ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕವಿ ಗೋಪಾಲಕೃಷ್ಣ ಅಡಿಗರ ಕವಿತೆಗಳು ಸಾಹಿತ್ಯ ರಂಜಿಸುವ ಅಥವಾ ಅಮಲು ತರಿಸುವ ಕಾವ್ಯಗಳಲ್ಲದೆ ಅವರ ಕೃತಿಗಳು ಓದುಗರ ಮನಸ್ಸನ್ನು ಕೆಣಕುವ, ಚಿಂಥನೆಗೆ ಒಳಪಡಿಸುವ ಕಾವ್ಯವಾಗಿದೆ ಎಂದು ಸಾಗರದ ಸಾಹಿತಿ ಕವಿ ಗಣೇಶ್ ಹೇಳಿದರು.
ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದ ಅನಸೂಯಮ್ಮ ಐತಾಳ್ ವೇದಿಕೆಯಲ್ಲಿ ಭೂಮಿಕ ವೇದಿಕೆ ಏರ್ಪಡಿಸಿದ್ದ ಮರಳಿ-ಮನಕೆ ಕವಿ ಗೋಪಾಲಕೃಷ್ಣ ಅಡಿಗರ ನೆನಪು ಕಾವ್ಯಸಂಜೆ ಕಾರ್ಯಕ್ರಮದಲ್ಲಿ ಅಡಿಗರ ಸಾಹಿತ್ಯ ಕೃಷಿ ಕುರಿತು ಅವರು ಉಪನ್ಯಾಸ ನೀಡಿದರು.
ಅಡಿಗರ ಕೃತಿಯ ವಿಶೇಷತೆ ಎಂದರೆ ಅವರ ಒಂದೇ ಕಾವ್ಯವನ್ನು ಬೇರೆ, ಬೇರೆ ಕಾಲಗಳಲ್ಲಿ ಓದಿದಾಗ ಬೇರೆ, ಬೇರೆಯಾದ ಅರ್ಥವನ್ನು ಓದುಗರ ಮನಸ್ಸಿಗೆ ತರುವ ಅದ್ಭುತ ಶಕ್ತಿಹೊಂದಿರುವ ಕಾವ್ಯವಾಗಿದೆ. ಈ ದೇಶದ ನೆಲ, ಜಲ, ಪ್ರಕೃತಿ ಎಲ್ಲದರ ಪಾವಿತ್ರತ್ಯತೆಯನ್ನು ತಮ್ಮ ಕಾವ್ಯದಲ್ಲಿ ಅದ್ಬುತವಾದ ಪದಗುಚ್ಛಗಳಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಅಡಿಗರ ಕಾವ್ಯ ನಿತ್ಯನಿರಂತರವಾಗಿ ಹರಿಯುವ ಗಂಗೆಯಂತೆ ಶುದ್ಧವಾಗಿ ಓದುಗರ ಮನದಾಳದಲ್ಲಿ ಸದಾ ನೆನಪಿನಲ್ಲುಳಿಯುವ ಸುಸಂಸ್ಕೃತ ಕಾವ್ಯವೆನಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಭೂಮಿಕಾ ವೇದಿಕೆಯ ಅಧ್ಯಕ್ಷ ಡಾ.ಕೃಷ್ಣ ಎಸ್. ಭಟ್ ನವ್ಯಕಾವ್ಯ ಪ್ರವರ್ತಕರೆನಿಸಿದ ಗೋಪಾಲ ಕೃಷ್ಣಡಿಗರ ಕಾವ್ಯ ಪ್ರಪಂಚವನ್ನು ಅವಲೋಕಿಸಿದಾಗ ಅವರ ನಾಯಕತ್ವದಲ್ಲಿ ಅರಳಿದ ನವ್ಯ ಸಾಹಿತ್ಯ ಸಮೃದ್ಧ ಸತ್ವಪೂರ್ಣವಾಗಿ ಬೆಳೆದು ಕನ್ನಡ ಸಾಹಿತ್ಯ ಲೋಕಕ್ಕೆ ಭವ್ಯಪರಂಪರೆಯನ್ನು ಕಟ್ಟಿಕೊಟ್ಟಿದೆ ಎಂದರು.
ಡಾ.ವೀಣಾ ಭಟ್ ಅತಿಥಿ ಪರಿಚಯ ಮಾಡಿದರೆ, ಶೋಭಾ ಸಂಗಡಿಗರು ಪ್ರಾರ್ಥಿಸಿ, ಕಾರ್ಯದರ್ಶಿ ಅಪರಂಜಿ ಶಿವರಾಜ್ ಸ್ವಾಗತಿಸಿ, ಗೌರವಾಧ್ಯಕ್ಷ ಕೆ. ಲಕ್ಷ್ಮಣರಾವ್ ವಂದಿಸಿ, ಆನಂದ್ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post