ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಗೀತ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರವಾಗಿದ್ದು ಇದಕ್ಕೆ ಯಾವುದೇ ರೀತಿಯ ಮಿತಿಯಿಲ್ಲ. ಸಂಗೀತದಲ್ಲಿ ಸಾಕಷ್ಟು ಕಲಿಯಬಹುದಾದ ಅಂಶಗಳಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ತಿಳಿಸಿದರು.
ಜಯನಗರದ ಜೆಎಸ್ಎಸ್ ಅಡಿಟೋರಿಯಂನಲ್ಲಿ ಬೆಂಗಳೂರು ಕಿಡ್ನಿ ಫೌಂಡೇಶನ್ ವತಿಯಿಂದ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಸ್ಮರಣಾರ್ಥ 17ನೇ ಧ್ವನಿ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಖ್ಯಾತ ಸಂಗೀತ ವಿದ್ವಾಂಸ ಪಂಡಿತ್ ಅಜಯ್ ಚಕ್ರವರ್ತಿ ಮಾತನಾಡಿ, ಕರ್ನಾಟಕ ರಾಜ್ಯ ಅತ್ಯಂತ ಗೌರವಯುತವಾದ ರಾಜ್ಯವಾಗಿದೆ. ದೇಶದಲ್ಲಿ ಕೋವಿಡ್ ಸಂದರ್ಭದಲ್ಲಿ ಅನೇಕ ಉತ್ತಮ ಸಂಗೀತಗಾರರನ್ನು ಕಳೆದುಕೊಂಡಿದ್ದೇವೆ. ಮಲ್ಲಿಕಾರ್ಜುನ ಮನ್ಸೂರ್ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬಿಸ್ಮಿಲ್ಲಾ ಖಾನ್, ಎಂ.ಎಸ್.ಸುಬ್ಬಲಕ್ಷ್ಮೀ, ಲತಾ ಮಂಗೇಶ್ಕರ್ ಅವರಂತಹ ಅನೇಕರನ್ನು ಸಂಗೀತ ಕ್ಷೇತ್ರ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕದ ಬೆಂಗಳೂರು ಕಿಡ್ನಿ ಫೌಂಡೇಶನ್ ಸಂಸ್ಥೆಯು ಮೂತ್ರ ಜನಕಾಂಗ, ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗಾಗಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು, ಸಂಗೀತ ಉತ್ಸವವಗಳ ಮೂಲಕ ಸಂಗ್ರಹವಾದ ಹಣ ಬಡರೋಗಿಗಳ ಉಚಿತ ಡಯಾಲಿಸಿಸ್ ವೆಚ್ಚವನ್ನು ಭರಿಸಲು ಹಾಗೂ ಬಿಕೆಎಫ್ನ ಮೂಲಧನ ಕ್ರೋಢೀಕರಣಕ್ಕೆ ಸಹಾಯಕವಾಗಿದ್ದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಸಹಾಯಕವಾಗುತ್ತದೆ ಎಂದು ಸಂಸ್ಥೆಯ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಧ್ಯಕ್ಷ ಡಾ. ಪಿ. ಶ್ರೀರಾಮ್ ರವರು ತಿಳಿಸಿರುತ್ತಾರೆ. ವಿವರಗಳಿಗೆ : 9901788354ಗೆ ಸಂಪರ್ಕಿಸಬಹುದು.











Discussion about this post