ಕಲ್ಪ ಮೀಡಿಯಾ ಹೌಸ್ | ಬೆಳ್ತಂಗಡಿ |
ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ Dr. D. Veerendra Heggade ಹೇಳಿದರು.
ಇಲ್ಲಿನ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ಶನಿವಾರ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನ ಸಮಿತಿ ವತಿಯಿಂದ ನಡೆದ 70 ವರ್ಷ ತುಂಬಿದ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರನ್ನು ಅಭಿನಂದಿಸಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಪ.ರಾ.ಶಾಸ್ತ್ರಿಗಳ ಸಾಹಿತ್ಯ ಬದುಕು ರೂಪಿಸುವಂಥದ್ದು. ಪಠ್ಯಪುಸ್ತಕಗಳಲ್ಲಿ ಅವರ ಬರಹಗಳು ಇನ್ನಷ್ಟು ಬರುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದು ಅವರ ಬರಹಗಳ ಪ್ರೇರಣೆಯಿಂದ ಇನ್ನಷ್ಟು ಮಂದಿ ಹುಟ್ಟಿ ಬರಲಿ ಎಂದರು.

ಮಾತುಗಳನ್ನಾಡಿದರು. ಪ.ರಾಮಕೃಷ್ಣ ಶಾಸ್ತ್ರಿಗಳು ನೈಜ ಚಿತ್ರಣಗಳಾಗಿವೆ. ಅವರ ಬರಹ ಮತ್ತು ಬದುಕಿನಲ್ಲಿ ತಪಸ್ಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪ.ರಾಮಕೃಷ್ಣ ಶಾಸ್ತ್ರಿಗಳ ಪತ್ನಿ ಶಾರದಾ ಆರ್.ಶಾಸ್ತ್ರಿ ಇದ್ದರು.
ಐದು ಪುಸ್ತಗಳ ಬಿಡುಗಡೆ :
ಶಾಸ್ತ್ರಿಗಳು ಬರೆದ ಮಳೆ ಮಳೆ, ನಟನ ಮನೋಹರಿ, ರೋಚಕ ಲೋಕ, ಪ್ರಪಂಚದ ಸೋಜಿಗಗಳು, ಲಕ್ಷ್ಮೀ ಮಚ್ಚಿನ ಬರೆದ ಸಾಹಿತಿ ಪ.ರಾ.ರಾಮಕೃಷ್ಣ ಶಾಸ್ತ್ರಿ ಬದುಕು ಬರಹ ಬವಣೆ ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

ಇದಕ್ಕೂ ಮೊದಲು ಯಕ್ಷಗಾನ ಭಾಗವತ ಗಾನ ಮತ್ತು ಪ.ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನ ಕಾರ್ಯಕ್ರಮ ನಡೆಯಿತು.
ಅಪರೂಪದಲ್ಲೇ ಅಪರೂಪದ ಕಾರ್ಯಕ್ರಮ :
ಕರ್ನಾಟಕ ಮತ್ತು ಕರಾವಳಿಯು ಕಂಡ ಅಪ್ರತಿಮ ಸಾಹಿತಿ ಪರಾಮಕೃಷ್ಣ ಶಾಸ್ತ್ರಿ ಅವರ ಅಭಿನಂದನ ಸಮಾರಂಭ ಹೃದಯಂಗಮವಾಗಿ ಮೂಡಿಬಂದ ಸಂಭ್ರಮದ ಕ್ಷಣಗಳು.
ದಾರ್ಶನಿಕ ಸಂತ ರಾಮಕೃಷ್ಣ ಪರಮಹಂಸ ಮತ್ತು ಮಾತೆ ಶಾರದಾದೇವಿ ಲೋಕ ಪೂಜ್ಯರು. ಅನುಕರಣೀಯ ಆದರ್ಶ ಪುರುಷರು. ಅದೇ ಹೆಸರಿನ ದಂಪತಿಗಳಾದ ರಾಮಕೃಷ್ಣ ಶಾಸ್ತ್ರಿ ಮತ್ತು ಶಾರದ ಅಮ್ಮನವರು ಅಕ್ಷರ ಸಂತರು. ಒಂದೇ ಹೆಸರಿನ ಅಸಮಾನ್ಯ ಸಾಧಕ ದಂಪತಿಗಳ ಉದಾಹರಣೆ ಸಿಕ್ಕುವುದು ವಿರಳವಾದರೂ ತಮ್ಮ ಸದ್ಗುಣ ಲಕ್ಷಣಗಳಲ್ಲಿ ಪರಸ್ಪರ ಹೋಲಿಕೆ ಇರುವ ಪರಮಹಂಸ ಮತ್ತು ಶಾಸ್ತ್ರಿ ದಂಪತಿಗಳು ವಿಶಿಷ್ಟವಾಗಿ ಕಂಡುಬರುತ್ತಾರೆ.

