ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಕ್ಕಳಿಗೆ ಎಳವೆಯಲ್ಲೇ ನಮ್ಮ ನೆಲದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸುವುದರಿಂದ ಅವರ ಬದುಕು ಉಜ್ವಲವಾಗುತ್ತದೆ ಎಂದು ಹಿರಿಯ ಭರತನಾಟ್ಯ Bharathanatya ವಿದುಷಿ ರೂಪಶ್ರೀ ಮಧುಸೂದನ ಹೇಳಿದರು.
ನಗರದ ಸುಂಕದಕಟ್ಟೆಯ ಸಂಯೋಗ – ಕನೆಕ್ಟಿಂಗ್ ಆರ್ಟ್ಸ್ ಕಲಾ ಶಾಲೆಯ 7 ಜನ ಯುವ ನರ್ತಕಿಯರ ಗೆಜ್ಜೆಪೂಜೆ ಕಾರ್ಯಕ್ರಮವನ್ನು ಭಾನುವಾರ ಸಂಜೆ ನಗರದ ಯಲಹಂಕ ಸ್ಯಾಟಲೈಟ್ ಟೌನ್ನ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 3 ದಶಕಗಳಿಂದ ಕಲಾಸೇವೆ ಮಾಡುತ್ತಿರುವ ಹಿರಿಯ ಭರತನಾಟ್ಯ ವಿದುಷಿ ಲತಾ ಲಕ್ಷ್ಮೀಶ ಅವರು ಮಕ್ಕಳಿಗೆ ಸಮಗ್ರ ಮಾರ್ಗದರ್ಶನ ನೀಡಿದ್ದಾರೆ. ಉತ್ತಮವಾಗಿ ಪಾಠಾಂತರವಾಗಿದೆ. ಅವರ ಗರಡಿಯಲ್ಲಿ ಪಳಗಿದ 7 ಜನ ಯುವ ಕಲಾವಿದೆಯರು ವೇದಿಕೆಯಲ್ಲಿ ಚುರುಕಾಗಿ ನರ್ತಿಸಿದ್ದಾರೆ. ಇದು ಗೆಜ್ಜೆ ಪೂಜೆ ಕಾರ್ಯಕ್ರಮ ಎನ್ನುವುದಕ್ಕಿಂತ ಪ್ರೌಢ ಹಂತದ ಕಛೇರಿ ಎನ್ನುವ ಮಟ್ಟದಲ್ಲಿ ಇತ್ತು ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಇಂದು ಬಹುತೇಕ ಮಕ್ಕಳು ಮತ್ತು ಯುವ ಜನರು ಪಾಪ್ ಮ್ಯೂಸಿಕ್ನಲ್ಲೇ ಮುಳುಗಿ ಹೋಗಿದ್ದಾರೆ. ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ ಪಾಲಕರು ತಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣದ ಜತೆಜತೆಗೇ ಸಂಗೀತ ಮತ್ತು ನೃತ್ಯ ಕಲಿಕೆ ಸಂಸ್ಕಾರ ನೀಡಬೇಕು. ಇದರಿಂದ ಉತ್ತಮ ಪ್ರಜೆಗಳ ನಿರ್ಮಾಣವಾಗುತ್ತದೆ ಎಂದರು.
