ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಅವರ 12ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ನಗರದ ವಿವಿಧೆಡೆ ಅಭಿಮಾನಿಗಳು ಹಾಗು ವಿವಿಧ ಸಂಘಟನೆಗಳಿಂದ ಏರ್ಪಡಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯ ಯಶಸ್ವಿಯಾಗಿ ನೆರವೇರಿತು.
ಕನಕ ಆಟೋ ನಿಲ್ದಾಣ :
ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಕನಕ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು, ಪುನೀತ್ ರಾಜ್ಕುಮಾರ್ ಅಭಿಮಾನಿಗಳು, ಹಿತೈಷಿಗಳು, ಸ್ಥಳೀಯರು ಹಲವು ಕಾರ್ಯಕ್ರಮಗಳೊಂದಿಗೆ ಪುಣ್ಯ ಸ್ಮರಣೆ ನಡೆಸಿದರು.
ಸುಮಾರು 1000 ಮಂದಿಗೆ ಭೋಜನ ವಿತರಣೆ ಹಾಗೂ ಸ್ವರ ಸಂಗೀತ, ಪುಷ್ಪನಮನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಅಭಿಮಾನಿಗಳು, ಹಿತೈಷಿಗಳು ಹಾಗು ಸ್ಥಳೀಯರ ಸಹಕಾರದಿಂದ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಇದುವರೆಗೂ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪುನೀತ್ ರಾಜ್ಕುಮಾರ್ ಅವರ ಆಶಯದಂತೆ ನೇತ್ರದಾನ ನೋಂದಾಣಿ ಕಾರ್ಯಕ್ರಮ ಸಹ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಕನಕ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದರು.
ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತ :
ನಗರಸಭೆ ವ್ಯಾಪ್ತಿಯ ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಯುವಕರ ಸಂಘ, ಪುನೀತ್ರಾಜ್ಕುಮಾರ್ ಅಭಿಮಾನಿಗಳು ಹಾಗು ಸ್ಥಳೀಯರು ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ ವಿನಯ್ ಹಾಗು ಶಿವಕುಮಾರ್ ನೇತೃತ್ವದಲ್ಲಿ 12ನೇ ದಿನದ ಪುಣ್ಯಸ್ಮರಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
ಅಭಿಮಾನಿಗಳು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತ್ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಬೋಜನ ವಿತರಣೆ ಮಾಡಲಾಯಿತು.
ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ, ಪುನೀತ್ರಾಜ್ಕುಮಾರ್ ಅಭಿಮಾನಿ ವಿನಯ್ ಮಾತನಾಡಿ, ಪುನೀತ್ರಾಜ್ ಕುಮಾರ್ ಅವರ ಸೇವಾ ಕಾರ್ಯಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿವೆ. ಮುಂದಿನ ದಿನಗಳಲ್ಲಿ ಅವರ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post