ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗದಗ ಜಿಲ್ಲೆಯ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಕುರ್ತಕೋಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೈಕಲ್ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರ ಮಟ್ಟದ ಸೈಕ್ಲಿಂಗ್ ಕ್ರೀಡಾಪಟುವಾಗಿರುವ ಪವಿತ್ರಾ ಅವರಿಗೆ ಸೈಕಲ್ ಅಗತ್ಯವಿರುವ ಬಗ್ಗೆ ತಿಳಿದುಬಂದ ಹಿನ್ನೆಲೆಯಲ್ಲಿ ಇಲಾಖೆಗೆ ವಿಷಯ ಮುಟ್ಟಿಸಲಾಗಿತ್ತು. ಕೇವಲ 8 ದಿನಗಳಲ್ಲಿ ಕೆನಡಾದಿಂದ ಸೈಕಲ್ ತರಿಸಿಕೊಡುವ ಕೆಲಸವನ್ನು ಯೋಜನಾ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾಡಿದ್ದಾರೆ. ಸರ್ಕಾರದ ಅನುದಾನ ಪಡೆಯದೆ ದೇಣಿಗೆ ಪಡೆದು ಈ ಕಾರ್ಯವನ್ನು ಮಾಡಿರುವುದಕ್ಕಾಗಿ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಪವಿತ್ರಾ ಕುರ್ತಕೋಟಿ ಪಟಿಯಾಲದಲ್ಲಿ ಏರ್ಪಡಿಸಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು.
ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಟ್ರಾಕ್ ನ್ನು ವಿಜಯಪುರದ ಮೇಲೊಡ್ರೋಮ್ ನಲ್ಲಿ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಈ ಸೈಕಲ್ ನ್ನು ಕೆನಡಾ ದೇಶದಿಂದ ತರಿಸಲಾಗಿದೆ. ಇದರ ವೆಚ್ಚ 5 ಲಕ್ಷ ರೂಪಾಯಿ. ಈ ವೆಚ್ಚವನ್ನು ಎಂಬೆಸ್ಸೆ, ಬ್ಲಾಸಂ ಆಸ್ಪತ್ರೆ ಹಾಗೂ ಮಧುಸೂಧನ ಎಂಬುವರು ಸಿಎಸ್ ಆರ್ ನಿಧಿಯಿಂದ ಭರಿಸಿದ್ದಾರೆ.
ಸಚಿವರಾದ ನಾರಾಯಣಗೌಡ, ಸಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ವಿ. ಸೋಮಣ್ಣ , ಬಿ. ಶ್ರೀರಾಮುಲು, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಯೋಜನಾ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.
ಪವಿತ್ರಾ ಕುರ್ತಕೋಟಿ ಅವರ ಸಾಧನೆಯ ಹಾದಿ:
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್ ಮತ್ತು ರೇಣುಕಾ ದಂಪತಿ ಮಗಳಾದ ಪವಿತ್ರಾ ಕುರ್ತಕೋಟಿ ಇವರು, 5 ನೇ ತರಗತಿಗೆ ಸೈಕ್ಲಿಂಗ್ ಕ್ರೀಡೆಯಲ್ಲಿ ಪ್ರವೇಶ ಪಡೆದು ಪ್ರಥಮ ಪಿಯುಸಿ ಗೆ ವಿಡಿಎಫ್ಟಿ ಬಾಲಕಿಯರ ಕಾಲೇಜಿನಲ್ಲಿ ಓದುತ್ತಿದ್ದಾರೆ. ತಂದೆ ರೈತ ಕಾರ್ಮಿಕರಾಗಿದ್ದು, ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಸಹಾಯಕರಾಗಿದ್ದಾರೆ. ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಪವಿತ್ರ ಅವರಿಗೆ ಮೊದಲಿನಿಂದಲೂ ಸೈಕ್ತಿಂಗ್ನಲ್ಲಿ ಆಸಕ್ತಿ. ಆದರೆ ಗುಣಮಟ್ಟದ ಸೈಕಲ್ ಖರೀದಿಸುವ ಶಕ್ತಿ ಇಲ್ಲ. ದಾನಿಗಳ ಸಹಾಯದಿಂದ ಪವಿತ್ರ ಅವರು ಸೈಕಲ್ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದಾರೆ. ಮುಖ್ಯಮಂತ್ರಿಗಳು ಖಾಸಗಿ ಸುದ್ದಿವಾಹಿನಿಯಲ್ಲಿ ಸಂದರ್ಶನದಲ್ಲಿದ್ದಾಗ ಪವಿತ್ರ ಅವರು ದೂರವಾಣಿಯಲ್ಲಿ ಮಾತನಾಡಿ, ಗುಣಮಟ್ಟದ ಸೈಕಲ್ ಕೊಡಿಸುವಂತೆ ಮನವಿ ಮಾಡಿದ್ದರು.
ಉತ್ತಮ ಗುಣಮಟ್ಟದ ಸೈಕಲ್ ಕೊಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ
ಡಾ. ಶಾಲಿನಿ ರಜನೀಶ್ ಅವರು ಕ್ರೀಡಾ ಇಲಾಖೆ ಹಾಗೂ ದಾನಿಗಳ ಸಹಕಾರದೊಂದಿಗೆ Aergon – 18 E119ಸೈಕಲ್ ಅನ್ನು ಖರೀದಿಸಿ ಪವಿತ್ರ ಅವರಿಗೆ, ಮುಖ್ಯಮಂತ್ರಿಗಳ ಹಸ್ತದಿಂದಲೇ ಕೊಡಿಸಿದ್ದಾರೆ. ಆ ಮೂಲಕ ಕು. ಪವಿತ್ರ ಕನಸು ನನಸುಗೊಳಿಸಿ ಅಂತರಾಷ್ಟೀಯ ಮಟ್ಟದ ಸೈಕ್ತಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ.
ಪವಿತ್ರ ಅವರು ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಾಡಿದ ಸಾಧನೆ.
- 2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್ ಸೈಕ್ಲಿಂಗ್ 158.ಮಿ. ಸ್ಪರ್ಧೆಯಲ್ಲಿ 5ನೇ ಸ್ಥಾನ.
- 2019ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂ.ಟಿ.ಬಿ. ಸೈಕಲ್ ಸ್ಪರ್ಧೆಯಲ್ಲಿ 9ನೇ ಸ್ಥಾನ.
- 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂ.ಟಿ.ಬಿ. ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ.
- 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂ.ಟಿ.ಬಿ. ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
ಈಗ ನ್ಯಾಶನಲ್ ಲೆವೆಲ್ ಗೇಮ್ಸ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ. ಪಂಜಾಬ್ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಟೀಮ್ಗೆ ಆಯ್ಕೆಯಾಗಿದ್ದು, ಈ ಕ್ಯಾಂಪಿನಲ್ಲಿ ಪಾಲ್ಗೊಳ್ಳಲು ಅಂತರಾಷ್ಟ್ರೀಯ ಮಟ್ಟದ ಸೈಕಲ್ ವಶ್ಯಕತೆ ಇತ್ತು. ಅದನ್ನು ಈಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗಿದೆ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post