ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆರೋಗ್ಯ ಇಲಾಖೆ ಮತ್ತು ಇಂಡಿಯನ್ ಯುನಿಟಿ ಸೆಂಟರ್ ಸಹಯೋಗದಲ್ಲಿ ನಡೆದ ನೈಂಟಿಗೇಲ್ ಶುಶ್ರೂಷ ಅಧಿಕಾರಿಗಳ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಜಯದೇವ ಆಸ್ಪತ್ರೆ ಒಂದು ಮಾದರಿ. ಈ ಆಸ್ಪತ್ರೆಯಲ್ಲಿ ಎಲ್ಲಾ ರಾಜಕಾರಣಿಗಳು ಚಿಕಿತ್ಸೆ ಪಡೆಯುತ್ತಾರೆ. ಆ ರೀತಿಯ ಗುಣಮಟ್ಟ, ಶುಚಿತ್ವ, ಶಿಸ್ತು ಜಯದೇವ ಆಸ್ಪತ್ರೆಯಲ್ಲಿದೆ. ಇಲ್ಲಿರುವ ವ್ಯವಸ್ಥೆಯನ್ನೇ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ರೂಪಿಸಲು ಸಾಧ್ಯವಿದೆ. ಇದಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಹಾಗೂ ಶ್ರದ್ಧೆ ಮಾತ್ರ ಎಂದರು.

ರೋಗಿಗಳ ಎಲ್ಲಾ ರೀತಿಯ ಚಿಕಿತ್ಸೆಯ ನಿಜವಾದ ವಾರಸುದಾರರು ಶುಶ್ರೂಷಕಿಯರು. ಕಾಲ ಕಾಲಕ್ಕೆ ಶುಶ್ರೂಷಿಕಿಯರು ನಗುತ್ತಾ ಕೆಲಸ ಮಾಡಿದರೆ ಅರ್ಧ ಕಾಯಿಲೆಯೇ ಗುಣವಾಗುತ್ತದೆ. ಆತ್ಮವಿಶ್ವಾಸ ಬಹಳಷ್ಟು ರೋಗಕ್ಕೆ ಮದ್ದು. ನರ್ಸ್ ಗಳ ಸೇವಾ ಮನೋಭಾವ ಮತ್ತು ನಗು ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸಿ ಗುಣಮುಖರಾಗಲು ನೆರವಾಗುತ್ತದೆ ಎಂದು ಮೆಚ್ಚುಗೆ ಸೂಚಿಸಿದರು.

ವೇದಿಕೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು










Discussion about this post