ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಸದನದಲ್ಲಿ ಗುತ್ತಿಗೆ ಕಾರ್ಮಿಕರ ಕುಂದುಕೊರತೆಗಳನ್ನು ನೀಗಿಸುವ ಸಲುವಾಗಿ ಅಧಿವೇಶನದಲ್ಲಿ ವಿಷಯ ಮಂಡಿಸುವಂತೆ ನಗರಸಭಾ ಹೊರಗುತ್ತಿಗೆ ನೌಕರರ ಸಂಘದಿಂದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೂನಿಯರ್ ಸೀನಿಯರ್ ಪ್ರೋಗ್ರಾಮರ್, ಡಾಟಾ ಎಂಟ್ರಿ ಆಪರೇಟರ್, ನೀರು ಸರಬರಾಜು ಸಹಾಯಕರು, ಡ್ರೈವರ್, ಲೋಡರ್, ಕ್ಲೀನರ್, ಎಸ್ಟಿಪಿ ನೌಕರರು, ಯುಜಿಡಿ ಕಾರ್ಮಿಕರು ಮತ್ತು ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರು ಹಲವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇರೆಗೆ ಕೊರೋನಾದಂತಹ ಸಂಕಷ್ಟದ ಸ್ಥಿತಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.
ಕನಿಷ್ಠ ವೇತನ, ಭವಿಷ್ಯ ನಿಧಿ ಬಗ್ಗೆ ಗುತ್ತಿಗೆ ಏಜೆನ್ಸಿಗಳಿಗೆ ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಒಡ್ಡುತ್ತಾರೆ. ನೌಕರರು ಸೇವಾ ಭದ್ರತೆ ಇಲ್ಲದೇ ಜೀವನ ನಿರ್ವಹಣೆಯ ಕಷ್ಟಕಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಮನಗೊಂಡು ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ವಯ ಸೇವಾ ಭದ್ರತೆ ಹಾಗೂ ನೌಕರಿ ಖಾಯಮಾತಿ ಮಾಡಲು ವಿಧಾನ ಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತಬೇಕಾಗಿ ಶಾಸಕ ಸಂಗಮೇಶ್ವರ್ ಅವರಿಗೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಮಹಮ್ಮದ್ ಗೌಸ್, ನೀರು ಸರಬರಾಜು ತಾಲ್ಲೂಕು ಮುಖಂಡರಾದ ಮೂರ್ತಿ, ಅಧ್ಯಕ್ಷ ಪ್ರಸನ್ನ, ಅಭಿಷೇಕ್, ವಸಂತ ಮತ್ತಿತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post