ಭದ್ರಾವತಿ: ಪ್ಲಾಸ್ಟಿಕ್ ಸಮಸ್ಯೆ ದೇಶದಲ್ಲಿಂದು ಕಂಟಕವಾಗಿ ಪರಿಣಿಮಿಸಿದೆ. ಸರಕಾರಗಳು ಅದರ ನಿವಾರಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದರು ಪ್ರಯೋಜನವಾಗದಿರುವುದು ವಿಷಾಧನೀಯ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ನೈರ್ಮಲ್ಯ ತಡೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ಸರಕಾರ ಮಣ್ಣಿನ ಪರಿಕರಗಳ ಚಿಂತನೆಗೆ ಮುಂದಾಗಬಹುದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಪರಿಸರ ಕಾಳಜಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೃಹತ್ ಬ್ಯಾನರ್, ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಇದರಿಂದ ಸ್ವಚ್ಛ ಭಾರತ್ ಆಂದೋಲನ ಆರಂಭಗೊಂಡ ನಂತರ ದೇಶದಲ್ಲಿನ ಯುವಜನತೆಯಿಂದ ಸ್ವಚ್ಛತೆಗೆ ಬಹಳಷ್ಟು ಜಾಗೃತಿ ಮೂಡುತ್ತಿದೆ. ದುರಂತವೆಂದರೆ ಕೇವಲ ಪ್ಲಾಸ್ಟಿಕ್ ಕೈಚೀಲಗಳ ಬಳಕೆಯ ಮಾತ್ರ ನಿಷೇಧಕ್ಕೆ ಒತ್ತು ನೀಡುತ್ತಿರುವುದರಿಂದ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧತರಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಉಪಯೋಗಿಸುತ್ತಿರುವ ಡ್ರಮ್, ಸಿಂಟೆಕ್ಸ್ ಟ್ಯಾಂಕ್ಗಳು ಸೇರಿದಂತೆ ಅನೇಕ ವಸ್ತುಗಳ ನಿಷೇಧಕ್ಕೆ ಚಿಂತನೆ ನಡೆಯಬೇಕಿದೆ.
ಆಧುನಿಕ ಜೀವನ ಶೈಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಬದುಕಿನ ಒಂದು ಭಾಗದಂತಾಗಿದೆಯಾದರೂ, ಇದರಿಂದ ಆರೋಗ್ಯ ಸಮಸ್ಯೆ ಹಾಗೂ ಪರಿಸರಕ್ಕೆ ಮಾರಕವಾಗಿದೆ. ಪ್ರತಿನಿತ್ಯ ಸಂಚರಿಸುವ ಟ್ರೆನ್, ಬಸ್ ನಿಲ್ದಾಣಗಳಲ್ಲಿ ಎತ್ಯೇಚ್ಚವಾಗಿ ಮಾರಾಟವಾಗುತ್ತಿರುವ ಪ್ಲಾಸ್ಟಿಕ್ ಬಾಟಲ್ ನೀರು, ಮನೆಗಳಲ್ಲಿ ಉಪಯೋಗಿಸುತ್ತಿರುವ ಕ್ಯಾನ್’ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗಬೇಕಾದ ಅವಶ್ಯಕತೆ ಇದೆ. ನೆರೆ ರಾಜ್ಯಗಳಲ್ಲಿ ರೈಲು ಗಾಡಿಗಳಲ್ಲಿ ಮಣ್ಣಿನ ಉಪಕರಣಗಳ ಮೂಲಕ ಕುಡಿಯಲು ನೀರು, ಮಜ್ಜಿಗೆ ಒದಗಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿತರುವಂತಾಗಬೇಕಿದೆ. ಇದರಿಂದ ಪರಿಸರಕ್ಕೆ ಪೂರಕವಾಗಲಿದೆ.
ಪ್ಲಾಸ್ಟಿಕ್ ಬಳಕೆಯಿಂದ ಅಸ್ವಚ್ಛತೆಗೆ ಕಾರಣವಾಗಿರುವ ಜೊತೆಯಲ್ಲಿ ಕುಂಬಾರರ ಬದುಕು ಹಸನಾಗಲಿದೆ. ಜೊತೆಗೆ ಕುಂಬಾರಿಕೆಯನ್ನೇ ನಂಬಿಕೊಂಡ ಕುಟುಂಬಗಳಿಗೂ ಸಹ ನೆರವಾಗಲಿದೆ. ಇದರಿಂದ ಅತಂತ್ರ ಸ್ಥಿತಿಗೆ ಸಿಲುಕಿರುವ ಪರಿಸ್ಥಿತಿ ಕಂಡುಬರುತ್ತಿದೆ. ಇದೀಗ ಕುಂಬಾರಿಕೆಯನ್ನು ನಂಬಿಕೊಂಡ ಕುಟುಂಬಗಳು ನಷ್ಟದ ಹಾದಿಯಲ್ಲಿದ್ದು, ಬಹಳಷ್ಟು ಕುಟುಂಬಗಳು ಈ ವೃತ್ತಿಯನ್ನೇ ತೊರೆಯುತ್ತಿರುವ ಸ್ಥಿತಿ ಕಂಡುಬರುತ್ತಿದೆ. ಆದ್ದರಿಂದ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗದಿದ್ದರೆ, ಮುಂದಿನ ದಿನಗಳಲ್ಲಿ ಬೇಕೆಂದರೂ ಸಿಗಲಾರದ ಸ್ಥಿತಿ ಎದುರಾಗಲಿದೆ. ಇದನ್ನು ತಡೆಗಟ್ಟಲು ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಿದೆ.
