ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ರಾಜಕಾರಣದಲ್ಲಿ 4 ದಶಕಗಳ ಕಾಲ ತಮ್ಮದೇ ಆದ ವಿಶಿಷ್ಟವಾದ ಛಾಪನ್ನು ಮೂಡಿಸಿದ್ದ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಷ್ಠೆಯೊಂದಿಗೆ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ದಿ.ಎಂ.ಜೆ ಅಪ್ಪಾಜಿ ಗೌಡ ಅವರ 1ನೇ ವರ್ಷದ ಪುಣ್ಯ ಸ್ಮರಣೆಗಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅವರ ಪ್ರತಿಮೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲಿದೆ ಎನ್ನಲಾಗಿದೆ.
ಕಲಾವಿದರ ಕೌಶಲ್ಯ ಅಪ್ಪಾಜಿಯವರ ನೈಜತೆಯನ್ನು ಪ್ರತಿಮೆಯಲ್ಲಿ ಎದ್ದು ಕಾಣುವಂತೆ ಮಾಡಿದ್ದು, ಆಕರ್ಷಕವಾದ ಪ್ರತಿಮೆ ಎಲ್ಲರನ್ನು ಬೆರಗುಗೊಳಿಸುತ್ತಿದೆ. ಕಳೆದ 2-3 ದಿನಗಳಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳಲಿರುವ ಅಪ್ಪಾಜಿಯವರ ಪ್ರತಿಮೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದ್ದು, ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಪ್ರೊಪೈಲ್ನಲ್ಲಿ ಹಂಚಿಕೊಂಡಿದ್ದಾರೆ.
ಸೆ.2ರಂದು ರಾತ್ರಿ ಅಕಾಲಿಕವಾಗಿ ಮರಣ ಹೊಂದಿದ್ದ ಅಪ್ಪಾಜಿ ಗೌಡರ ಅಂತ್ಯಕ್ರಿಯೆ ತಾಲೂಕಿನ ಗೋಣಿಬೀಡಿನ ಅವರ ತೋಟದಲ್ಲಿ ನೆರವೇರಿಸಲಾಗಿತ್ತು. 1ನೇ ವರ್ಷದ ಪುಣ್ಯ ಸ್ಮರಣೆಯಂದು ಅವರ ಪ್ರತಿಮೆ ಇದೆ ಸ್ಥಳದಲ್ಲಿ ಅನಾವರಣಗೊಳ್ಳಲಿದ್ದು, ಅಪ್ಪಾಜಿ ಕುಟುಂಬ ವರ್ಗದವರು ಈ ಪ್ರತಿಮೆ ನಿರ್ಮಿಸುತ್ತಿದೆ. ಪ್ರತಿಮೆ ಹಾಗು ವೇದಿಕೆ ಸೇರಿ ಒಟ್ಟು ವೆಚ್ಚ 40 ಲಕ್ಷ ರೂ. ಅಂದಾಜಿಸಲಾಗಿದ್ದು, ಪ್ರಸ್ತುತ 25 ಲಕ್ಷ ರೂ. ವ್ಯಯ ಮಾಡಿ ಪ್ರತಿಮೆಯನ್ನು ಮಾತ್ರ ಅನಾವರಣಗೊಳಿಸಲಾಗುವುದು ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post