ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಚೆನ್ನೈಸ್ ಅಮಿರ್ತಾ ಇಂಟರ್ನ್ಯಾಷನಲ್ ಇನ್’ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್’ಮೆಂಟ್ ವಿದ್ಯಾರ್ಥಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ. ಕೇವಲ 19 ನಿಮಿಷ 17 ಸೆಕೆಂಡ್’ನಲ್ಲಿ ಒಟ್ಟು 55 ಕಲ್ಲಂಗಡಿ ಹಣ್ಣುಗಳಲ್ಲಿ ರಾಷ್ಟ್ರಗೀತೆಯನ್ನು #National Anthem ಕೆತ್ತಿದ್ದಾರೆ.
ಭಾನುವಾರ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಚೆನ್ನೈಸ್ ಅಮಿರ್ತಾ ಇಂಟರ್ನ್ಯಾಷನಲ್ ಇನ್’ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್’ಮೆಂಟ್ ಈ ದಾಖಲೆಗೆ ಸಾಕ್ಷಿಯಾಯಿತು.
ರಾಷ್ಟ್ರಗೀತೆಯ ಸಾಲುಗಳನ್ನು ಕೆತ್ತಲು ಒಟ್ಟು 55 ಕಲ್ಲಂಗಡಿ ಹಣ್ಣುಗಳನ್ನು ಬಳಸಿಕೊಳ್ಳಲಾಯಿತು. ಜನಗಣ ಮನ ಅಧಿನಾಯಕ ಜಯ ಹೇ…. ಎಂದು ಸಾಗುವ ಸಾಲುಗಳನ್ನು ಕಲ್ಲಂಗಡಿ ಹಣ್ಣಿನ ಮೇಲೆ ಆಕರ್ಷಕವಾಗಿ ಕೆತ್ತುವ ಚಮತ್ಕಾರವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
Also read: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ | ನಾಲ್ವರ ಬಂಧನ | ಚಿನ್ನ, ನಗದು ವಶಕ್ಕೆ
ಇದೇ ಸಂದರ್ಭ ವಿದ್ಯಾರ್ಥಿನಿ ಪೂಜಾ ನಾಯ್ಕ್ ಅವರು ಒಂದು ಗಂಟೆಯಲ್ಲಿ 76 ಕಲ್ಲಂಗಡಿ ಹಣ್ಣುಗಳ ಮೇಲೆ ಹೂವಿನ ವಿನ್ಯಾಸ ಕೆತ್ತಿರುವ ದಾಖಲೆಯೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರ್ಪಡೆಗೊಂಡಿತು. ಈ ಹಿಂದೆ ಆಂಧ್ರದ ಸಂಸ್ಥೆಯೊಂದು ಒಂದು ಗಂಟೆಯಲ್ಲಿ 30 ಕಲ್ಲಂಗಡಿ ಹಣ್ಣಿನಲ್ಲಿ ಹೂವಿನ ವಿನ್ಯಾಸ ರಚಿಸಿದ ದಾಖಲೆ ಇತ್ತು. ಇದನ್ನು ಪೂಜಾ ನಾಯ್ಕ್ ಹಿಂದಿಕ್ಕಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಸದಸ್ಯರೂ, ಕರ್ನಾಟಕ ಲೋಕಾಯುಕ್ತದ ನಿವೃತ್ತ ವಿಜಿಲೆನ್ಸ್ ನಿರ್ದೇಶಕರೂ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಡಿ.ಎನ್. ಮುನಿಕೃಷ್ಣ ಹಾಗೂ ಐ.ಬಿ.ಆರ್.ನ ಅಡ್ಜುಡಿಕೇಟರ್ ಹರೀಶ್ ಆರ್. ಮುಖ್ಯ ಅತಿಥಿಯಾಗಿದ್ದು, ಸಂಸ್ಥೆಯ ಅಧ್ಯಕ್ಷರಾದ ಆರ್. ಭೂಮಿನಾಥನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶೈಕ್ಷಣಿಕ ನಿರ್ದೇಶಕ ಲಿಯೋ ಪ್ರಶಾಂತ್, ವಲಯ ಮುಖ್ಯಸ್ಥೆ ಬಿ. ಭಾನುಮತಿ, ಉಪಪ್ರಾಂಶುಪಾಲ ದೀಪೇಶ್ ರಾಜ್, ವಿಭಾಗ ಮುಖ್ಯಸ್ಥ ಶೆಫ್ ಸುನಿಲ್ ಯೋಗಿ, ತರಬೇತುದಾರ ಕಾರ್ವರ್ ಸೆಂಥಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