ಹಿಂದಿನ ಕಾಲದಲ್ಲಿ ಅಡುಗೆ ಮನೆಯಲ್ಲಿ ಬಹಳಷ್ಟು ಮಣ್ಣಿನ ಉಪಕರಣಗಳನ್ನೇ ಬಳಸುತ್ತಿದ್ದರು. ಇದರಿಂದ ಬಹಳಷ್ಟು ರುಚಿ ಸಿಗುವುದರ ಜೊತೆಗೆ, ಉತ್ತಮ ಆರೋಗ್ಯಕ್ಕೂ ಪೂರಕವಾಗಿದ್ದವು. ಮಣ್ಣಿನ ಉಪಕರಣಗಳ ತಯಾರಿಸುವ ಕಂಬಾರರ ಕುಟುಂಬಗಳಿಗೂ ಇದು ಬದುಕು ಕಟ್ಟಿಕೊಳ್ಳಲು ವೃತ್ತಿ ಸಹಾಯಕವಾಗಿ ಮಡಿಕೆಗಳ ಬಳಕೆ ಸಹಕಾರಿಯಾಗಿದ್ದವು. ಇಂದು ತಣ್ಣನೆ ನೀರಿಗಾಗಿ ಪ್ರೀಡ್ಜ್ ಹಾಗೂ ಪ್ರೀಜರನ್ನೇ ಅವಲಂಭಿಸಬೇಕಿದೆ.
ಆದರೆ ಇದೀಗ ಬಹುತೇಕ ಪ್ಲಾಸ್ಟಿಕ್ ಬಳಕೆಯ ವಸ್ತುಗಳ ಬಳಕೆ ಕಂಡುಬರುತ್ತಿದ್ದು, ಇದರಿಂದ ಹಲವಾರು ರೀತಿಯ ಅವಾಂತರಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ ಇನ್ನಾದರೂ ಜನರು ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ.
ಮಣ್ಣಿನ ಪರಿಕರಗಳ ಉಪಯೋಗ ಕುಂಠಿತ:
ಕೇವಲ 2 ರೂ. ದೀಪದಿಂದ ಹಿಡಿದು 500 ರೂ. ಬೆಲೆ ಬಾಳುವ ನವೀನ ಮಾದರಿಯ ನಲ್ಲಿಯ ಮಡಕೆಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ. ಒಂದೊಂದೆಡೆ ಜನರಿಂದ ಬಳಕೆ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಮಣ್ಣು ಸಿಗುವುದು ಸಹ ಕಷ್ಟವಾಗುತ್ತಿದೆ. ಜೀವನ ಸಾಗಿಸಲು ಕುಂಬಾರಿಕೆ ಲಾಭದಾಯಕವಾಗಿಲ್ಲದ ಕಾರಣ ಬಹಳಷ್ಟು ಜನರು ವೃತ್ತಿಯನ್ನು ತೊರೆದಿದ್ದಾರೆ.
ಇಂದು ಮದುವೆ-ಮುಂಜಿ ಸೇರಿದಂತೆ ಕೆಲವು ಶುಭ ಸಮಾರಂಭಗಳಿಗೆ ಅಗತ್ಯವಿರುವ ಚಿತ್ರಲೇಪಿತ ಮಡಿಕೆಗಳಿಗಷ್ಟೇ ಬೇಡಿಕೆ ಕಂಡುಬರುತ್ತಿದೆ. ಬಹಳಷ್ಟು ಜನ ವೃತ್ತಿ ತೊರೆಯಬಾರದು ಎಂಬ ಕಾರಣಕ್ಕಷ್ಟೇ ಕಸುಬು ಬಿಡದೆ, ಮುಂದುವರೆಸಿದ್ದಾರೆ. ಇದನ್ನೇ ನಂಬಿಕೊಂಡ ಕುಟುಂಬಗಳ ಸ್ಥಿತಿ ಹದಗೆಟ್ಟಿದೆ. ಮಣ್ಣಿನ ಉಪಕರಣಗಳು ಬಹಳಷ್ಟು ಉಪಯೋಗಕಾರಿಯಾಗಿದ್ದರೂ, ಜನರು ಅದೇಕೆ ನಿರುತ್ಸಾಹ ತೋರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕುಂಬಾರ ಬೀದಿಯ ವಾಸಿ ಹಾಗೂ ಮಣ್ಣಿನ ಪರಿಕರಗಳ ವ್ಯಾಪಾರಿ ಪಿ. ಬಸವರಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post