ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಮಾಜದ ಸಾತ್ವಿಕರ ಸಹಕಾರದೊಂದಿಗೆ ಮಠಾಧೀಶರುಗಳು ಧರ್ಮ ಮತ್ತು ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕು ಎಂದು ಉಡುಪಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಕರೆ ನೀಡಿದರು.
ಶ್ರೀ ಅಚ್ಚುತಪ್ರಜ್ಞ, ಜಗದ್ಗುರು ಶ್ರೀ ಪೂರ್ಣಪಜ್ಞ, ಸತ್ಯ ತೀರ್ಥ ಮಹಾಸಂಸ್ಥಾನ ಶ್ರೀ ಭಂಡಾರ ಕೇರಿ ಮಠ, ಭಾಗವತಾಶ್ರಮ ಪ್ರತಿಷ್ಠಾನ ಹಾಗೂ ಲೋಕ ಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನಗಳು ಸಂಯುಕ್ತವಾಗಿ ಬೆಂಗಳೂರಿನ ಗಿರಿನಗರದಲ್ಲಿರುವ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಿದ್ಯೇಶ ತೀರ್ಥರ 70 ನೇ ವರ್ಧಂತಿ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಲು ಮಠಪೀಠಗಳು ಮುಂದಾಗಬೇಕು ಇದಕ್ಕೆ ಸಾತ್ವಿಕರು ಸಹಕಾರವನ್ನು ನೀಡಬೇಕು. ಆಗ ಮಾತ್ರ ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ ಎಂದು ಸ್ವಾಮೀಜಿ ನುಡಿದರು.
ಯಾವ ಮಠಪೀಠಗಳಲ್ಲಿ ವಿದ್ವಾಂಸರಿಗೆ ಕಲಾವಿದರಿಗೆ ಶಾಸ್ತ್ರಕಾರರಿಗೆ ಮತ್ತು ಸನಾತನ ಪರಂಪರೆಯನ್ನು ಚಾಚು ತಪ್ಪದೆ ಪಾಲಿಸುವವರಿಗೆ ಮನ್ನಣೆ ಸಿಗುತ್ತದೆಯೋ ಅಲ್ಲಿ ಸಾಕ್ಷಾತ್ ಭಗವಂತನ ಆರಾಧನೆ ನಡೆಯುತ್ತದೆ. ಈ ನಿಟ್ಟಿನಲ್ಲಿ ಭಂಡಾರ ಕೇರಿ ಮಠ 70 ಜನ ವಿದ್ವಾಂಸರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರಿಂದ ವಿವಿಧ ವಿಚಾರಗಳ ಮಂಡನೆ ಮತ್ತು ಶಾಸ್ತ್ರ ಮಹಾಭಾರತ ರಾಮಾಯಣಗಳ ಸಾರ ಸಂಗ್ರಹಗಳ ಬೋಧನೆ ನಡೆದಿದೆ. ಈ ಸಂದರ್ಭದಲ್ಲಿ ಮಾಗ ಈ ಸಂದರ್ಭದಲ್ಲಿ ಮಾಗಡಿ ಸಮೀಪ ಇರುವ ಆನಂದವನ ಗುರುಕುಲದ ಸಮಗ್ರ ಪ್ರಗತಿಗೆ ಶ್ರೀಮಠವು ನಿಧಿ ಸಮರ್ಪಣೆಯನ್ನು ಮಾಡಿ ಧನ್ಯತೆ ಮೆರೆದಿದೆ ಎಂದು ಅವರು ಹೇಳಿದರು.
ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನವನ್ನು ನೀಡಿ, ಭಂಡಾರಕೇರಿ ಗುರುಗಳ ಶತಮಾನೋತ್ಸವವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಲು ಸಂಕಲ್ಪಿಸೋಣ ಎಂದರು.
ಶ್ರೀ ಮಠವು ವಿದ್ವಜನರಿಗೆ ಅಪಾರವಾದ ಮನ್ನಣೆಯನ್ನು ಮತ್ತು ವೇದಿಕೆಯನ್ನು ನೀಡುತ್ತಿದೆ. ಸ್ವತಃ ಶ್ರೀಗಳೆ ರಚನೆ ಮಾಡಿರುವ ವಿದೇಶ ವಿಠಲ ಅಂಕಿತ ಕೃತಿಗಳ ಪ್ರಕಟಣೆಯು ಈಗ ನಡೆದಿದೆ. ಈ ಸಂದರ್ಭದಲ್ಲಿ ಬಿಡುಗಡೆಯಾದಂತಹ ಎರಡು ಮಹತ್ತರವಾದ ಕೃತಿಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಸಾಕ್ಷಿಯಾಗಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಶ್ರೀ ವಿದ್ಯೇಶ ಸಪ್ತತಿ ವಿಚಾರ ವಿನೋದ ಉತ್ಸವ-ಶೀರ್ಷಿಕೆ ಅಡಿಯಲ್ಲಿ 70 ಜನ ಸಾರಂಗ ವಿದ್ವಾಂಸರಿಂದ ಚುಟುಕು ವೈವಿಧ್ಯ ಭರಿತ ಚೇತೋಹಾರಿ ವಿಚಾರ ಮಂಡನೆ ನಡೆಯಿತು.
