ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಅಭಿವೃದ್ದಿ ವಿಚಾರವಾಗಿ ವಿರೋಧ ಪಕ್ಷಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿಗಳು ಪಂಥಾಹ್ವಾನ ನೀಡಿದ್ದು, ಈ ಸವಾಲನ್ನು ನಾನು ಸ್ವೀಕರಿಸಲು ಸಿದ್ಧನಿದ್ದೇನೆ. ಆದರೆ ಅದಕ್ಕೂ ಮೊದಲು ಮುಖ್ಯಮಂತ್ರಿಗಳು ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ಸಿಎಂಗೆ ಪ್ರತಿ ಸವಾಲು ಹಾಕಿದ್ದಾರೆ.
ಮತದಾರರ ಓಲೈಸಲು ಬಿಜೆಪಿ ನಾಯಕರ ಅಕ್ರಮಗಳ ವಿರುದ್ಧ ಕೆ.ಆರ್ ಸರ್ಕಲ್ ಬಳಿಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸೋಮವಾರ ದೂರು ನೀಡಿದ ರಾಮಲಿಂಗಾ ರೆಡ್ಡಿ ಅವರು ಈ ಸಂದರ್ಭಗಳಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರಿಗೆ ಪ್ರಶ್ನೆಗಳನ್ನು ಕೇಳಿದರು.
‘ಮುಖ್ಯಮಂತ್ರಿಗಳು ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ. ರಾಜಕೀಯ ಪಕ್ಷವಾಗಿ ನಾವು ಆ ಸವಾಲು ಸ್ವೀಕರಿಸಲು ಸಿದ್ಧ. ಅವರು ಯಾವ ದಿನ ಚರ್ಚೆಗೆ ಕರೆದರೂ ನಾನು ಸಿದ್ಧನಿದ್ದೇನೆ.
ಸಿಎಂಗೆ ರಾಮಲಿಂಗಾರೆಡ್ಡಿ ಪ್ರತಿಸವಾಲುಗಳು ಹೀಗಿವೆ:
- ಸಿಲಿಕಾನ್ ಸಿಟಿ ಎನಿಸಿಕೊಂಡಿದ್ದ ಬೆಂಗಳೂರು ಈಗ ರಸ್ತೆ ಗುಂಡಿ ಸಿಟಿ ಆಗಿದೆ. ಇದೇನಾ ನಿಮ್ಮ ಅಭಿವೃದ್ಧಿ?
- ರಸ್ತೆ ಗುಂಡಿಗಳಿಗೆ 20 ಕ್ಕೂ ಹೆಚ್ಚು ಪ್ರಾಣ ಬಲಿಯಾಗಿವೆ, ನೂರಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ, ಸಾವಿರಾರು ಅಪಘಾತವಾಗಿವೆ. ಇದೇನಾ ನೀವು ಹೇಳುವ ಅಭಿವೃದ್ಧಿ?
- ಪ್ರಧಾನಮಂತ್ರಿ ಭೇಟಿ ಸಮಯದಲ್ಲಿ ಹಾಕಿದ್ದ ಡಾಂಬರ್ ರಸ್ತೆ 2 ದಿನದಲ್ಲಿ ಮಾಯವಾದವು. ಬೆಂಗಳೂರು ಅಭಿವೃದ್ಧಿಗೆ ಇದೇನಾ ನಿಮ್ಮ ಕೊಡುಗೆ?
- ರಾಪಿಡ್ ರಸ್ತೆಗಳು ಉದ್ಘಾಟನೆಯಾದ 1 ತಿಂಗಳಲ್ಲಿ ಕಿತ್ತು ಹೋದವು ಇದೆ ಅಲ್ಲವೇ ನಿಮ್ಮ ಅಭಿವೃದ್ಧಿ?
- ಬಿಬಿಎಂಪಿ ವ್ಯಾಪ್ತಿ ಕಾಮಗಾರಿಗಳಲ್ಲಿ 40% ಕಮಿಷನ್ ಪಡೆದಿರುವುದು ನಿಮ್ಮ ಅಭಿವೃದ್ಧಿಯೇ?
- ಹಿಂದೆಂದೂ ಕಂಡು ಕೇಳದ ಪ್ರವಾಹ ಬರುವಂತೆ ನಗರದ ಮೂಲಸೌಕರ್ಯ ಹಾಳು ಮಾಡಿರುವುದೇ ಅಭಿವೃದ್ಧಿಯೇ?
- ಮತ ಕಳ್ಳತನ ಮಾಡಿ ಐಎಎಸ್ ಅಧಿಕಾರಿಗಳ ತಲೆ ತಂಡ ಆಗಿರುವುದು ನಿಮ್ಮ ಅಭಿವೃದ್ಧಿಯೇ?
