ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಅನ್ನದಾತರ ಹಾಗೂ ಜನ ಸಾಮಾನ್ಯರ ಜೀವನಾಡಿಯಾದ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಅತಿ ಹೆಚ್ಚಿನ ವರ್ಷಧಾರೆಯ ಕಾರಣ ಭದ್ರೆಯು ತನ್ನ ಗತ ವೈಭವವನ್ನು ಮರಳಿ ಪಡೆದಿರುವ ಕಾರಣ ಅಚ್ಚುಕಟ್ಟು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು.
ತಾಲ್ಲೂಕಿನ ಭದ್ರಾ ಜಲಾಶಯಕ್ಕೆ ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಭೇಟಿ ನೀಡಿ ಮಾತನಾಡಿದರು.
ಕಳೆದ 15 ದಿನಗಳ ಹಿಂದೆ ಎಡ ಮತ್ತು ಬಲ ನಾಲೆಗಳಿಗೆ ನೀರು ಹರಿಸುವ ಸಂಬಂಧ ನಡೆಸಿದ ನೀರಾವರಿ ಸಲಹ ಸಮಿತಿ ಸಭೆಯಲ್ಲಿ ವ್ಯಕ್ತಪಡಿಸಿದ ಆತಂಕ ಈಗ ದೂರವಾಗಿದೆ. ಪ್ರತಿ ಬಾರಿ ಜಲಾಶಯ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗಿರುವುದು ವಾಡಿಕೆ, ಆದರೆ ಈ ಬಾರಿ ಒಂದು ತಿಂಗಳು ಮುಂಚೆ ಜಲಾಶಯ ತುಂಬಿರುವುದು ಒಂದು ವಿಶೇಷ ದಾಖಲೆಯಾಗಿದೆ ಎಂದರು.
ಈ ಬಾರಿಯು ಬೇಸಿಗೆ ಬೆಳೆಗೆ ನೀರು ಲಭ್ಯವಾಗುವುದರಲ್ಲಿ ಅನುಮಾನವಿಲ್ಲ, ಕಳೆದ ಬಾರಿ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ಹರಿಸಿದಂತೆ ಮುಂಗಾರು ಬೆಳೆಗಳಿಗೆ ಕೂಡ ನೀರು ಹರಿಸುತ್ತೇವೆ ನಾನು ಅಧಿಕಾರದಲ್ಲಿ ಇರುವವರೆಗೆ ರೈತರಿಗೆ ನೀರಿನ ವಿಚಾರದಲ್ಲಿ ತೊಂದರೆ ಆಗಲ ಬಿಡುವುದಿಲ್ಲ ಎಂದು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ವಿನಾಯಕ್, ಅಧೀಕ್ಷಕ ಅಭಿಯಂತರರು ಚಂದ್ರಹಾಸ್, ಕಾರ್ಯಪಾಲಕ ಅಭಿಯಂತರರಾದ ರವಿ ಚಂದ್ರ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವೆಂಕಟೇಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post