ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್.ಕಾಂತರಾಜು ನೇತೃತ್ವದ ಸಮೀಕ್ಷೆಯ ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ Minister Shivaraj Thangadagi ಅವರು ಹೇಳಿದ್ದಾರೆ.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಾಂತರಾಜು ವರದಿಯನ್ನು ಜಾತಿ ಗಣತಿ ಎಂದು ಕರೆಯಲಾಗುತ್ತಿದೆ. ಮೂಲವಾಗಿ ಇದು ಜಾತಿ ಗಣತಿ ಸಮೀಕ್ಷೆ ಅಲ್ಲವೇ, ಅಲ್ಲ. ಇದು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ. ಆದರೆ ಈ ವರದಿಯನ್ನು ಜಾತಿ ವರದಿ ಎಂದು ಕರೆಯುವುದು ಸರಿಯಲ್ಲ ಎಂದು ತಿಳಿಸಿದರು.
ಕಾಂತರಾಜು ಅವರ ವರದಿಯಿಂದ ಪ್ರತಿಯೊಂದು ಸಮಾಜದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದ ಅಂಕಿ- ಅಂಶ ಸ್ಪಷ್ಟವಾಗಿ ತಿಳಿಯಲಿದೆ. ವರದಿ ವಿರೋಧಿಸಿ ಕೆಲ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಸರ್ಕಾರಕ್ಕೆ ಸಲ್ಲಿಕೆಯೇ ಆಗಿಲ್ಲ. ವರದಿ ಸ್ವೀಕಾರ ಮಾಡಿದರೆ ಅದನ್ನು ಪಡೆದು ಅಧ್ಯಯನ ಮಾಡುತ್ತೇನೆ. ವರದಿಯನ್ನು ವಿರೋಧ ಮಾಡುತ್ತಿದ್ದವರೂ ವರದಿ ನೋಡಿದ್ದರೆ ನಮಗೆ ತಿಳಿಸಲಿ. ನಿರ್ಮಲಾನಂದನಾಥ ಸ್ವಾಮೀಜಿ ಅವರಲ್ಲೂ ಕೂಡ ಮನವಿ ಮಾಡಿಕೊಳ್ಳುತ್ತೇನೆ. ವರದಿಯೇ ನೋಡದೆ ಅದನ್ನು ವಿರೋಧ ಮಾಡುವುದು ಸರಿಯಲ್ಲ. ಜಾತಿ ಜನಗಣತಿ ಅಲ್ಲ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿರುವುದು. ಪ್ರತಿಯೊಂದು ಸಮುದಾಯದ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ತಿಳಿಯುವ ಸಲುವಾಗಿ ಸಮೀಕ್ಷೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.
Also read: ಯುವಕರ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ವರದಿ ಸಿದ್ಧವಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ವರದಿ ಸ್ವೀಕಾರವಾಗಿಲ್ಲ. ವರದಿ ಸಲ್ಲಿಕೆಯಾಗದೇ ವರದಿ ಬಗ್ಗೆ ಅಪಸ್ವರ ತೆಗೆದುಯುವುದು ಸರಿಯಲ್ಲ. ಯಾರ ರಾಜಕೀಯ ಹಿತಾಸಕ್ತಿ ಕೂಡ ಇದರಲ್ಲಿ ಇಲ್ಲ ಎಂದರು.
ಬಿಜೆಪಿಯವರು ಮೊದಲು ಜಾಮೂನು ಕೊಟ್ಟು ಬಳಿಕ ವಿಷ ಕೊಡುತ್ತಾರೆ ಎಂಬ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ನಮಗೆ ಮೊದಲೇ ಗೊತ್ತು. ಸೋಮಶೇಖರ್ ಅವರಿಗೆ ಇದೀಗ ಸತ್ಯದ ಅರಿವು ಆಗಿದೆ. ಈ ಹಿಂದೆ ಪಕ್ಷೇತರರಾಗಿ ಗೆದ್ದು ಬಿಜೆಪಿ ಸರ್ಕಾರ ರಚನೆ ಮಾಡಲು ಬೆಂಬಲ ಕೊಟ್ಟ ನಮಗೆ ಏನು ಮಾಡಿದರೂ ಎಂಬುದು ರಾಜ್ಯದ ಜನತೆಗೆ ತಿಳಿದಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