ಮಂತ್ರಮುಗ್ಧವಾಗಿಸಿತು:
ಯಲಹಂಕ ಶಾಸಕ ಎಂ.ಆರ್. ವಿಶ್ವನಾಥ ಮಾತನಾಡಿ, ಎಲ್ಲಿಯೂ ಲಯ ತಪ್ಪದೇ 7 ಜನ ನರ್ತಕಿಯರು ಮನೋಜ್ಞ ಅಭಿನಯ ಹೊಮ್ಮಿಸಿದ್ದಾರೆ. 20 ನಿಮಿಷಗಳ ವರ್ಣಂ ಅಭಿನಯ ನನ್ನನ್ನು ಮಂತ್ರಮುಗ್ಧವಾಗಿಸಿತು. ಇದು ನಿಜಕ್ಕೂ ಸಾಧನೆಯ ಪ್ರಮುಖ ಮೆಟ್ಟಿಲು. ವಿದುಷಿ ಲತಾ ಅವರ ಶಿಷ್ಯೆಯರು ದೇಶದ ಪ್ರಖ್ಯಾತ ಕಲಾವಿದರಾಗಿ ಬೆಳೆಯಲಿ, ನಮ್ಮ ಭಾರತೀಯ ನೃತ್ಯ ಪ್ರಕಾರಗಳು ವಿಶ್ವಾದ್ಯಂತ ಬೆಳಗಲಿ ಎಂದು ಹಾರೈಸಿದರು. ನೃತ್ಯ ವಿದುಷಿ ಮತ್ತು ಗುರು ಲತಾ ಲಕ್ಷ್ಮೀಶ, ಹಿರಿಯ ಚಿತ್ರಕಲಾವಿದ ಮತ್ತು ಯೋಗ ಗುರು ಲಕ್ಷ್ಮೀಶ ಹೆಗಡೆ ಹೊಸಾಕುಳಿ, ಸೇಂಟ್ ಜೋಸೆಫ್ ಶಾಲೆಯ ಶಿಕ್ಷಕಿ ಲತಾ ಇತರರು ಹಾಜರಿದ್ದರು.
ವಿವಿಧ ಕೃತಿಗಳಿಗೆ ಪ್ರೌಢ ಅಭಿನಯ:
ಯುವ ಪ್ರತಿಭೆಗಳಾದ ಎಸ್. ಸಿ. ಅಕ್ಷರಾ, ಎಂ. ದಿಯಾ, ಪಿ ಕಾಶ್ವಿ, ನಿಹಾರಿಕಾ, ಪ್ರಣೀತಾ, ಪ್ರಿಯಾಂಕಾ ದೇವಿ,
ಪೂಜಿತಾ ಅವರು ಲಾಸ್ಯರಂಜನಾ ಸರಣಿ 3ನೇ ಕುಸುಮಕ್ಕೆ ನರ್ತನದ ಮೂಲಕ ಮೆರುಗು ತಂದರು. ಖಂಡ ಅಲರಿಪು, ನರಸಿಂಹ ಕೌತ್ವಂ, ಶೃಂಗಾರ ವೇಲಾವಣೆ, ಬೃಂದಾವನಿ ವೇಣು, ವರ್ಣಂ ( ನಾಗಾಯ್ ನೀ ಪರಾದಿ), ಗಜಾನನಯುತಂ ಗಣೇಶ್ವರಂ, ಅಂಬಾ ಶಾಂಭವೀ ಕೃತಿಗಳಿಗೆ ನರ್ತನ ರೂಪ ನೀಡಿ ಅಭಿನಯಿಸಿದ್ದು ಮೆಚ್ಚುಗೆ ಗಳಿಸಿತು. ಸಿಂಹೇದ್ರ ಮಧ್ಯಮ ತಿಲ್ಲಾನ, ರೇವತಿ ರಾಗದ ಮಂಗಳಂನೊಂದಿಗೆ ಲಾಸ್ಯ ರಂಜನೆಗೆ ಮಂಗಳ ಹಾಡಿದ್ದು ವಿಶೇಷವಾಗಿತ್ತು.
ಹಿಮ್ಮೇಳ ಸಹಕಾರ:
ನಟುವಾಂಗದಲ್ಲಿ ಗುರು ಲತಾ ಲಕ್ಷ್ಮೀಶ , ಗಾಯನದಲ್ಲಿ ವಿದ್ವಾಂಸರಾದ ನಂದಕುಮಾರ್, ಮೃದಂಗದಲ್ಲಿ ಜನಾರ್ಧನ, ಕೊಳಲಿನಲ್ಲಿ ರಾಕೇಶ್ ಸುಧೀರ, ವೀಣೆಯಲ್ಲಿ ಗೋಪಾಲ ವೆಂಕಟರಮಣ, ರಿದಂ ಪ್ಯಾಡ್ನಲ್ಲಿ ಭಾರ್ಗವ ಮತ್ತು ಖಂಜಿರದಲ್ಲಿ ವಿದ್ಯಾಸಾಗರ ಅವರ ಸಹಕಾರ ಗುಡಿಗೆ ಕಲಶವಿಟ್ಟಂತೆ ಇತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