ಮಹಾಭಾರತದ 18 ಪರ್ವಗಳು, ಭಾಗವತ ದ್ವಾದಶ ಸ್ಕಂದಗಳು ಮತ್ತು ಆರು ಉಪನಿಷತ್ತುಗಳ ಬಗ್ಗೆ 70 ಜನ ವಿದ್ವಾಂಸರಿAದ ವಿಚಾರ ವಿಮರ್ಶೆ ಮತ್ತು ವಿಚಾರ ಮಂಡನೆ ಗಮನ ಸೆಳೆಯಿತು.
ಬೆಂಗಳೂರಿನ ಶ್ರೀಜಯತೀರ್ಥ ವಿದ್ಯಾಪೀಠ, ಶ್ರೀ ಪೂರ್ಣ ಪ್ರಜ್ಞ ವಿದ್ಯಾಪೀಠ, ಮೈಸೂರಿನ ವ್ಯಾಸತೀರ್ಥ ವಿದ್ಯಾಪೀಠವೂ ಸೇರಿದಂತೆ ಮಂತ್ರಾಲಯ, ಸೋದೆ, ಪಲಿಮಾರು, ತಿರುಪತಿ, ಪುತ್ತಿಗೆ ಮತ್ತಿತರ ಮಹಾ ಸಂಸ್ಥಾನಗಳ ಗುರುಕುಲ ಮತ್ತು ವಿದ್ಯಾಪೀಠದ ವಿದ್ವಾಂಸರು ಭಾಗವಹಿಸಿದ್ದರು.
ಗ್ರಂಥ ಲೋಕಾರ್ಪಣೆ
ಶ್ರೀಮಠದ ಅಂಗಸಂಸ್ಥೆಯಾದ ಐತರೇಯ ಶೋಧ ಪ್ರಕಾಶನದ ವತಿಯಿಂದ ಪ್ರಣತಿ ದರ್ಪಣ ಎಂಬ ಗ್ರಂಥ (ಸಂಗ್ರಹ, ಅನುವಾದ- ಪಂಡಿತ ರಘೋತ್ತಮ ನಾಗಸಂಪಿಗೆ, ಪರಿಶೋಧನೆ ಹಾಗೂ ಪರಿಷ್ಕರಣೆ ಡಾ.ಎಚ್. ಸತ್ಯನಾರಾಯಣ ಆಚಾರ್ಯ) ಮತ್ತು ವಿದ್ಯೇಶ ವಿಚಾರ ಸಪ್ತತಿ, (ವಿವಿಧೆಡೆ ಶ್ರೀ ಭಂಡಾರ ಕೇರಿ ಗುರುಗಳು ಮಾಡಿದ ಉಪನ್ಯಾಸ, ಪ್ರವಚನ ಮತ್ತು ಅಮೃತೋಪದೇಶಗಳ ಸಾರ ಸಂಗ್ರಹ-ಉಡುಪಿಯ ಪಂಡಿತ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಂದ ಸಂಪಾದಿತ ಕೃತಿ) ಇವುಗಳ ಲೋಕಾರ್ಪಣೆ ನೆರವೇರಿತು.
ಪೇಜಾವರ ವಿದ್ಯಾ ಪೀಠದ ಪ್ರಾಚಾರ್ಯ ಸತ್ಯನಾರಾಯಣ ಡಾ. ಶ್ರೀನಿಧಿ, ವಿದುಷಿ ಶುಭಾ ಸಂತೋಷ, ಜಯರಾಂ ಇತರರು ಹಾಜರಿದ್ದರು.
70 ಜನ ಪಂಡಿತರಿಗೆ ರಜತ ಪಾತ್ರಾ ಸಹಿತ ಸನ್ಮಾನ ಮಾಡಿದ್ದು ವೈದಿಕ ವಿದ್ವತ್ ಪ್ರಪಂಚದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು.
ಗೌರವ ಸಮರ್ಪಣೆ
ಇದೇ ಸಂದರ್ಭದಲ್ಲಿ ಭೀಮನ ಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಅವರು ಪರಮಪೂಜ್ಯ ಭಂಡಾರಕೇರಿ ಶ್ರೀಗಳಿಗೆ ಮಲ್ಲಿಗೆ ಪುಷ್ಪದ ವಿಶೇಷ ಕಿರೀಟ ಸಮರ್ಪಣೆ ಮಾಡಿ ಗೌರವಿಸಿದರು.
ಗುರುಕುಲಕ್ಕೆ ನಿಧಿ ಸಮರ್ಪಣೆ
ಬೆಂಗಳೂರಿನ ಮಾಗಡಿ ಸಮೀಪದ ಅಡಕಮಾರನಹಳ್ಳಿಯಲ್ಲಿರುವ ಆನಂದವನ ಗುರುಕುಲಕ್ಕೆ ಭಂಡಾರ ಕೇರಿ ಮಠದ ವತಿಯಿಂದ 5 ಲಕ್ಷ ರೂಪಾಯಿ ವಿಶೇಷ ಅನುದಾನ ಪೂರ್ವಕ ಅನುಗ್ರಹ ನಿಧಿ ಸಮರ್ಪಣೆ ಮಾಡಲಾಯಿತು.
(ಆನಂದವನ ಗುರುಕುಲಕ್ಕೆ ದತ್ತಿ ದೇಣಿಗೆ ಮತ್ತು ದಾನ ನೀಡುವ ಆಸಕ್ತರು 7259040610 ಸಂಖ್ಯೆಗೆ ಸಂಪರ್ಕಿಸಬಹುದು).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post