ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಾವಿರಾರು ಜನರನ್ನು ಪ್ರೇರೇಪಿಸಿದ ರಾಷ್ಟ್ರಪುರುಷ ದೀನದಯಾಳ ಉಪಾಧ್ಯಾಯರು. ತಮ್ಮ ವ್ಯಕ್ತಿತ್ವ, ಕರ್ತೃತ್ವ, ಸಾಧನೆ, ಚಿಂತನೆಯ ಮೂಲಕ ದೀನ ದಯಾಳ ಉಪಾಧ್ಯಾಯರು ಆಧಾರ ದೀಪಸ್ತಂಭವಾಗಿದ್ದಾರೆ. ಅವರ ಬದುಕು ಗಂಗಾಪ್ರವಾಹವಿದ್ದಂತೆ. ಅದರಲ್ಲಿ ನಮ್ಮ ಪಾತ್ರ ಎಷ್ಟು ಎನ್ನುವುದು ಮುಖ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ವತಿಯಿಂದ ಜೆಪಿನಗರದ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ನಡೆದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ 109ನೇ ವರ್ಷದ ಜಯಂತಿಯ ನಿಮಿತ್ತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಯಂಸೇವಕ ಎಂಬ ವಿಶೇಷವಾದ ಕಲ್ಪನೆ ಇಂದು ಸಹಜವಾಗಿದೆ. ಯಾವ ಸಂಘವೂ ಯಾರನ್ನೂ ನಿರ್ಮಾಣ ಮಾಡುವುದಿಲ್ಲ, ಬದಲಾಗಿ ಇರುವವರನ್ನು ಸೇರಿಸಿ ಸಂಘಟನೆ ರೂಪುಗೊಳ್ಳುತ್ತದೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಯಂಸೇವಕರ ನಿರ್ಮಾಣ ಮಾಡುವ ಸಂಘಟನೆ. ಅಂತಹ ಶ್ರೇಷ್ಠ, ಆದರ್ಶ, ಪ್ರೇರಣಾದಾಯಿ ಸ್ವಯಂಸೇವಕ ದೀನ ದಯಾಳ ಉಪಾಧ್ಯಾಯ. ಅವರನ್ನು ಚಿಂತಕರಾಗಿ, ದ್ರಷ್ಟಾರರಾಗಿ, ಆದರ್ಶ ರಾಜಕಾರಣಿಯಾಗಿ ನೋಡುವ ವಿವಿಧ ಆಯಾಮಗಳು ರೂಪುಗೊಂಡಿರುವುದು ಸ್ವಯಂಸೇವಕತ್ವದ ಆಧಾರದಲ್ಲಿಯೇ ಎನ್ನುವುದು ವಿಶೇಷ ಎಂದು ಹೇಳಿದರು.

ಭಾರತದ ಉನ್ನತಿಗೆ ಇವತ್ತಿನ ಯುವಪೀಳಿಗೆ ಕೆಲಸ ಮಾಡದೇ ಇನ್ಯಾರು ಮಾಡಿಯಾರು? ಎನ್ನುವುದು ದೀನ ದಯಾಳರ ನಿಲುವಾಗಿತ್ತು. ತಮ್ಮ ಯೌವನದಲ್ಲಿ ಅವರು ಮನಸ್ಸು ಮಾಡಿದ್ದರೆ ಅಂತರಾಷ್ಟ್ರೀಯ ಸ್ತರದ ವಿದ್ವತ್ತಿನ ಮೂರ್ತಿ ಆಗಬಹುದಿತ್ತು. ಆದರೆ ದೇಶದ ಅಗತ್ಯತೆಯ ಕಾರಣ ತಮ್ಮ ಬದುಕನ್ನು ದೇಶಕ್ಕಾಗಿಯೇ ಮುಡಿಪಾಗಿಟ್ಟರು. ಭಾರತದ ಏಳಿಗೆ ಒಂದೇ ತಮ್ಮ ಜೀವನದ ಗುರಿಯಾಗಿತ್ತು ಎಂದರು.
ಜನಸಂಘಕ್ಕೆ ವೈಚಾರಿಕ ಆಧಾರವನ್ನು ಗಟ್ಟಿಗೊಳಿಸಿದವರು ದೀನದಯಾಳ ಉಪಾಧ್ಯಾಯರು. ಇತಿಹಾಸವನ್ನು ಹೇಗೆ ನೋಡಬೇಕು ಎನ್ನುವುದನ್ನು ತಿಳಿಸಿದವರು. ಅನೇಕ ಸಂದರ್ಭಗಳಲ್ಲಿ ಚುನಾವಣೆಗಳನ್ನು ಸೋತರೂ ರಾಜಕೀಯ ಕ್ಷೇತ್ರದಲ್ಲಿ ಧ್ಯೇಯನಿಷ್ಠೆಗೆ ರಾಜಿಯಾಗಲಿಲ್ಲ. ಆ ಕಾರಣಕ್ಕಾಗಿ ಸೈದ್ಧಾಂತಿಕ ವಿರೋಧಿಗಳನ್ನೂ ಪ್ರಭಾವಿಸುವ ವ್ಯಕ್ತಿತ್ವ ಅವರದ್ದಾಗಿತ್ತು. ಭಾರತದ ಮಣ್ಣಿನ ವಿಚಾರದ ಆಧಾರಿತವಾಗಿ ರಾಜಕಿಯ ಕ್ಷೇತ್ರದಲ್ಲಿ ಭಾರತದ ಏಳಿಗೆಗಾಗಿ ಬೇಕಾದಂತಹ ಏಕಾತ್ಮ ಮಾನವ ದರ್ಶನವೆಂಬ ಹೊಸದೊಂದು ಚಿಂತನೆಯನ್ನು ಕೊಟ್ಟವರು ಅವರು ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಸಂಘಚಾಲಕ ಮಿಲಿಂದ ಗೋಖಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್, ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಮತ್ತಿತರರು ಭಾಗವಹಿಸಿದ್ದರು.
ಖ್ಯಾತ ಸಾಹಿತಿ ಸರಸ್ವತಿ ಸಮ್ಮಾನ್, ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















Discussion about this post