ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಜಾಬ್ ವಿವಾದದಲ್ಲಿ ಅರ್ಜಿದಾರರ ಪರವಾಗಿ ವಾದ ಮಂಡಿಸಲು ಬೇಕಾಬಿಟ್ಟಿ ಮುಂದಾದ ವಕೀಲರಿಗೆ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ನಿನ್ನೆ ಹೈಕೋರ್ಟ್ನಲ್ಲಿ ನಡೆದ ಹಿಜಾಬ್ ವಿವಾದದ ಕುರಿತಾಗಿನ ಅರ್ಜಿ ವಿಚಾರಣೆ ಇಂದೂ ಸಹ ಮುಂದುವರೆದಿತ್ತು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ವಾದ-ಪ್ರತಿವಾದ ಆಲಿಸುತ್ತಿದ್ದರು. ನಿನ್ನೆಯಿಂದಲೂ ವಾದ ಮಂಡಿಸುತ್ತಿದ್ದ ವಕೀಲ ದೇವದತ್ ಕಾಮತ್, ಇಂದು ವಾದ ಮಂಡಿಸಿದ ವಕೀಲ ಹೆಗಡೆ ಅವರುಗಳು ನ್ಯಾಯಮೂರ್ತಿಗಳಿಗೆ ಅರ್ಜಿದಾರರ ಪರವಾಗಿ ಮನವಿ ಮಾಡುತ್ತಿದ್ದರು. ಈ ವೇಳೆ ಅರ್ಜಿದಾರರ ಪರವಾಗಿ ಹಲವು ವಕೀಲರು ನಾಮುಂದು, ತಾಮುಂದು ಎಂದು ವಾದ ಮಂಡಿಸಲು ಮುಂದಾದರು.

ಇದರಿಂದ ಕೋಪಗೊಂಡು ನ್ಯಾಯಾಧೀಶರು, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಎಲ್ಲರೂ ವಾದ ಮಂಡಿಸಲು ಬರಬೇಡಿ. ಇದೇನು ಚುನಾವಣಾ ಪ್ರಚಾರದ ರ್ಯಾಲಿಯಲ್ಲ. ವಕಾಲತ್ ನಾಮ ಇದ್ದರಷ್ಟೇ ವಾದ ಮಾಡಲು ನ್ಯಾಯಾಲಯದಲ್ಲಿ ಅವಕಾಶವಿದೆ. ಅದು ಇಲ್ಲದೇ ಇರುವವರು ಸುಮ್ಮನಿರಿ ಎಂದು ಚಾಟಿ ಬೀಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