- ರಾತ್ರೋರಾತ್ರಿ 10 ಸಾವಿರ ಕೋಟಿ ಬಿಬಿಎಂಪಿ ಬಜೆಟ್ ಘೋಷಣೆ ಮಾಡಿ, ಯಾವ ಕಾರ್ಯಕ್ರಮ ಜಾರಿ ಆಗಿದೆ?
- ನಿಮ್ಮ ಸರ್ಕಾರದ ಪ್ರಚಾರದ ಗಿಮಿಕ್ ಆಗಿರುವ ನಮ್ಮ ಕ್ಲಿನಿಕ್ ಯೋಜನೆ ವಿಫಲವಾಗಿರುವುದು ನಿಮ್ಮ ಸಾಧನೆಯೇ?
- ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ, ಬೇರೆ ಪಕ್ಷದ ಶಾಸಕರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ನಿಮ್ಮ ಅಭಿವೃದ್ಧಿಯೇ?
- ಬಿಜೆಪಿಯ 15 ಜನ ಶಾಸಕರುಗಳಿಗೆ 9500 ಕೋಟಿ ಅನುದಾನ ನೀಡಿದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 2100 ಕೋಟಿ ಮಾತ್ರ. ಬಿಜೆಪಿ ಶಾಸಕರ ಕ್ಷೇತ್ರ ಅಭಿವೃದ್ಧಿ ಆದರೆ ಇಡೀ ಬೆಂಗಳೂರು ಅಭಿವೃದ್ಧಿಯೇ? 28 ಕ್ಷೇತ್ರಗಳ ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿಯಾಗುತ್ತಯೇ?
- ಸಬ್ ಅರ್ಬನ್ ರೈಲು, ಫೆರಿ ಫೆರಲ್ ರಿಂಗ್ ರಸ್ತೆ ಯೋಜನೆ ಕುಂಠಿತ ವಾಗಿರುವುದು ನೀವು ಹೇಳುವ ಸಾಧನೆ ಅಲ್ಲವೇ?
- ನೀವು ಹೇಳುವ ಅಭಿವೃದ್ಧಿಯಲ್ಲಿ ಒಂದು ರಸ್ತೆ, ಫ್ಲೈ ಓವರ್ ನಿರ್ಮಾಣ ಮಾಡಿರುವುದನ್ನು ಹೇಳಬಲ್ಲಿರಾ? ಈ ಸರ್ಕಾರ ಉದ್ಘಾಟನೆ ಮಾಡುತ್ತಿರುವ ರಸ್ತೆ, ಫ್ಲೈ ಓವರ್ ಗಳು ನಮ್ಮ ಅವಧಿಯಲ್ಲಿ ಆರಂಭವಾಗಿರುವ ಯೋಜನೆಗಳು. ಬೆಂಗಳೂರು ಅಭಿವೃದ್ಧಿ ಎಂದರೆ ಮೂಲ ಸೌಕರ್ಯಗಳ ಅಭಿವೃದ್ಧಿ, ಜನ ಜೀವನ ಸುಧಾರಣೆಯೇ ಹೊರತು ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯಲ್ಲ.
ಪ್ರಶ್ನೋತ್ತರ:
ನಿಮ್ಮ ಶಾಸಕರುಗಳು ಟಿವಿ, ಕುಕ್ಕರ್ ನೀಡುತ್ತಿದ್ದರೆ, ನೀವು ಕೂಡ ಕುಕ್ಕರ್ ನೀಡುತ್ತಿರುವುದಾಗಿ ಮಾಹಿತಿ ಬಂದಿವೆ ಎಂದು ಕೇಳಿದಾಗ, ‘ನಮ್ಮ ಕ್ಷೇತ್ರದಲ್ಲಿ ಪ್ರತಿ ವರ್ಷ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಗೆದ್ದವರಿಗೆ ಪ್ರಶಸ್ತಿ ನೀಡುತ್ತಿದ್ದೇವೆ. ಈಗಲೂ ನೀಡುತ್ತೇವೆ. ಮುಂದೆಯೂ ನೀಡುತ್ತೇವೆ. ನಮ್ಮ ಕಾರ್ಯಕ್ರಮ 14ನೇ ತಾರಿಕಿನವರೆಗೂ ನಡೆಯಲಿದೆ. ಅದಕ್ಕೆ ಮಾಧ್ಯಮಗಳು ಕೂಡ ಆಗಮಿಸಲಿ. ನಾವು ಗೆದ್ದವರಿಗೆ ಪ್ರಶಸ್ತಿಯಾಗಿ ಬಹುಮಾನ ನೀಡುತ್ತಿದ್ದೇವೆಯೇ ಹೊರತು ಚುನಾವಣೆಯ ಮತಕ್ಕಾಗಿ ಆಮಿಷ ನೀಡುತ್ತಿಲ್ಲ. ಇದರ ಬಗ್ಗೆ ಮಾತನಾಡುವವರು ನಾವು ಕೋವಿಡ್ ಸಮಯದಲ್ಲಿ 2020ರಲ್ಲಿ ಪ್ರತಿ ನಿತ್ಯ 52 ಸಾವಿರ ಜನರಿಗೆ ಪ್ರತಿನಿತ್ಯ ಊಟ ನೀಡುತ್ತಿದ್ದೆವು ಹಾಗೂ ಹಾಗೂ 60 ಸಾವಿರ ಆಹಾರ ಕಿಟ್ ನೀಡಿದ್ದೆವು., 2021ರಲ್ಲಿ ಪ್ರತಿನಿತ್ಯ 35 ಸಾವಿರ ಜನರಿಗೆ ಊಟ ನೀಡುತ್ತಿದ್ದೆವು. 60 ಸಾವಿರ ಆಹಾರ ಕಿಟ್ ನೀಡಿದ್ದೆವು. 2018ರಲ್ಲಿ ಕೊಡಗು ಭಾಗದಲ್ಲಿ ಪ್ರವಾಹ ಬಂದಾಗ ಬಿಟಿಎಂ ಹಾಗೂ ಜಯನಗರ ಕ್ಷೇತ್ರದಲ್ಲಿ 1 ಕೋಟಿಗೂ ಹೆಚ್ಚು ಮೊತ್ತದ ವಸ್ತುಗಳನ್ನು ನೀಡಿದ್ದೇವೆ. 2019ರಲ್ಲಿ ಉತ್ತರ ಕರ್ನಾಟಕದಲ್ಲಿ ಸುಮಾರು 16 ವಾಹನಗಳಷ್ಟು 1 ಕೋಟಿ ಮೌಲ್ಯಕ್ಕೂ ಹೆಚ್ಚು ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ್ದೇವೆ. ನಾವು ನಿರಂತರವಾಗಿ ಈ ರೀತಿ ಜನಪರ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಕೋವಿಡ್ ಸಮಯದಲ್ಲಿ ಬಿಜೆಪಿ ನಾಯಕರು ಮನೆಯಲ್ಲಿ ಮಲಗಿದ್ದರು. ಈಗ ನಮ್ಮ ವಿರುದ್ಧ ಟೀಕೆ ಟಿಪ್ಪಣ್ಣಿ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಇದೆಲ್ಲವೂ ಸಹಜ. ನಾನು ಮಾಧ್ಯಮಗಳನ್ನು ಆಹ್ವಾನಿಸುತ್ತೇನೆ. ನೀವು ಕೂಡ ಭಾಗವಹಿಸಬಹುದು’ ಎಂದು ಸ್ಪಷ್ಟನೆ ನೀಡಿದರು.
Also read: ತ್ರೈಮಾಸಿಕ ಕೆಡಿಪಿ ಸಭೆ: ತಾಲೂಕು ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ – ಶಾಸಕ ಹಾಲಪ್ಪ ಸೂಚನೆ
ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದು ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಅವರ ನಡುವಣ ವಿಚಾರ. ರಮೇಶ್ ಅವರು ಆರೋಪ ಮಾಡಿದ್ದು, ಇದಕ್ಕೆ ಶಿವಕುಮಾರ್ ಅವರೇ ಉತ್ತರಿಸುತ್ತಾರೆ ಎಂದು ತಿಳಿಸಿದರು.
