ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಚಿವ ಸಂಪುಟದಲ್ಲಿ ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವುದಾಗಿ ಹಾವೇರಿ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ, ಹಾವೇರಿ ಜಿಲ್ಲಾ ಉಸ್ತುವಾರಿಯಾಗಿ ನೇಮಕವಾದ ಬಳಿಕ ಸರ್ಕಾರದ ಸೂಚನೆಯಂತೆ ಉಸ್ತುವಾರಿ ಜಿಲ್ಲೆಯಲ್ಲಾದ ನೆರೆಹಾವಳಿ ಪರಿಶೀಲನೆಗೆ ತೆರಳುವ ಮುನ್ನ ಬೆಂಗಳೂರು ನಿವಾಸದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮತ್ತೆ ಕೃಷಿ ಖಾತೆ ಕೊಟ್ಟರೂ ಸಂತೋಷ. ಇಲಾಖೆಯಲ್ಲಿ ಈಗಾಗಲೇ ಹಲವು ಪ್ರಗತಿಪರ ರೈತಪರ ಕೆಲಸಗಳನ್ನು ಮಾಡಿದ್ದು, ಇನ್ನೊಂದಿಷ್ಟು ಸಾಧನೆ ಮಾಡಬೇಕಿದೆ. ಅದೇನೇ ಇರಲಿ ಯಾವುದೇ ಖಾತೆ ಕೊಟ್ಟರೂ ಶ್ರದ್ಧೆನಿಷ್ಠೆಯಿಂದ ನಿಭಾಯಿಸುತ್ತೇನೆಂಬ ಭರವಸೆಯಿದೆ. ಸದ್ಯಕ್ಕಿನ್ನೂ ಇಂತಹದ್ದೇ ಖಾತೆ ಎಂದು ನಿಕ್ಕಿಯಾಗಿಲ್ಲ.ಯಾವುದೇ ಇಲಾಖೆ ಕೊಟ್ಟರೂ ಪ್ರಗತಿಪರವಾಗಿ ಮಾಡುತ್ತೇನೆಂದರು.

ಹಾವೇರಿ ಜಿಲ್ಲೆಯ ಮೇಲ್ಮನೆ ಸದಸ್ಯ ಆರ್. ಶಂಕರ್ಗೆ ಸಚಿವ ಸ್ಥಾನ ನೀಡದ ಬಗ್ಗೆ ಯಾವುದೇ ಬೇಸರವಿಲ್ಲ. ಅದರಂತೆ ಪಕ್ಷದಲ್ಲಿ ಯಾವುದೇ ಅಸಮಾಧಾನವೂ ಇಲ್ಲ.ಏನೇಯಿದ್ದರೂ ವರಿಷ್ಠರು ಅದೆಲ್ಲವನ್ನೂ ಸರಿಪಡಿಸುತ್ತಾರೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿ.ಸಿ. ಪಾಟೀಲ್ ಉತ್ತರಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















