ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ Mallikarjuna Kharge ಅವರು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರ ವಿರುದ್ಧ ನೀಡಿದ್ದಾರೆನ್ನಲಾದ “ಭಯೋತ್ಪಾದಕ” ಎಂಬ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಇದು ದೇಶದ 140 ಕೋಟಿ ಜನರಿಗೆ ಹಾಗೂ ಪ್ರಜಾಪ್ರಭುತ್ವದ ಘನತೆಗೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಖರ್ಗೆಯವರ ಈ ವಿವಾದಾತ್ಮಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಸತತ ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ ದೇಶದ ಜನರ ತೀರ್ಪಿಗೆ ನೀವು ನೀಡುತ್ತಿರುವ ಗೌರವ ಇದೇನಾ?” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ B Y Vijayendra ಅವರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಖರ್ಗೆ ವಿರುದ್ಧ ಹರಿಹಾಯ್ದಿರುವ ಅವರು, ವಿಶ್ವದಾದ್ಯಂತ ಗೌರವಿಸಲ್ಪಡುವ ನಾಯಕನ ಬಗ್ಗೆ ಇಂತಹ “ವಿಷಕಾರಿ” ಮಾತುಗಳನ್ನು ಆಡುವುದು ಖರ್ಗೆಯವರ ರಾಜಕೀಯ ಹತಾಶೆ ಮತ್ತು ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ಏರ್ ಸ್ಟ್ರೈಕ್ ಹಾಗೂ ನಕ್ಸಲಿಸಂ ನಿರ್ಮೂಲನೆಯಂತಹ ದಿಟ್ಟ ಕ್ರಮಗಳನ್ನು ಕೈಗೊಂಡ ಪ್ರಧಾನಿಯವರನ್ನು ಅವಹೇಳನ ಮಾಡುವುದು ಕಾಂಗ್ರೆಸ್ನ ನೈಜ ಮುಖವನ್ನು ಬಯಲು ಮಾಡಿದೆ. ಈ ಹಿಂದೆ ‘ಮೌತ್ ಕಾ ಸೌದಾಗರ್’ ಎಂದವರನ್ನು ಜನರೇ ಹೇಗೆ ಮೂಲೆಗುಂಪು ಮಾಡಿದ್ದಾರೆ ಎಂಬುದು ನಿಮಗೆ ನೆನಪಿರಲಿ ಎಂದು ಅವರು ಎಚ್ಚರಿಸಿದ್ದಾರೆ.
“ಮೋದಿಯವರು ಭಯೋತ್ಪಾದಕರಾಗಿದ್ದರೆ ಕೋಟ್ಯಂತರ ಜನ ಅವರಿಗೆ ಮತ ಹಾಕುತ್ತಿರಲಿಲ್ಲ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ಖರ್ಗೆಯವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು” ಹಾಗೂ ಖರ್ಗೆಯವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಎಂದು ವಿಧಾನ ಪರಿತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್ N Ravikumar ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾತನಾಡಿದ ಅವರು, ಹಳೆಯ ಇತಿಹಾಸ: ಈ ಹಿಂದೆಯೂ ಖರ್ಗೆಯವರು ಮೋದಿಯವರನ್ನು ‘ರಾವಣ’ನಿಗೆ ಮತ್ತು ‘ವಿಷದ ಹಾವಿಗೆ’ ಹೋಲಿಸಿದ್ದರು. ಕಾಂಗ್ರೆಸ್ ಸತತ ಸೋಲಿನಿಂದ ಭ್ರಮನಿರಸನಗೊಂಡು ಇಂತಹ ಮಾತುಗಳನ್ನಾಡುತ್ತಿದೆ ಎಂದು ಅವರು ಲೇವಡಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಈ ಹೇಳಿಕೆಯ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಅವರು ಸವಾಲು ಹಾಕಿದರು.
ಇಷ್ಟು ದೀರ್ಘಕಾಲದ ರಾಜಕೀಯ ಅನುಭವವಿರುವ ಖರ್ಗೆಯವರು ಇಷ್ಟು ಕೀಳುಮಟ್ಟದ ಭಾಷೆ ಬಳಸುವುದು ಅಸಹ್ಯಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ C N Ashwathanarayana ಟೀಕಿಸಿದ್ದಾರೆ.
ಸಮಾಜದ ಎಲ್ಲ ವರ್ಗದ ಏಳಿಗೆಗಾಗಿ ಶ್ರಮಿಸುತ್ತಿರುವ ನಾಯಕನ ವಿರುದ್ಧ ಪದೇ ಪದೇ ನಾಲಿಗೆ ಹರಿಬಿಡುವುದು ಖರ್ಗೆಯವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ದೇಶದ ಜನತೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















