ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಒಂದು ಕಾಲದಲ್ಲಿ ಭದ್ರಾವತಿ ಕ್ಷೇತ್ರದ ಅಸಂಖ್ಯಾತ ಜನರಿಗೆ ಉದ್ಯೋಗ ಒದಗಿಸಿ, ಸಾವಿರಾರು ಕುಟುಂಬಗಳಿಗೆ ಬದುಕು ನೀಡಿ, ಅನ್ನದಾತ ಸಂಸ್ಥೆಯಾಗಿದ್ದ ಸರ್.ಎಂ.ವಿ. ಸಂಸ್ಥಾಪಿತ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇಂದು ತನ್ನ ಗತಕಾಲದ ವೈಭವವನ್ನು ಕಳೆದುಕೊಂಡು, ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಣಗಾಡುತ್ತಾ ನೋವಿನ ಸ್ಥಿತಿಯಲ್ಲಿದೆ.
ಆದರೂ ಸಹ ಕೊರೋನಾ ಸಂಕಷ್ಠದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜನರ ಪ್ರಾಣ ಉಳಿಸುವ ಸಲುವಾಗಿ ತನ್ನ ಪ್ರಾಂಗಣದಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕದಿಂದ ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಮಾಡುವ ಸೇವಾ ಕಾರ್ಯಕ್ಕೆ ಹೆಗಲು ನೀಡಿ ನಿಜವಾದ ಅರ್ಥದಲ್ಲಿ ಕೋವಿಡ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದೆ.
ಕಾರ್ಖಾನೆಯ ಅಂಗಳದಲ್ಲಿ ಹಲವು ದಶಕಗಳ ಹಿಂದೆ ಉತ್ತರ ಭಾರತ ಮೂಲದ ಬಾಲ್ ದೋಟ್ ಮಾಲೀಕತ್ವದ ಎಂಎಸ್ಪಿಎಲ್ ಕಂಪನಿಯ ಸಹಯೋಗದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಿ, ಕಾರ್ಖಾನೆಗೆ ಅಗತ್ಯವಾದ ಪ್ರಮಾಣದ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿತ್ತು. ಆಕ್ಸಿಜನ್ ಉತ್ಪಾದನೆ ಮತ್ತು ಅವುಗಳನ್ನು ಜಂಬೋ ಸಿಲಿಂಡರ್ಗಳಲ್ಲಿ ತುಂಬಲು ಅಂದಿನ ಕಾಲದಲ್ಲಿಯೇ ಲಕ್ಷಾಂತರ ರೂ. ಖರ್ಚಾಗುತ್ತಿತ್ತು. ಕಾರ್ಖಾನೆ ಲಾಭದಾಯಕವಾಗಿ ನಡೆಯುತ್ತಿದ್ದರಿಂದ ಆ ವೆಚ್ಚ ಕಷ್ಟ ಎನಿಸುತ್ತಿರಲಿಲ್ಲ. ಆದರೆ ಕಾಲಕ್ರಮೇಣ ವಿಐಎಸ್ಎಲ್ ನಷ್ಟದ ಹಾದಿಯಲ್ಲಿ ಸಾಗಿದ ಪರಿಣಾಮ ಕಾರ್ಖಾನೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಸಂಖ್ಯೆ, ಉತ್ಪಾದನೆ, ಮಾರಾಟ ಎಲ್ಲವೂ ಕುಸಿಯಿತು. ಕ್ರಮೇಣ, ಕಾರ್ಖಾನೆಯ ಹಲವು ಘಟಕಗಳು ಮುಚ್ಚುತ್ತಾ ಬಂದವು. ಅದರಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಈ ಆಕ್ಸಿಜನ್ ಘಟಕದಲ್ಲೂ ಸಹ ಎಂಎಸ್ಪಿಎಲ್ ಉತ್ಪಾದನೆ ಸ್ಥಗಿತಗೊಳಿಸಿ ಮುಚ್ಚಲ್ಪಟಿತ್ತು.
