ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಂಸದರಾದ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದ ಕೃಷಿ ಇಲಾಖೆ, ಭಗವಂತ್ ಖೂಬಾ ಅವರಿಗೆ ಕೇಂದ್ರದ ರಸಗೊಬ್ಬರ ಖಾತೆ ನೀಡಿರುವುದು ಸಂತಸ ತಂದಿದ್ದು, ನೂತನ ಸಚಿವರನ್ನು ಅಭಿನಂದಿಸಲು ಶೀಘ್ರದಲ್ಲಿ ದೆಹಲಿಗೆ ತೆರಳುತ್ತಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೇಂದ್ರದಲ್ಲಿ ನಮ್ಮ ಕರ್ನಾಟಕದವರಿಗೆ ಕೇಂದ್ರ ಸಚಿವ ಸ್ಥಾನ ದೊರೆತಿರುವುದರಿಂದ ನಮ್ಮ ರಾಜ್ಯಕ್ಕೆ ಇನ್ನಷ್ಟು ಶಕ್ತಿ ಬರಲಿದೆ. ತಾವು ಕೃಷಿ ಸಚಿವರಾಗಿರುವುದರಿಂದ ರಾಜ್ಯದಲ್ಲಿನ ಕೃಷಿ ಸಂಬಂಧಿತ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸುವುದರ ಜೊತೆ ನೂತನ ಸಚಿವರನ್ನುಅಭಿನಂದಿಸಲು ದೆಹಲಿಗೆ ತೆರಳುತ್ತಿದ್ದು, ತಮ್ಮೊಂದಿಗೆ ಸಹಕಾರ ಇಲಾಖೆಯ ಎಸ್.ಟಿ.ಸೋಮಶೇಖರ್ ಸಹ ಕೃಷಿ ಸಂಬಂಧಿತ ಚರ್ಚೆಗೆ ಭೇಟಿ ನೀಡಲಿದ್ದಾರೆ ಎಂದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಬಿ.ಸಿ.ಪಾಟೀಲರು, ಸಿಎಂ ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗಳು ಸರ್ಕಾರದ ಸಾಧನೆಗಳ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ಪ್ರಧಾನಿಗಳು ಹಾಗೂ ಕೇಂದ್ರದ ಸಚಿವರನ್ನು ಭೇಟಿ ಮಾಡಲಿದ್ದಾರೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಅರ್ಜಿಗಳು ಸೇಲ್ ಆಗದೇ ಹಾಗೇ ಉಳಿದಿವೆ. ಹೀಗಾಗಿ ಅರ್ಜಿ ಸೇಲ್ ಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಾಗಿದ್ದು, ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ. ನಾವು ವಲಸಿಗರಲ್ಲ. ಸೊಸೆ ಮನೆಗೆ ಬಂದ ಮೇಲೆ ಮನೆಯ ಮಗಳಂತೆ. ಅದರಂತೆ ನಾವು ಸಹ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post