ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ನಿನ್ನೆ ಸುವರ್ಣ ಸೌಧದಿಂದ ಪೊಲೀಸರು ಬಂಧಿಸಿದ್ದ ಶಾಸಕ ಸಿ.ಟಿ. ರವಿ #CTRavi ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಹಾಲ್’ನಲ್ಲೇ ರವಿ ಅವರು ಕಣ್ಣೀರಿಟ್ಟಿದ್ದಾರೆ.
ಇಂದು ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಬಂಧನವನ್ನು ತೋರಿಸಿದ್ದಾರೆ.
ರವಿ ಪರವಾಗಿ ವಾದ ಮಂಡಿಸಿರುವ ವಕೀಲ ಜಿರಲಿ, ಓರ್ವ ಜನಪ್ರತಿನಿಧಿಯನ್ನು ಸ್ಪೀಕರ್ ರೂಲಿಂಗ್ ನೀಡುವ ಮುನ್ನವೇ ಅಮಾನುಷವಾಗಿ ಬಂಧಿಸಿರುವುದು ಅಕ್ರಮವಾಗಿದೆ. ಕಾನೂನಿಗೆ ವಿರುದ್ಧವಾಗಿ ರವಿ ಅವರನ್ನು ಬಂಧಿಸಲಾಗಿದೆ ಎಂದು ವಾದಿಸಿದ್ದಾರೆ.
ರವಿ ಅವರಿಗೆ ಜೀವ ಬೆದರಿಕೆಯಿದ್ದು, ರಾತ್ರಿಯಿಡೀ ಅವರನ್ನು ಊರಿಂದ ಊರಿಗೆ ಸುತ್ತಾಡಿಸಲಾಗಿದೆ. ರಾತ್ರಿ ಅವರಿಗೆ ಊಟ ಕೊಟ್ಟಿಲ್ಲ, ತಲೆಗೆ ಗಾಯವಾಗಿದ್ದು ಅವರಿಗೆ ಪ್ರಾಥಮಿಕ ಚಿಕಿತ್ಸೆ ಸಹ ಕೊಡಿಸಿಲ್ಲ. ಪೊಲೀಸರು ಅಕ್ಷರಶಃ ಮೃಗದಂತೆ ವರ್ತಿಸಿದ್ದಾರೆ ಎಂದು ದೂರಿದ್ದಾರೆ.
ರವಿ ವಿರುದ್ದ ಎಫ್’ಐಆರ್ #FIR ಹಾಗೂ ಬಂಧಿಸಿರುವುದೇ ಕಾನೂನುಬಾಹಿರವಾಗಿದ್ದು ಅವರು ಮಾನಸಿಕ, ದೈಹಿಕವಾಗಿ ಕುಗ್ಗಿದ್ದಾರೆ. ಹೀಗಾಗಿ, ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
Also read: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ
ಅಲ್ಲದೇ, ಹೆಬ್ಬಾಳ್ಕರ್ ಹಾಗೂ ಡಿ.ಕೆ. ಶಿವಕುಮಾರ್ ಅವರು ನೀನು ಚಿಕ್ಕಮಗಳೂರಿಗೆ ಹೋಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಿ.ಟಿ. ರವಿ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ ಎಂದು ವರದಿಯಾಗಿದೆ.
ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಸಿ.ಟಿ. ರವಿ ಅವರ ಜಾಮೀನು ಆದೇಶವನ್ನು ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post