ಕೊರೋನಾದಿಂದ ಮತ್ತೆ ಸುದ್ಧಿಯಾದ ಆಕ್ಸಿಜನ್ ಘಟಕ
ಹೊರ ಜಗತ್ತಿನ ಬಹುತೇಕರಿಗೆ ಈ ಕಾರ್ಖಾನೆಯಲ್ಲಿ ಪಳೆಯುಳಿಕೆಯಾಗಿ ಉಳಿದ ಆಕ್ಸಿಜನ್ ಘಟಕದ ಬಗ್ಗೆ ಮರೆತು ಹೋದಂತಾಗಿತ್ತು. ಆದರೆ ಕೊರೋನಾ ಎರಡನೆಯ ಅಲೆ ಸೃಷ್ಠಿಸಿರುವ ಆಕ್ಸಿಜನ್ ಕೊರತೆಯ ಅವಾಂತರದ ಪರಿಣಾಮವಾಗಿ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಯ ಕೊರತೆ ಆಸ್ಪತ್ರೆಗಳಲ್ಲಿ ಹಾಹಾಕಾರ ಉಲ್ಬಣಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಉತ್ಪಾದನೆಯ ಮಾತುಗಳು ಚರ್ಚೆಯಾದ ಪರಿಣಾಮವಾಗಿ ವಿಐಎಸ್’ಎಲ್ ಕಾರ್ಖಾನೆಯಲ್ಲಿ ಸ್ಥಗಿತಗೊಂಡಿರುವ ಆಕ್ಸಿಜನ್ ಘಟಕದತ್ತ ರಾಜ್ಯ ಸರ್ಕಾರದ ಚಿತ್ತ ಹರಿಯಿತು. ಕಾರ್ಖಾನೆಯ ಆಡಳಿತದ ಜೊತೆ ಮತ್ತು ಎಂಎಸ್ಪಿಎಲ್ ಕಂಪನಿ ಜೊತೆ ಸರ್ಕಾರ ಮಾತುಕತೆ ನಡೆಸಿದ ಪರಿಣಾಮ ವಿಐಎಸ್ಎಲ್ ಕಾರ್ಖಾನೆಯಲ್ಲಿನ ಆಕ್ಸಿಜನ್ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆಗೆ ಮರು ಚಾಲನೆ ದೊರಕಿದೆ. ವಿಐಎಸ್ಎಲ್ ಕಂಪನಿಯಲ್ಲಿ ಲಭ್ಯವಿರುವ 1 ಕಂಪ್ರೆûಸರ್ ನೆರವಿನಿಂದ 150 ಜಂಬೋ ಸಿಲಿಂಡರ್ಗಳಿಗೆ ಆಕ್ಸಿಜನ್ ತುಂಬುವ ಕಾರ್ಯ ಆರಂಭವಾಗಿದೆ. ಅವುಗಳನ್ನು ಈಗಾಗಲೇ ಸರ್ಕಾರ ಅಗತ್ಯವಿರುವ ಕೋವಿಡ್ ರೋಗಿಗಳಿಗೆ ಪೂರೈಸುವುದಕ್ಕೆ ವ್ಯವಸ್ಥೆ ಮಾಡಿದೆ.
ಈ ನಿಟ್ಟಿನಲ್ಲಿ ಉತ್ಪಾದನೆಗೊಳ್ಳುವ ಆಕ್ಸಿಜನನ್ನು ಜಂಬೋ ಸಿಲಿಂಡರ್ಗಳಿಗೆ ತುಂಬಲು ದಿನವೊಂದಕ್ಕೆ 2 ಲಕ್ಷ ರೂ. ವಿದ್ಯುತ್ ವೆಚ್ಚವಾಗುವುದರ ಜೊತೆಗೆ ಆಕ್ಸಿಜನ್ ತಯಾರಿಕೆಗೆ ಹತ್ತು ಲಕ್ಷಕ್ಕೂ ಅಧಿಕ ರೂ. ವೆಚ್ಚವಾಗುತ್ತದೆ. ಇದನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ.