ಯಾವುದೇ ಅಪೇಕ್ಷೆಗಳನ್ನು ಹೋಂದಿರದ ಶಾಸ್ತ್ರಿಗಳು ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿದಾಗ ಅವರಿಗೆ ಆಗುವ ಸನ್ಮಾನದ ಸಮಾರಂಭವನ್ನು ತನಗೆ ತಾನೇ ಕೊಟ್ಟ ಗೌರವವೆಂಬಂತೆ ಪ್ರೇಕ್ಷಕರು ಸಂಭ್ರಮಿಸಿದ್ದು ಕಣ್ಣಿಗೆ ಆನಂದವನ್ನು ನೀಡುತ್ತಿತ್ತು.
ಶಾಸ್ತ್ರಿಗಳ ಆತ್ಮೀಯತೆಯ ವ್ಯಾಪ್ತಿ ಕಾರ್ಯಕ್ರಮದಲ್ಲಿದ್ದ ಪ್ರೇಕ್ಷಕರ ಸಂಖ್ಯೆ ಮತ್ತು ಅವರ ಮನೋಭಾವದಿಂದ ಅರಿವಾಗುತ್ತಿತ್ತು. ಈ ಕಾರ್ಯಕ್ರಮಕ್ಕೆ ಬರಲಾಗದ ಹಲವು ಮಂದಿ ‘ಬರಲಾಗಲಿಲ್ಲ” ಎಂಬ ದುಃಖವನ್ನು ಹಂಚಿಕೊಂಡಿದ್ದಾರೆ. ಬಂದ ಅನೇಕರು ಆಮಂತ್ರಣವಿಲ್ಲದಿದ್ದರೂ ಈ ಕಾರ್ಯಕ್ರಮಕ್ಕೆ ಬರಲೇಬೇಕೆಂಬ ಅಪೇಕ್ಷೆಯನ್ನು ಇಟ್ಟುಕೊಂಡಿದ್ದೆವು ಎಂದು ಹೇಳಿಕೊಂಡಿದ್ದಾರೆ. ಇದು ವ್ಯಕ್ತಿಯೊಬ್ಬನ ಸಾಧನೆಯ ಬದುಕಿಗೆ ದೊರೆಯುವ ಮಹಾ ಗೌರವವಾಗಿದೆ. ತನ್ನ ಸಾಧನೆಯಿಂದ ಪ್ರಸಿದ್ಧಿಯ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎನ್ನುವುದಕ್ಕಿಂತ ಎಷ್ಟು ಜನರ ಹೃದಯದಲ್ಲಿ ತನ್ನ ಬಗೆಗಿನ ಪ್ರೀತಿ ಆಳಕ್ಕೆ ಹುದುಗಿದೆ ಎನ್ನುವುದು ಮುಖ್ಯ. ಇದನ್ನು ಶಾಸ್ತ್ರಿಗಳು ಸರ್ವರಿಗೂ ತೋರಿಸಿಕೊಟ್ಟಿದ್ದಾರೆ. ಹತ್ತು ವರ್ಷದ ನಂತರ ಪುನಃ ಇಂತಹ ಇನ್ನೊಂದು ಕಾರ್ಯಕ್ರಮದೊಂದಿಗೆ ಶಾಸ್ತ್ರಿಗಳ ಜೊತೆ ಸಂತೋಷವನ್ನು ಹಂಚಿಕೊಳ್ಳುವ ಯೋಗ ಭಾಗ್ಯ ಎಲ್ಲರಿಗೂ ಒದಗಿ ಬರಲಿ.










Discussion about this post