ನಾನು ಭ್ರಷ್ಟಾಚಾರ ಮಾಡದ ಕಾರಣ ಸಿಡಿ ಬಿಡುಗಡೆಯಾಗಿದೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸಿಡಿ ಬಂದಿದ್ದು ಯಾಕೆ? ಇದು ನನ್ನ ಪ್ರಶ್ನೆ. ರಮೇಶ್ ಅವರು ಹತಾಶೆಯ ರಾಜಕರಣ ಮಾಡುತ್ತಿದ್ದಾರೆ. ಈ ಬಗ್ಗೆ ಶಿವಕುಮಾರ್ ಅವರು ಸಮರ್ಥರಿದ್ದು ಅವರೇ ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಉಗ್ರಪ್ಪ ಅವರ ಮಾತುಗಳು:
ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಮುಖ್ಯಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದು, ಅದರಲ್ಲಿ ಜ.22ರಂದು ಬಿಜೆಪಿ ಮಾಜಿ ಸಚಿವರು, ಹಾಲಿ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಮುಂದಿನ ಚುನಾವಣೆಯಲ್ಲಿ ಪ್ರತಿ ಮತದಾರರಿಗೆ 6 ಸಾವಿರ ಹಣ ನೀಡುತ್ತೇವೆ ಎಂದು ಹೇಳಿದ್ದರು. ರಾಜ್ಯದಲ್ಲಿ 5 ಕೋಟಿ ಮತದಾರರಿದ್ದು, ಪ್ರತಿಯೊಬ್ಬರಿಗೆ 6 ಸಾವಿರ ಎಂದರೆ ಸುಮಾರು 30 ಸಾವಿರ ಕೋಟಿ ಹಣ ಹಂಚಲು ಬಿಜೆಪಿ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಈ ವಿಚಾರವಾಗಿ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದೇವೆ. ಈ ವಿಚಾರವಾಗಿ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಧಿಕಾರಿಗಳು ಈ ವಿಚಾರವಾಗಿ ಕಾನೂನು ಸಲಹೆ ಪಡೆಯುತ್ತೇವೆ. ಇದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಚಾರ ಎಂದು ಹೇಳಿರುವ ಹಿನ್ನೆಲೆಯಲ್ಲಿ ನಾವು ಇಂದು ಆಗಮಿಸಿ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ಇದರ ಜತೆಗೆ ಐದು ಆಗ್ರಹಗಳನ್ನು ಮುಂದಿಟ್ಟಿದ್ದೇವೆ.
ಈ ವಿಚಾರವಾಗಿ ಸುದೀರ್ಘ ತನಿಖೆ ನಡೆಸಬೇಕು. ಇನ್ನು ಈ ವಿಚಾರಕ್ಕೆ ಸಂಬಂಧಿಸಿದ ರಮೇಶ್ ಜಾರಕಿಹೋಳಿ, ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಜೆಪಿ ನಡ್ಡಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಆಯೋಗ ಸೂಚಿಸಬೇಕು.
ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂವಿಧಾನದ ಆಶಯದಂತೆ ನಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು, ಐಪಿಎಸ್ ಸೆಕ್ಷನ್ ಹಾಗೂ ಜನಪ್ರತಿನಿಧಿ ಕಾಯ್ದೆಗಳ ಉಲ್ಲಂಘನೆ ಮಾಡಿದ್ದು ಇದನ್ನು ವಿಶೇಷವಾದ ಪ್ರಕರಣ ಎಂದು ಪರಿಗಣಿಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ನಡ್ಡಾ ಹಾಗೂ ಕಟೀಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು.
30 ಸಾವಿರ ಕೋಟಿ ವಿಲ್ ಘಾಟ್ ಮನೆ ವಿಚಾರವಾಗಿ ಆದಾಯ ತೆರಿಗೆ ಹಾಗೂ ಇಡಿ ಸಂಸ್ಥೆಗಳಿಗೆ ತನಿಖೆಗೆ ಸೂಚಿಸಬೇಕು.
ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂದು ತಿಳಿಸಿದ್ದೇವೆ.
ನಮ್ಮ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು, ಅಲ್ಲಿಂದ ಬರುವ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸೋಲುವುದು ಬಿಜೆಪಿಯವರಿಗೆ ಸ್ಪಷ್ಟವಾಗಿದೆ. ಹೀಗಾಗಿ ಅಕ್ರಮದ ಮೂಲಕ ಮತದಾರರಿಗೆ ಆಮಿಷವೊಡ್ಡುವ ಪ್ರಯತ್ನ ಮಾಡುತ್ತಿದೆ. ಇದು ಸಂವಿಧಾನ, ಪ್ರಜಾಪಪ್ರಭುತ್ವ ಹಾಗೂ ಜನಾದೇಶಕ್ಕೆ ಬಗೆಯುವ ಅಪಚಾರ. ಹೀಗಾಗಿ ಇದರ ವಿರುದ್ದ ಕ್ರಮ ಜರುಗಿಸಬೇಕು ಎಂದು ಪಕ್ಷದ ವತಿಯಿಂದ ಆಗ್ರಹಿಸುತ್ತೇವೆ.
ನಿಮ್ಮ ಪಕ್ಷದವರೂ ಟಿವಿ ನೀಡುತ್ತಿದ್ದಾರೆ ಎಂದು ಕೇಳಿದಾಗ, ‘ಇಂತಹ ಕೆಲಸ ಯಾರೇ ಮಾಡಿದ್ದರೂ ಅದನ್ನು ನಿಯಂತ್ರಿಸುವುದು ಹಾಗೂ ಕ್ರಮ ರುಗಿಸುವುದು ಚುನಾವಣಾ ಆಯೋಗದ ಕೆಲಸ. ಈ ವಿಚಾರವಾಗಿ ಸಾಕ್ಷಾಧಾರ ಇದ್ದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿ. ಕ್ರಮ ಜರುಗಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post