ಮಾತೃ ಹೃದಯಿ ವಿಐಎಸ್ಎಲ್
ಕೇಂದ್ರ ಸರ್ಕಾರ ವಿಐಎಸ್ಎಲ್ ಕಂಪನಿಯನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಿ ಅದಕ್ಕೆ ಮರುಜೀವ ತುಂಬಬೇಕೆಂಬ ಈ ಕ್ಷೇತ್ರದ ಜನತೆಯ ನಿರೀಕ್ಷೆ ಈವರೆಗೆ ಫಲ ನೀಡದ ಪರಿಣಾಮ ಕಾರ್ಖಾನೆ ಪುನಶ್ಚೇತನಗೊಳ್ಳದೆ ಕೋವಿಡ್ ರೋಗಿಗಿಂತ ದಯನೀಯ ಸ್ಥಿತಿಯಲ್ಲಿ ಉಸಿರಾಡುತ್ತಿದೆ. ಈ ಸಂದರ್ಭದಲ್ಲಿ ತನ್ನ ದುಃಸ್ಥಿತಿಯನ್ನೂ ಲೆಕ್ಕಿಸದೆ ತಾಯಿಯು ತನಗೆಷ್ಟೇ ಕಷ್ಟವಾದರೂ ತನ್ನ ಮಗುವಿನ ಜೀವಕ್ಕೆ ತೊಂದರೆಯಾಗದ ರೀತಿ ಮಗುವಿನ ರಕ್ಷಣೆಗೆ ಮುಂದಾಗುತ್ತಾಳೋ ಆ ರೀತಿಯಲ್ಲಿ ವಿಐಎಸ್ಎಲ್ ಕಾರ್ಖಾನೆ ಜನರ ಬದುಕಿಗೆ ಅಗತ್ಯವಾದ ಪ್ರಾಣವಾಯು ಆಮ್ಲಜನಕವನ್ನು ಪೂರೈಸುತ್ತಿದೆ. ಈ ಕಾರ್ಯದಲ್ಲಿ ಯಶಸ್ವಿಯಾಗಿರುವ ವಿಐಎಸ್ಎಲ್ ಕಾರ್ಖಾನೆಯ ಸೇವಾ ಮನೋಭಾವ ನಿಜಕ್ಕೂ ಅನನ್ಯ.
ವಿಐಎಸ್ಎಲ್ ಉಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ
ಇಂತಹ ಸೇವಾ ಮನೋಭಾವದ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಲಾಭ-ನಷ್ಟದ ದೃಷ್ಠಿಕೋನದಲ್ಲಿ ನೋಡದೆ, ಸರ್ಎಂವಿ ಸಂಸ್ಥಾಪಿತವಾದ ಈ ಕಾರ್ಖಾನೆಯನ್ನು ಸಾರ್ವಜನಿಕ ವಲಯದ ಉದ್ದಿಮೆಯಾಗಿ ಉಳಿಸಿ ಬೆಳೆಸುವ ಮೂಲಕ ಕೇಂದ್ರ ಸರ್ಕಾರ ಇದರ ಋಣವನ್ನು ಸ್ವಲ್ಪವಾದರೂ ತೀರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಇದಕ್ಕೆ ರಾಜ್ಯ ಸರ್ಕಾರ ತನ್ನ ಎಲ್ಲಾ ಶಕ್ತಿ, ಪ್ರಭಾವವನ್ನು ಬಳಸಿ ಕೇಂದ್ರ ಸರ್ಕಾರದ ಮನವೊಲಿಸುವ ಕಾರ್ಯವನ್ನು ಕೋವಿಡ್ ಸಂಕಷ್ಟದ ದಿನಗಳು ಕಳೆದ ನಂತರ ಮಾಡಬಹುದೆಂಬ ಆಶಾಭಾವನೆ ಈ ಕ್ಷೇತ್ರದ ಜನತೆಯ ಮನದಲ್ಲಿ ಮೂಡಿದೆ. ಉಪಕಾರ ಮಾಡಿದರಿಗೆ ಪ್ರತ್ಯುಪಕಾರ ಮಾಡುವುದು ಕರ್ತವ್ಯ. ಈ ನಿಟ್ಟಿನಲ್ಲಿ ಕೋವಿಡ್ ಸಂಕಷ್ಠದಲ್ಲಿ ಪ್ರಾಣ ಉಳಿಸಲು ಸಹಾಯ ಮಾಡಿರುವ ವಿಐಎಸ್ಎಲ್ ಪ್ರಾಣ ಉಳಿಸುವ ಜವಾಬ್ದಾರಿಯುತ ಕರ್ತವ್ಯದ ಋಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ.
(ಲೇಖನ: ಕೋ.ಶ್ರೀ. ಸುಧೀಂದ್ರ, ಭದ್ರಾವತಿ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post