ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಸನಾತನ ಪರಂಪರೆಯ ಪರಿಚಯ ಇಂದಿನ ಮಕ್ಕಳಿಗೆ ಅತ್ಯಗತ್ಯ ಎಂದು ಶ್ರೀ ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಪೂರ್ಣಪ್ರಮತಿ ಶಾಲೆಯಲ್ಲಿ ಶನಿವಾರ ಬೆಳಗ್ಗೆ ತ್ರಿವಿಕ್ರಮ ವಿಭಾಗದಲ್ಲಿ “ರಾಮಾಯಣ, ಮಹಾಭಾರತ, ಭಾಗವತ ಮತ್ತು ವ್ಯಾಕರಣ ಪರೀಕ್ಷಾ ಪರಿಕ್ರಮ ಘಟಕಕ್ಕೆ ಚಾಲನೆಯನ್ನು ನೀಡಿ ಅವರು ಆಶೀರ್ವಚನ ನೀಡಿದರು.
ಮಕ್ಕಳಿಗೆ ಇಂದು ಶಾಲಾ ಪಠ್ಯಕ್ರಮದ ಜೊತೆ ಜೊತೆಗೆ ಅಖಂಡ ಭಾರತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ವಿಶೇಷ ಪಾತ್ರಗಳು, ಭವ್ಯ ಪರಂಪರೆ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆಯೂ ಕನಿಷ್ಠ ಪರಿಚಯ ಆಗಲೇಬೇಕು. ಆಗ ಮಾತ್ರ ಶಿಕ್ಷಣ ಪರಿಪೂರ್ಣ ಎನಿಸುತ್ತದೆ
ಎಂದರು.
ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಢಿಗತವಾಗಿ, ಅವರು ನಾಳಿನ ಜವಾಬ್ದಾರಿಯುತ ಪ್ರಜೆಗಳಾಗಲು ಈ ರೀತಿಯ ಶಿಕ್ಷಣದಿಂದ ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಪೂರ್ಣಪ್ರಮತಿ ಶಾಲೆಯು ಮಕ್ಕಳನ್ನು ಸಂಸ್ಕೃತಿ ಮತ್ತು ಸಂಪ್ರದಾಯ ಬದ್ಧ ವಿದ್ಯಾರ್ಥಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ಅವರು ಹೇಳಿದರು.
ಪ್ರತಿಯೊಂದು ಮನೆಯ ಮಗುವೂ ನಮ್ಮ ಪರಂಪರೆಯ ಪ್ರತೀಕವಾಗಬೇಕು ಎಂದರೆ ನಮ್ಮ ತಾಯಂದಿರ ಕೊಡುಗೆ ವಿಶೇಷವಾಗಿ ಸಮರ್ಪಣೆ ಆಗಬೇಕು. ಮಗುವಿನ ಸಮಗ್ರ ವಿಕಸನಕ್ಕೆ ಮಾತೆಯರು ಎಳವೆಯಲ್ಲಿಯೇ ಕೊಡುವ ಮಾರ್ಗದರ್ಶನ ಬಹಳ ಪ್ರಧಾನ. ಈ ದಿಸೆದಲ್ಲಿ ಮಾತೆಯರಿಗೆ ಸನಾತನ ಸಂಸ್ಕೃತಿಯ ಪರಿಚಯ ಕಳಕಳಿ, ಜ್ಞಾನ ಇರಬೇಕಾದದ್ದು ಅತ್ಯಂತ ಅನಿವಾರ್ಯ ಎಂದು ಶ್ರೀಗಳು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಪ್ರಾಧ್ಯಾಪಕ ಧನಂಜಯ ಆಚಾರ್, ಈ ಶಾಲೆಯ ಮಕ್ಕಳಿಗೆ ಪಠ್ಯಕ್ರಮ ಕಲಿಕೆಯೊಂದಿಗೆ ಭಾಗವತ ರಾಮಾಯಣ, ವ್ಯಾಕರಣ, ನ್ಯಾಯ ಇತ್ಯಾದಿ ಶಾಸ್ತ್ರಗಳನ್ನು ಬೋಧನೆ ಮಾಡಿ ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆಯನ್ನು ನಡೆಸುವ ಮೂಲಕ ಸನಾತನ ಸಂಸ್ಕೃತಿ ಮತ್ತು ಇತಿಹಾಸವನ್ನು ಪರಿಚಯಿಸುವ ಯೋಜನೆ ರೂಪಿತವಾಗಿದೆ. ಈ ಕಾರ್ಯಕ್ಕೆ ಇಂದು ಶ್ರೀಗಳು ಚಾಲನೆ ನೀಡಿರುವುದು ಬಹು ವಿಶೇಷ ಎಂದರು.
ಮಕ್ಕಳ ಸಾಂಸ್ಕೃತಿಕ ವಿಕಸನಕ್ಕೆ ಸಂಬಂಧಪಟ್ಟಂತೆ ಭಂಡಾರ ಕೇರಿ ಶ್ರೀಗಳು ನೀಡುತ್ತಿರುವ ಪ್ರೋತ್ಸಾಹ ಬೆಂಬಲ ಮತ್ತು ಪ್ರೇರಣೆಗಳನ್ನು ಅವರು ಅತ್ಯಂತ ಅಭಿಮಾನದಿಂದ ಶ್ಲಾಘಿಸಿದರು.
ಪೂರ್ಣಪ್ರಮತಿ ಶಾಲೆಯ ಆಡಳಿತ ಮಂಡಳಿಯ ಪ್ರಮುಖರಾದ ಶ್ರೀನಿವಾಸ ಗುತ್ತಲ, ಎಸ್ . ರಾಘವೇಂದ್ರ ಶಿಕ್ಷಕರಾದ ಅನಂತ ಶರ್ಮ ಅಭಿಷೇಕ, ಶ್ರೀಕರ ಹೊಳ್ಳ, ಅರ್ಚನಾ, ಅನಂತಶಯನ ಸುಮನಾ ಭಟ್, ಗೀತಾ, ಹಿರಿಯ ವಿದ್ವಾಂಸರಾದ ರಂಗನಾಥ ಗಣಾಚಾರಿ, ಗುರುಗಳ ಆಪ್ತ ಕಾರ್ಯದರ್ಶಿ, ರಮೇಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post