ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ನನ್ನ ತಂದೆ ವಯೋವೃದ್ಧರು. ನಮ್ಮ ಮನೆಯ ಹಿಂಭಾಗವೇ ಇರುವ ಮಸೀದಿಯಿಂದ ಬೆಳಗಿನ ಜಾವ ಕೇಳಿಬರುವ ಜೋರಾದ ಆಝಾನ್ #Azan ಶಬ್ದದಿಂದ ಅವರ ನಿದ್ದೆ ಹಾಳಾಗುತ್ತಿದ್ದು, ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಕಿಡಿ ಕಾರಿದರು.
ಪರಿಷತ್ ಅಧಿವೇಶನದಲ್ಲಿ ಮಾತನಾಡಿದ ಅವರು, ಅಝಾನ್ ಸಮಯದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಮಸೀದಿಗಳಲ್ಲಿ ಡಿಸಿಬಲ್ ಮಿತಿಯನ್ನು ಮೀರಿ ಲೌಡ್ ಸ್ಪೀಕರ್ ಬಳಕೆಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ಹಾಗೂ ಸರ್ಕಾರದ ಪಕ್ಷಪಾತಿ ನಿಲುವನ್ನು ತೀವ್ರವಾಗಿ ಖಂಡಿಸಿದರು.
Noise Pollution Rules ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಬೆಳಗ್ಗೆ 6ರಿಂದ ರಾತ್ರಿ 10ರೊಳಗೆ ಮಾತ್ರ ಶಬ್ದಕ್ಕೆ ಅವಕಾಶವಿದ್ದರೂ, ರಾಜ್ಯದಲ್ಲಿ ಈ ನಿಯಮಗಳನ್ನು ಸಮಾನವಾಗಿ ಜಾರಿಗೊಳಿಸಲಾಗುತ್ತಿಲ್ಲ ಎಂದು ಅವರು ಹೇಳಿದರು.
ಗಣೇಶೋತ್ಸವದ ವೇಳೆ ಡಿಜೆ ನಿಷೇಧಿಸುವ ಸರ್ಕಾರ, ದಿನನಿತ್ಯ ನಡೆಯುವ ಅಝಾನ್ ವೇಳೆ ಶಬ್ದ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ದ್ವಂದ್ವ ನೀತಿಯಾಗಿದೆ ಎಂದು ಡಿ.ಎಸ್. ಅರುಣ್ ಆಕ್ಷೇಪ ವ್ಯಕ್ತಪಡಿಸಿದರು.
ಸಾರ್ವಜನಿಕರು ಭಯದಿಂದ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗುತ್ತಿಲ್ಲ ಎಂಬ ವಾಸ್ತವವನ್ನು ಉಲ್ಲೇಖಿಸಿದ ಅವರು, ಪರಿಸರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ಸ್ವಯಂಪ್ರೇರಿತವಾಗಿ ಶಬ್ದ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಬ್ದ ಮಾಲಿನ್ಯದಿಂದ ಮಕ್ಕಳು, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಈ ವಿಚಾರದಲ್ಲಿ ಇತರೆ ಶಾಸಕರು ಡಿ.ಎಸ್. ಅರುಣ್ ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲ ಧರ್ಮಗಳಿಗೆ ಸಮಾನವಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಆದರೆ ಸರ್ಕಾರದಿಂದ ಸ್ಪಷ್ಟ ಉತ್ತರ ಮತ್ತು ಕಠಿಣ ಕ್ರಮಗಳ ಭರವಸೆ ಸಿಗದಿರುವುದು, ಒಂದು ಸಮುದಾಯದ ಪರವಾಗಿ ಪಕ್ಷಪಾತ ತೋರುತ್ತಿರುವಂತೆ ಕಂಡುಬಂದಿದೆ ಎಂದು ಟೀಕಿಸಲಾಯಿತು.
ಕಾನೂನು ಎಲ್ಲರಿಗೂ ಒಂದೇ ಆಗಬೇಕು, ಧರ್ಮದ ಹೆಸರಿನಲ್ಲಿ ಶಬ್ದ ಮಾಲಿನ್ಯಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬುದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಡಿ.ಎಸ್. ಅರುಣ್ ಸರ್ಕಾರವನ್ನು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















