಎಚ್ಐಆರ್ ಸಿಟಿ) ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಟೀಲ ಅವರು ಹೋಡ್ಜಸ್ ಅವರಿಗೆ ಸಭೆಯಲ್ಲಿ ಮಾಹಿತಿ ನೀಡಿದರು. ‘ಇದು ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಬಲಪಡಿಸಲು ಸಹಾಯ ಮಾಡಲಿದೆ. 2,000 ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ‘ಕೆಎಚ್ಐಆರ್ ಸಿಟಿ’ಗೆ ಸಂಬಂಧಿಸಿದ ಅಂತಿಮ ಯೋಜನೆಯು ಮುಂದಿನ 2 ರಿಂದ 3 ತಿಂಗಳಲ್ಲಿ ಸಿದ್ಧಗೊಳ್ಳಲಿದೆ. ‘ಕೆಎಚ್ಐಆರ್ ಸಿಟಿ’ಗೆ ಸಂಬಂಧಿಸಿದಂತೆ ಮುಂಬರುವ ತಿಂಗಳುಗಳಲ್ಲಿ ಅಮೆರಿಕ ಮತ್ತು ಅರಬ್ ಅಮೀರರ ಒಕ್ಕೂಟದಲ್ಲಿ (ಯುಎಇ) ರೋಡ್ಷೋಗಳನ್ನು ನಡೆಸಲು ನಾವು ಯೋಜಿಸಿದ್ದೇವೆ’ ಎಂದು ಪಾಟೀಲ ಅವರು ಮಾಹಿತಿ ನೀಡಿದರು.
Also read: Rs. 115 Crore recovered from KIADB plot allottees: Minister MB Patil
ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಮಷಿನ್ಟೂಲ್ಸ್ ಮತ್ತಿತರ ವಲಯಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳ ಬಗ್ಗೆಯೂ ಸಚಿವ ಪಾಟೀಲ ಅವರು ಕಾನ್ಸುಲೇಟ್ ಜನರಲ್ ಅವರಿಗೆ ಮಾಹಿತಿ ನೀಡಿದರು,
ಕರ್ನಾಟಕವು ಈಗಾಗಲೇ ಐಟಿ ಮತ್ತು ಡಿಸೈನ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇದೆ. ಸರಕುಗಳ ತಯಾರಿಕಾ ವಲಯದಲ್ಲಿಯೂ ರಾಜ್ಯವನ್ನು ಇದೇ ಬಗೆಯಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಹೊಸ ಉದ್ಯಮಗಳ ಸ್ಥಾಪನೆಗೆ ನೆರವಾಗುವ ಅತ್ಯುತ್ತಮ ಸಂಪರ್ಕ ಸೌಲಭ್ಯಗಳು ಇವೆ’ ಎಂದೂ ಸಚಿವ ಶ್ರೀ ಪಾಟೀಲ ಅವರು ವಿವರಿಸಿದರು.
‘ಕರ್ನಾಟಕದ 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಅಮೆರಿಕದ ಕಂಪನಿಗಳು ಆಸಕ್ತಿ ಹೊಂದಿವೆ’ ಎಂದು ಕ್ರಿಸ್ಟೋಫರ್ ಡಬ್ಲ್ಯು. ಹೋಡ್ಜಸ್ ಅವರು ಹೇಳಿದರು. ಸಚಿವರ ಜೊತೆಗಿನ ಸಭೆಯಲ್ಲಿ ಅಮೆರಿಕದ ಕಂಪನಿಗಳ ಪರವಾಗಿ ಅವರು ಈ ಇಂಗಿತ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ಮೈಸೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ ಅಮೆರಿಕದ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಇಂತಹ ನಗರಗಳಲ್ಲಿ ಇರುವ ಮೂಲಸೌಲಭ್ಯಗಳ ಲಭ್ಯತೆ ಕುರಿತೂ ಹೋಡ್ಜಸ್ ಚರ್ಚಿಸಿದರು.
‘ಬೆಂಗಳೂರಿನ ಆಚೆಗಿನ ನಗರಗಳಲ್ಲಿ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಅಮೆರಿಕದ ವಾಣಿಜ್ಯ ನಿಯೋಗವು ಫೆಬ್ರುವರಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಲಿದೆ. ರಾಜ್ಯದಲ್ಲಿನ 2 ಮತ್ತು 3 ಹಂತದ ನಗರಗಳು ಅಮೆರಿಕದ ಕಂಪನಿಗಳಿಗೆ ಸೂಕ್ತವಾದ ಮೂಲಸೌಲಭ್ಯಗಳನ್ನು ಒದಗಿಸಲಿವೆಯೇ ಎನ್ನುವುದನ್ನು ನಿಯೋಗವು ಪರಿಶೀಲಿಸಲಿದೆ’ ಎಂದು ಶ್ರೀ ಹೋಡ್ಜಸ್ ಅವರು ಶ್ರೀ ಪಾಟೀಲ ಅವರ ಗಮನಕ್ಕೆ ತಂದರು.
ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post